ಬಾಲಿವುಡ್ ನಟ ದಿಲೀಪ್ ಕುಮಾರ್ ನಿಧನಕ್ಕೆ ರಾಜಕಾರಣಿಗಳ ಸಂತಾಪ
ಬೆಂಗಳೂರು, ಜುಲೈ 7: ಹಿಂದಿ ಚಿತ್ರರಂಗದ ದಿಗ್ಗಜ ನಟ ದಿಲೀಪ್ ಕುಮಾರ್ ಬುಧವಾರ (ಜುಲೈ 7) ಬೆಳಗ್ಗೆ 7.30ಕ್ಕೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
98 ವರ್ಷ ವಯಸ್ಸಿನ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಬಹುಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ದಿಲೀಪ್ರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿಲೀಪ್ ಕುಮಾರ್ ಸಾವಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ರಾಜಕೀಯ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮೇರುನಟ ದಿಲೀಪ್ ಕುಮಾರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ಬಾಲಿವುಡ್ ಮೇರು ನಟ ದಿಲೀಪ್ ಕುಮಾರ್ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಶೋಕ ವ್ಯಕ್ತಪಡಿಸಿದ್ದು, "ಅವರ ಅಗಲಿಕೆಯಿಂದ ಸಾಂಸ್ಕೃತಿಕ ಜಗತ್ತಿಗೆ ದೊಡ್ಡ ನಷ್ಟವಾಗಿದೆ,'' ಎಂದು ತಿಳಿಸಿದ್ದಾರೆ.

ಟ್ವೀಟ್ನಲ್ಲಿ ಪ್ರಧಾನಮಂತ್ರಿ, "ದಿಲೀಪ್ ಕುಮಾರ್ರನ್ನು ಸಿನಿಮಾದ ದಂತಕತೆ ಎಂದು ಸ್ಮರಿಸಲಾಗುತ್ತದೆ. ಅವರು ಎಣೆಯಿಲ್ಲದ ಚುರುಕುತನದಿಂದ ಹರಸಲ್ಪಟ್ಟಿದ್ದರು, ಈ ಕಾರಣದಿಂದಾಗಿಯೇ ತಲೆಮಾರುಗಳ ಪ್ರೇಕ್ಷಕರು ಸಮ್ಮೋಹನಗೊಂಡಿದ್ದರು. ಅವರ ನಿಧನದಿಂದ ನಮ್ಮ ಸಾಂಸ್ಕೃತಿಕ ಜಗತ್ತಿಗೆ ನಷ್ಟವಾಗಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಮತ್ತು ಆತ್ಮಕ್ಕೆ ಶಾಂತಿ ಸಿಗಲಿ,'' ಎಂದು ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ಸಂತಾಪ
ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ದಶಕಗಳ ಕಾಲ ತಮ್ಮ ಅಭಿನಯ ಪ್ರತಿಭೆಯಿಂದ ಚಿತ್ರರಂಗದ ದಿಗ್ಗಜ ಸ್ಥಾನಕ್ಕೇರಿದ್ದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಪದ್ಮವಿಭೂಷಣ ದಿಲೀಪ್ ಕುಮಾರ್ ಅವರ ನಿಧನದಿಂದ ಯುಗವೊಂದು ಅಂತ್ಯವಾದಂತಾಗಿದೆ,'' ಎಂದು ಟ್ವೀಟ್ ಮಾಡಿದ್ದಾರೆ.

"ದಿಲೀಪ್ ಕುಮಾರ್ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ, ಅಸಂಖ್ಯಾತ ಅಭಿಮಾನಿಗಳಿಗೆ ಆ ಮಹಾನ್ ಕಲಾವಿದನನ್ನು ಕಳೆದುಕೊಂಡ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ,'' ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
Recommended Video
ಮಾಜಿ ಪ್ರಧಾನಿ ದೇವೇಗೌಡ ಸಂತಾಪ
"ಹಿಂದಿಯ ಹಿರಿಯ ನಟ ದಿಲೀಪ್ ಸಾಬ್ ನಿಧನದಿಂದ ತೀವ್ರ ದುಃಖವಾಗಿದೆ. ಸೈರಾ ಭಾನುಜಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಅವರು ನನಗೆ ನಮ್ಮ ದೇಶದ ಅತ್ಯುತ್ತಮ ಜಾತ್ಯತೀತ ಸಂಪ್ರದಾಯಗಳನ್ನು ಸಂಕೇತಿಸಿದರು. ನಾನು ಯಾವಾಗಲೂ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಸುತ್ತಿದ್ದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ,'' ಎಂದು ಟ್ವೀಟ್ ಮಾಡಿದ್ದಾರೆ.
ದಿಲೀಪ್ ಕುಮಾರ್ ನಿಧನಕ್ಕೆ ನಳಿನ್ ಕುಮಾರ್ ಕಟೀಲ್ ಸಂತಾಪ
ಹಿಂದಿ ಚಿತ್ರರಂಗದ ಖ್ಯಾತ ನಟ ದಿಲೀಪ್ ಕುಮಾರ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದರೂ ಆದ ನಳಿನ್ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
"ದಿಲೀಪ್ ಕುಮಾರ್ಗೆ ಪದ್ಮಭೂಷಣ, ಪದ್ಮವಿಭೂಷಣ ಹಾಗೂ ದಾದಾಸಾಹೇಬ್ ಫಾಲ್ಕೆ ಗೌರವಗಳು ಸಂದಿವೆ. ಅವರು ರಾಜ್ಯಸಭೆಯ ಸದಸ್ಯರೂ ಆಗಿದ್ದರು. ಸುಮಾರು ಐದು ದಶಕಗಳ ಸಿನಿಮಾ ಪಯಣ ದಿಲೀಪ್ ಅವರದಾಗಿತ್ತು," ಎಂದು ನೆನಪಿಸಿದ್ದಾರೆ.
ಮೃತರ ಕುಟುಂಬ, ಬಂಧು- ಮಿತ್ರರಿಗೆ ಹಾಗೂ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ನಳಿನ್ಕುಮಾರ್ ಕಟೀಲ್ ಅವರು ಪ್ರಾರ್ಥಿಸಿದ್ದಾರೆ.












Click it and Unblock the Notifications