ಮೇ 23ರಂದು ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆ ಜಾರಿ
ಬೆಂಗಳೂರು, ಮೇ 09 : ಬೆಂಗಳೂರು ನಗರದಲ್ಲಿ ಮೇ 23ರಂದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಲೋಕಸಭಾ ಚುನಾವಣೆ ಮತ ಎಣಿಕೆ ನಡೆಯುವ ಕಾರಣದಿಂದಾಗಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು ಗುರುವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ. ಮೇ 23ರ ಗುರುವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ಗಂಟೆ ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮೌಂಟ್ ಕಾರ್ಮಲ್ ಮಹಿಳಾ ಪಿ.ಯು.ಕಾಲೇಜು, ಪ್ಯಾಲೇಸ್ ರಸ್ತೆ ಮತ್ತು ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ವಿಠಲ್ ಮಲ್ಯ ರಸ್ತೆ, ಎಸ್.ಎಸ್.ಎಂ.ಆರ್.ವಿ ಕಾಲೇಜು 4ನೇ ಬ್ಲಾಕ್, ಜಯನಗರ ಇಲ್ಲಿ ಲೋಕಸಭಾ ಚುನಾವಣಾ ಮತ ಎಣಿಕೆ ನಡೆಯಲಿದೆ.

ಈ ಸಮಯದಲ್ಲಿ ಸಮಾಜಘಾತುಕ ವ್ಯಕ್ತಿಗಳು, ಕೆಲವು ಕಿಡಿಗೇಡಿಗಳು, ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ಪರ/ವಿರುದ್ಧ ಪ್ರತಿಭಟನೆ ನಡೆಸಿ, ಕಾನೂನು ಸುವ್ಯವಸ್ಥೆಗೆ ಭಂಗ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟು ಮಾಡುವ ಸಾಧ್ಯತೆ ಇದೆ.
'ಉಪ ಪೊಲೀಸ್ ಆಯುಕ್ತರು ಗುಪ್ತವಾರ್ತೆ ಬೆಂಗಳೂರು ನಗರ ಅವರು ಈ ಕುರಿತು ವರದಿ ನೀಡಿದ್ದಾರೆ. ಈ ಕುರಿತು ಖುದ್ದಾಗಿ ಮಾಡಿದ ವಿಚಾರಣೆಯಿಂದಾಗಿ ಸಾಕಷ್ಟು ಸತ್ಯಾಂಶ ಇದೆಯೆಂದು ತಿಳಿದುಬಂದಿದೆ' ಎಂದು ಪೊಲೀಸ್ ಆಯುಕ್ತರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಏನು ಮಾಡಬಾರದು?
* ಕಾನೂನು ಭಂಗ ಮಾಡುವ ಉದ್ದೇಶದಿಂದ 5 ಅಥವ ಅದಕ್ಕಿಂತ ಹೆಚ್ಚಿನ ಜನರು ಗುಂಪು ಸೇರುವಂತಿಲ್ಲ
* ಮೆರವಣಿಗೆ ಮತ್ತು ಸಭೆ ನಡೆಸುವಂತಿಲ್ಲ (ಶವ ಸಂಸ್ಕಾರ, ಮದುವೆ ಮೆರವಣಿಗೆ ಹೊರತುಪಡಿಸಿ)
* ದೊಣ್ಣೆ, ಕತ್ತಿ, ಈಟಿ, ಗದೆ ಮುಂತಾದ ಮಾರಕಾಸ್ತ್ರಗಳನ್ನು ಅಥವ ದೈಹಿಕ ಹಿಂಸೆ ಉಂಟು ಮಾಡುವ ವಸ್ತು ಒಯ್ಯುವಂತಿಲ್ಲ.
* ಯಾವುದೇ ಸಂರಕ್ಷಾರ್ಹ ಪದಾರ್ಥ ಅಥವ ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು, ಕ್ಷಿಪಣಿಗಳನ್ನು ಎಸೆಯುವ ಸಾಧನಗಳ ಅಥವ ಉಪಕರಣಗಳ ಒಯ್ಯವಿಕೆ ಮತ್ತು ಶೇಖರಿಸಬಾರದು.
* ವ್ಯಕ್ತಿಗಳ ಅಥವ ಅವರ ಶವಗಳ ಪ್ರತಿಕೃತಿ ಪ್ರದರ್ಶನ ಮಾಡುವುದು, ಪ್ರಚೋದಿಸಬಹುದಾದದ ಬಹಿರಂಗ ಘೋಷಣೆಗಳನ್ನುಕೂಗುವುದನ್ನು, ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು ಮುಂತಾದವುಗಳನ್ನು ನಿಷೇಧಿಸಲಾಗಿದೆ.
ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಿವೆ. ಏಪ್ರಿಲ್ 18ರಂದು ಚುನಾವಣೆ ನಡೆದಿತ್ತು.











Click it and Unblock the Notifications