ಬೆಂಗಳೂರಲ್ಲಿ ರಸ್ತೆ ಗುಂಡಿ ಅವಘಡ: ಎಫ್ಐಆರ್ ದಾಖಲಿಸಿ ತನಿಖೆಗೆ ಆದೇಶ
ಬೆಂಗಳೂರು, ಡಿಸೆಂಬರ್ 16; ಬೆಂಗಳೂರು ಮಹಾನಗರದಲಿ ರಸ್ತೆ ಗುಂಡಿಗಳ ಕಾರಣಕ್ಕೆ ಸಂಭವಿಸುವ ಅಪಘಾತಗಳಲ್ಲಿ ಇನ್ನು ಪೊಲೀಸರು ಸಬೂಬು ಹೇಳದೆ ಎಫ್ಐಆರ್ ದಾಖಲು ಮಾಡಬೇಕು ಮತ್ತು ತನಿಖೆಯನ್ನೂ ಮಾಡಬೇಕು. ಏಕೆಂದರೆ ಈ ಕುರಿತಂತೆ ಹೈಕೋರ್ಟ್ ಕಟ್ಟಾಜ್ಞೆ ಹೊರಡಿಸಿದೆ.
ಗುಂಡಿಗಳಿಂದಾಗಿ ಸಾವು-ನೋವು ಉಂಟಾದಾಗ ಆ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಲು ಮುಂದಾದರೆ ಯಾವುದೇ ತಾಂತ್ರಿಕ ಕಾರಣಗಳನ್ನು ನೀಡದೆ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಬೇಕು ಎಂದು ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ಕೋರಮಂಗಲದ ವಿಜಯ್ ಮೆನನ್ ಬೆಂಗಳೂರಿನ ರಸ್ತೆಗಳ ದುಸ್ಥಿತಿ ಸಂಬಂಧ 2005ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯಪೀಠ ವಿಚಾರಣೆ ನಡೆಸಿಗತು. ನಂತರ ಪೊಲೀಸರಿಗೆ ಈ ನಿರ್ದೇಶನ ನೀಡಿತಲ್ಲದೆ, ಅರ್ಜಿಯಲ್ಲಿ ಗೃಹ ಇಲಾಖೆಯನ್ನೂ ಪ್ರತಿವಾದಿಯನ್ನಾಗಿಸುವಂತೆ ಅರ್ಜಿದಾರರಿಗೆ ಸೂಚಿಸಿತು.

ತಾಂತ್ರಿಕ ಕಾರಣ ನೀಡಬೇಡಿ: ವಿಚಾರಣೆ ವೇಳೆ ರಸ್ತೆಗುಂಡಿಯಿಂದ ಸಂಭವಿಸಿದ ಅಪಘಾತದ ಕುರಿತು ದೂರು ನೀಡಲು ಸಾರ್ವಜನಿಕರು ಪೊಲೀಸ್ ಠಾಣೆಗೆ ತೆರಳಿದಾಗ ಪೊಲೀಸರು ಪ್ರತಿಕ್ರಿಯಿಸದಿರುವುದು ಮತ್ತು ದೂರು ದಾಖಲಿಸದ ಕುರಿತಾದ ಮಾಧ್ಯಮ ವರದಿಗಳನ್ನು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.
ಆಗ ನ್ಯಾಯಪೀಠ, ಗುಂಡಿ ಇರುವ ರಸ್ತೆಗಳು ಮತ್ತು ರಸ್ತೆಗಳ ಕಳಪೆ ನಿರ್ವಹಣೆಯಿಂದ ಸಾರ್ವಜನಿಕರಿಗೆ ಗಂಭೀರ ಗಾಯ ಅಥವಾ ಸಾವು ಸಂಭವಿಸಿರುವ ಕುರಿತು ದೂರು ನೀಡಲು ಸಾರ್ವಜನಿಕರು ಮುಂದಾದರೂ ಬಹುತೇಕ ಸಂದರ್ಭದಲ್ಲಿಪೊಲೀಸರು ಎಫ್ಐಆರ್ ದಾಖಲಿಸಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ, ಇಂಥ ಘಟನೆಗಳು ಸಂಭವಿಸಿದಾಗ ಸಾರ್ವಜನಿಕರು ಸಂಬಂಧಪಟ್ಟ ಠಾಣೆಯಲ್ಲಿದೂರು ನೀಡಬಹುದಾಗಿದೆ. ದೂರು ಸಲ್ಲಿಸಲು ಬರುವವರನ್ನು ಪೊಲೀಸ್ ಅಧಿಕಾರಿಗಳು ಯಾವುದೇ ತಾಂತ್ರಿಕ ಕಾರಣಗಳನ್ನು ನೀಡಿ ವಾಪಸ್ ಕಳುಹಿಸಬಾರದು. ದೂರು ಆಧರಿಸಿ, ಎಫ್ಐಆರ್ ದಾಖಲಿಸಿ ತನಿಖೆ ಮುಂದುವರಿಸಬೇಕು ಎಂದು ಪೊಲೀಸರಿಗೆ ನಿರ್ದೇಶಿಸಿತು.

ವರದಿಗೆ ಸೂಚನೆ: ಅರ್ಜಿಯ ಕಳೆದ ವಿಚಾರಣೆ ವೇಳೆ ಹೈಕೋರ್ಟ್, ರಸ್ತೆಗುಂಡಿ ಭರ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯ ಹಲವು ನಿರ್ದೇಶನಗಳನ್ನು ನೀಡುತ್ತಾ ಬಂದಿದ್ದರೂ, ಯಾವುದೇ ಧನಾತ್ಮಕ ಫಲಿತಾಂಶ ದೊರೆತಿಲ್ಲ. ಬಿಬಿಎಂಪಿ ಸಲ್ಲಿಸಿರುವ ಅನುಪಾಲನಾ ವರದಿ ಪ್ರಕಾರ ರಸ್ತೆ ಕಾಮಗಾರಿಗಳು ಮತ್ತು ರಸ್ತೆಗುಂಡಿ ಭರ್ತಿ ಕೆಲಸಗಳನ್ನು ಬಹುತೇಕ ಖಾಸಗಿ ಗುತ್ತಿಗೆದಾರರಿಗೆ ನೀಡಲಾಗಿದೆ.
ಅವರು ನಡೆಸಿರುವ ಕಾಮಗಾರಿ ತೃಪ್ತಿಕರವಾಗಿದೆಯೇ ಎಂಬ ಬಗ್ಗೆ ಸ್ವತಂತ್ರ ಅಧ್ಯಯನ ನಡೆಸಿಲ್ಲ. ಆದ್ದರಿಂದ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಪ್ರಾದೇಶಿಕ ಅಧಿಕಾರಿಯು ಖಾಸಗಿ ಗುತ್ತಿಗೆದಾರರ ಮುಖಾಂತರ ಪಾಲಿಕೆ ಕಾಮಗಾರಿ ನಡೆಸಿರುವ ರಸ್ತೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸಬೇಕು ನಿರ್ದೇಶಿಸಿತ್ತು.
ನ್ಯಾಯಾಲಯದ ನಿರ್ದೇಶನದಂತೆ ರಸ್ತೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ನೆರವಾಗುವಂತೆ ಲೋಕೋಪಯೋಗಿ ಇಲಾಖೆಯ ಎರಡು ಗುಣಮಟ್ಟ ನಿಯಂತ್ರಣ ತಂಡಗಳನ್ನು ನೇಮಕ ಮಾಡಬೇಕು ಎಂದು ಸಹಾಯಕ ಹೆಚ್ಚುವರಿ ಸಾಲಿಸಿಟರ್ ಜನರಲ್ ಮನವಿ ಮಾಡಿದರು. ಅದನ್ನು ಪರಿಗಣಿಸಿದ ಪೀಠ, ಡಿ.23ರೊಳಗೆ ಅಗತ್ಯ ಸಹಕಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ಮುಂದಿನ 6 ವಾರಗಳ ಒಳಗೆ ರಸ್ತೆಗುಂಡಿ ಮುಚ್ಚುವ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ, ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಫೆ.6ಕ್ಕೆ ಮುಂದೂಡಿತು.
ಅಲ್ಲದೆ, ನ್ಯಾಯಾಲಯ ರಸ್ತೆಗುಂಡಿಯಿಂದ ಸಂಭವಿಸುವ ಅಪಘಾತಗಳಲ್ಲಿಗಾಯಗೊಂಡವರಿಗೆ ಪರಿಹಾರ ಪಾವತಿಸುವ ಜವಾಬ್ದಾರಿ ಪಾಲಿಕೆಯದಾಗಿದೆ. ಆದ್ದರಿಂದ, ಪರಿಹಾರ ಕೋರಿ ಈವರೆಗೆ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ, ಅವುಗಳಲ್ಲಿಎಷ್ಟು ಜನರಿಗೆ ಪರಿಹಾರ ಕಲ್ಪಿಸಲಾಗಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡಬೇಕೆಂದು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶಿಸಿತು.












Click it and Unblock the Notifications