ಬೆಂಗಳೂರು : ಕೆ.ಆರ್.ಪುರಂ ಬಳಿ ಖಾಸಗಿ ಬಸ್ಗೆ ಬೆಂಕಿ
ಬೆಂಗಳೂರು, ಡಿ.2 : ಬೆಂಗಳೂರಿನ ಕೆ.ಆರ್.ಪುರಂ ಬಳಿ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡಿದ್ದು, ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ಸಿನ ಮುಂಭಾಗ ಮೊದಲು ಬೆಂಕಿ ಹೊತ್ತಿಕೊಂಡಿದ್ದು ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ.
ಕೋಲಾರದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಗೆ ಮಂಗಳವಾರ ಮಧ್ಯಾಹ್ನ ಕೆ.ಆರ್.ಪುರಂ ಸರ್ಕಾರಿ ಕಾಲೇಜು ಬಳಿ ಬೆಂಕಿ ಹೊತ್ತಿಕೊಂಡಿದೆ. ಬಸ್ಗೆ ಅಡ್ಡವಾಗಿ ದ್ವಿಚಕ್ರ ವಾಹನ ಎದುರಾಗಿದೆ. ಇದನ್ನು ತಪ್ಪಿಸಲು ಯತ್ನಿಸಿದ ಚಾಲಕ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ತಕ್ಷಣ ಬಸ್ಸಿನ ಮುಂಭಾಗಕ್ಕೆ ಬೆಂಕಿ ಹೊತ್ತಿಕೊಂಡಿದೆ.

6 ಅಗ್ನಿ ಶಾಮಕ ದಳಗಳು ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಅಪಘಾತದಿಂದಾಗಿ ಕೆ.ಆರ್.ಪುರಂ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬಸ್ಸಿನ ಬೆಂಕಿ ನಂದಿಸಿದ ತಕ್ಷಣ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ.
ಅಪಘಾತ ನಡೆದದ್ದು ಹೇಗೆ : ಕೋಲಾರದಿಂದ ಬರುತ್ತಿದ್ದ ಶ್ರೀ ಕೃಷ್ಣ ಟ್ರಾವೆಲ್ಸ್ಗೆ ಸೇರಿದ ಬಸ್ಗೆ ಮೂವರು ಸವಾರರಿದ್ದ ಬೈಕ್ ಎದುರಾಗಿದೆ ಅವರನ್ನು ರಕ್ಷಿಸಲು ಹೋದ ಬಸ್ ಚಾಲಕ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ನಿಯಂತ್ರಣ ತಪ್ಪಿದ ಬೈಕ್ ಬಸ್ಸಿನ ಅಡಿ ಸಿಲುಕಿದೆ.
ಬೈಕ್ಗೆ ಮೊದಲು ಹೊತ್ತಿಕೊಂಡ ಬೆಂಕಿ ನಂತರ ಬಸ್ಸಿಗೆ ಹಬ್ಬಿದೆ. ಬೈಕ್ನಲ್ಲಿದ್ದ ಮೂವರು ಬಸ್ ಕೆಳಗೆ ಸಿಲುಕಿದ್ದು, ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದು ತಿಳಿಯುತ್ತಿದ್ದಂತೆಯೇ ಬಸ್ಸಿನಲ್ಲಿದ್ದವರು ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಮುಂಜಾನೆ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಗೆ ಉಪ್ಪಿನಂಗಡಿ ಬಳಿ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು. [ಮಂಗಳೂರು ಬಸ್ ದುರಂತದ ಚಿತ್ರಗಳು]












Click it and Unblock the Notifications