ವಿಷ್ಣು ಕಾರು ಅಪಘಾತ ಪ್ರಕರಣ: ಪ್ರಣಾಮ್ ದೇವರಾಜ್ ವಿಚಾರಣೆ
ಬೆಂಗಳೂರು, ಅಕ್ಟೋಬರ್ 2: ಉದ್ಯಮಿ ಆದಿಕೇಶವಲು ಅವರ ಮೊಮ್ಮಗ ವಿಷ್ಣು ಕಾರು ಅಪಘಾತ ಪ್ರಕರಣಕ್ಕೆ ಅದೆಷ್ಟು ಕೊವೆಗಳಿವೆಯೋ, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ನಟ ದೇವರಾಜ್ ಅವರ ಎರಡನೇ ಮಗ ಪ್ರಣಾಮ್ ಗೆ ನೋಟಿಸ್ ಜಾರಿ ಮಾಡಿದ ಬೆಂಗಳೂರು ಪೊಲೀಸರು, ಆತನ ವಿಚಾರಣೆ ನಡೆಸಿದ್ದಾರೆ.
ಪೊಲೀಸರ ವಿಚಾರಣೆ ಬಗ್ಗೆ ಮಾಧ್ಯಮಗಳಿಗೆ ಸೋಮವಾರ ಮಾಹಿತಿ ನೀಡಿದ ಪ್ರಣಾಮ್, "ಅಪಘಾತ ಸ್ಥಳಕ್ಕೆ ಹೋಗಿದ್ದು ನಿಜ. ಆದರೆ ಆ ಬಗ್ಗೆ ನನಗೆ ಸ್ನೇಹಿತರು ಫೋನ್ ಮಾಡಿ ತಿಳಿಸಿದ ನಂತರ ಸ್ಥಳಕ್ಕೆ ಹೋಗಿದ್ದಷ್ಟೇ. ವಿಷ್ಣು ನನ್ನ ಸ್ನೇಹಿತ ಅನ್ನೋದು ನಿಜ. ನನಗೆ ನೋಟಿಸ್ ಬಂದಿದ್ದರಿಂದ ಠಾಣೆಗೆ ಬಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇನೆ" ಎಂದಿದ್ದಾರೆ.

ಈಚೆಗೆ ಸೌತ್ ಎಂಡ್ ಸರ್ಕಲ್ ಬಳಿ ವಿಷ್ಣು ಕಾರು ಅಪಘಾತ ಮಾಡಿದ್ದ. ಈ ವೇಳೆ ಆತನ ಜತೆಗೆ ಕೆಲವು ಗೆಳೆಯ-ಗೆಳತಿಯರಿದ್ದರು. ಕನ್ನಡ ಚಿತ್ರರಂಗದ ನಟರೂ ಇದ್ದರು ಎಂಬುದು ಸುದ್ದಿಯಾಗಿತ್ತು. ಈ ವೇಳೆ ಕಾರಿನಲ್ಲಿ ಇದ್ದವರೆಲ್ಲರೂ ಮಾದಕ ವಸ್ತು ಸೇವಿಸಿದ್ದರು ಎಂದು ಕೂಡ ಮಾಹಿತಿ ಲಭಿಸಿತ್ತು. ಮೊದಲಿಗೆ ನಟರಾದ ದಿಗಂತ್ ಹಾಗೂ ಪ್ರಜ್ವಲ್ ದೇವರಾಜ್ ಹೆಸರು ಕೇಳಿಬಂದಿತು.
ಇದೀಗ ಅಪಘಾತ ಸ್ಥಳದಲ್ಲಿ ಕಾಣಿಸಿಕೊಂಡಿದ್ದ ಪ್ರಣಾಮ್ ಗೆ ಪೊಲೀಸರು ನೋಟಿಸ್ ಜಾರಿ ಮಾಡಿ, ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ ಆಸ್ಪತ್ರೆಯಲ್ಲಿದ್ದ ವಿಷ್ಣು ತಲೆ ತಪ್ಪಿಸಿಕೊಂಡಿದ್ದಾನೆ.











Click it and Unblock the Notifications