ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುವ ಬೆಂಗಳೂರು ಪೊಲೀಸ್!
ಬೆಂಗಳೂರು, ಸೆಪ್ಟೆಂಬರ್ 04: ಬೆಂಗಳೂರು ನಗರದ ಪೊಲೀಸ್ ಇನ್ಸ್ಪೆಕ್ಟರ್ ಬಡ ಮಕ್ಕಳಿಗೆ ಪಾಠ ಹೇಳಿ ಕೊಡುವ ಮೂಲಕ ಮಾದರಿಯಾಗಿದ್ದಾರೆ. ಮೂರರಿಂದ 7ನೇ ತರಗತಿಯ ಮಕ್ಕಳಿಗೆ ಪಾಠ ಕೇಳಿಕೊಡುತ್ತಿದ್ದು, ಪೊಲೀಸರ ಕಾರ್ಯವನ್ನು ಜನರು ಶ್ಲಾಘಿಸಿದ್ದಾರೆ.
Recommended Video
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಾಂತಪ್ಪ ಜಡಮ್ಮನವರ್ ಬಡ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಾರೆ. ಕರ್ತವ್ಯಕ್ಕೆ ಹೋಗುವ ಮುನ್ನ 3 ರಿಂದ ಏಳನೇ ತರಗತಿ ಮಕ್ಕಳಿಗೆ ಗಣಿತ ಹಾಗೂ ಸಾಮಾನ್ಯ ಜ್ಞಾನದ ವಿಷಯಗಳನ್ನು ಹೇಳಿ ಕೊಡುತ್ತಿದ್ದಾರೆ.
ಬೆಂಗಳೂರಿನ ನಾಗರಬಾವಿ ವ್ಯಾಪ್ತಿಯ ವಿನಾಯಕ ನಗರದ 9ನೇ ಬ್ಲಾಕ್ ನಲ್ಲಿರುವ ಕೊಳಗೇರಿ ಪ್ರದೇಶದಲ್ಲಿ ಶಾಂತಪ್ಪ ಜಡಮ್ಮನವರ್ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ಈ ಪ್ರದೇಶದಲ್ಲಿ ಕಟ್ಟಡ ಕಾರ್ಮಿಕರ ಕುಟುಂಬಗಳು ಹೆಚ್ಚಾಗಿವೆ.

ಸುಮಾರು ಹದಿನೈದು ದಿನಗಳಿಂದ ಶಾಂತಪ್ಪ ಜಡಮ್ಮನವರ್ ಪಾಠ ಹೇಳಿಕೊಡುವ ಕಾಯಕದಲ್ಲಿ ತೊಡಗಿದ್ದಾರೆ. "ಪ್ರತಿ ದಿನ ಠಾಣೆಗೆ ಕರ್ತವ್ಯಕ್ಕೆ ಹೋಗುವ ಮುನ್ನ ಈ ಕೆಲಸ ಮುಗಿಸಿ ಹೋಗುತ್ತೇನೆ" ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹೇಳಿದ್ದಾರೆ.
"ನಾನು ಒಬ್ಬ ಬಳ್ಳಾರಿಯ ವಲಸೆ ಕಾರ್ಮಿಕರ ಮಗ. ನನಗೆ ಈ ಕಷ್ಟ ಗೊತ್ತಿದೆ. ಅದಕ್ಕಾಗಿ ಈ ಕಾರ್ಯದಲ್ಲಿ ತೊಡಗಿದ್ದೇನೆ" ಎಂದು ಶಾಂತಪ್ಪ ಜಡಮ್ಮನವರ್ ತಿಳಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶಾಂತಪ್ಪ ಜಡಮ್ಮನವರ್ ಪಾಠ ಮಾಡುವ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಬಗ್ಗೆ ಅವರು ಫೇಸ್ ಬುಕ್ನಲ್ಲಿಯೂ ಪೋಸ್ಟ್ ಹಾಕಿದ್ದಾರೆ.












Click it and Unblock the Notifications