ಕರ್ನಾಟಕ ಚುನಾವಣೆ ಬಗ್ಗೆ ಮಹತ್ವದ ಸುಳಿವು ನೀಡಿದ ಪ್ರಕಾಶ್ ರೈ
ಬೆಂಗಳೂರು, ಏಪ್ರಿಲ್ 20: ಯಾವುದೇ ಪಕ್ಷದ ಜೊತೆಗೆ ಗುರುತಿಸಿಕೊಳ್ಳದಿದ್ದರೂ ರಾಜಕೀಯದಲ್ಲಿ ಸಕ್ರಿಯರಾಗೇ ಇರುವ ನಟ ಪ್ರಕಾಶ್ ರೈ ಅವರು ಕರ್ನಾಟಕ ಚುನಾವಣೆ ಬಗ್ಗೆ ಮಹತ್ವದ ಸುಳಿವೊಂದನ್ನು ಇಂದು ನೀಡಿದರು.
ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಸುದ್ದಿಗಾರರ ಪ್ರಶ್ನೆಗಳನ್ನು ಎದುರಿಸುತ್ತಿದ್ದ ಪ್ರಕಾಶ್ ರೈಗೆ , ಇತ್ತೀಚೆಗೆ ತಾನೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಅವರ ಜೊತೆಗೆ ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ್ದರ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು.
ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ ಅವರು, 'ಜನತಾ ದಳ ಪಕ್ಷವು ಕೋಮುವಾದಿ ಪಕ್ಷದ ಜೊತೆ ಸೇರಲು ಹೊರಟಿದೆ ಎಂಬ ಸುದ್ದಿ ಹರಡಿತ್ತು ಅದನ್ನು ಸ್ಪಷ್ಟಪಡಿಸಿಕೊಳ್ಳೋಣವೆಂದು ನಾನು ಹೋಗಿದ್ದೆ, ಜೊತೆಗೆ ಕೆಸಿಆರ್ ಅವರು ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷಗಳ ಒಕ್ಕೂಟ ಅಧಿಕಾರ ಹಿಡಿಯಬೇಕೆಂಬ ಮಹದಾಸೆಯಿಂದ ತೃತೀಯ ರಂಗ ರಚನೆ ಮಾಡಲು ಪ್ರಯತ್ನಿಸುತ್ತಿದ್ದು ನನಗೂ ಈ ಕುರಿತು ಆಸಕ್ತಿ ಇರುವ ಕಾರಣ ಅವರ ಜೊತೆ ಹೋದೆ' ಎಂದರು.
ಆ ಮೂಲಕ ಜನತಾದಳ ಪಕ್ಷವು ಬಿಜೆಪಿ ಜೊತೆ ಹೋಗುವುದಿಲ್ಲವೆಂಬ ಸುಳಿವನ್ನು ಪ್ರಕಾಶ್ ರೈ ಅವರು ನೀಡಿದರು. ಅವರ ಪ್ರಕಾರ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೇ ತಾವು ಬಿಜೆಪಿ ಜತೆ ಹೋಗುವುದಿಲ್ಲ ಎಂದು ಹೇಳಿದ್ದಾರಂತೆ.
ಕೆಸಿಆರ್ ಅವರು ಪ್ರಯತ್ನಿಸುತ್ತಿರುವ ತೃತೀಯ ರಂಗದ ಬಗ್ಗೆಯೂ ಮಾತನಾಡಿದ ಅವರು 'ಪ್ರತಿಯೊಂದಕ್ಕೂ ರಾಜ್ಯಗಳು ಕೇಂದ್ರದ ಮುಂದೆ ಕೈಕಟ್ಟಿಕೊಂಡು ನಿಲ್ಲಬೇಕಾದ ಸ್ಥಿತಿ ಈಗ ಇದೆ. ಅದೇ ಪ್ರಾದೇಶಿಕ ಪಕ್ಷಗಳೇ ಕೇಂದ್ರದಲ್ಲಿಯೂ ಅಧಿಕಾರಕ್ಕೆ ಇದ್ದರೆ ಈ ಸ್ಥಿತಿಯಿಂದ ಮುಕ್ತಿ ಸಿಗುತ್ತದೆ, ಅದಕ್ಕಾಗಿ ಕೆಸಿಆರ್ ಅವರು ಈ ಪ್ರಯತ್ನದಲ್ಲಿ ನಿರತರಾಗಿದ್ದಾರೆ ಎಂದರು.