ಅನರ್ಹ ಶಾಸಕರ ಮುನಿರತ್ನಗೆ ಬಿಬಿಎಂಪಿ ಪ್ರವೇಶ ನಿರಾಕರಣೆ
ಬೆಂಗಳೂರು, ಅಕ್ಟೋಬರ್ 01: ಅನರ್ಹ ಶಾಸಕ ಮುನಿರತ್ನ ಅವರು ಬಿಬಿಎಂಪಿ ಕಚೇರಿ ಪ್ರವೇಶಿಸುವುದನ್ನು ನಗರ ಪೊಲೀಸರು ಬಲವಂತದಿಂದ ತಡೆದಿದ್ದಾರೆ.
ಬಿಬಿಎಂಪಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲೆಂದು ಅನರ್ಹ ಶಾಸಕ ಮುನಿರತ್ನ ಅವರು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಅವರೊಂದಿಗೆ ಬಿಬಿಎಂಪಿ ಕಚೇರಿಗೆ ಬಂದರು. ಆದರೆ ಪೊಲೀಸರು ಅವರನ್ನು ಕಚೇರಿಯ ಹೊರಗೆ ತಡೆದರು.
ಮುನಿರತ್ನ ಅವರನ್ನು ಒಳಗೆ ಬಿಡುವಂತೆ ಪೊಲೀಸರಿಗೆ ಅಶ್ವತ್ಥನಾರಾಯಣ್ ಅವರು ಹೇಳಿದರು, ಆದರೆ ಮೇಯರ್ ಆಯ್ಕೆ ನಡೆಯುತ್ತಿರುವ ಕಾರಣ ಮುನಿರತ್ನ ಅವರನ್ನು ಒಳಗೆ ಬಿಡಲಾಗದು ಎಂದು ಪೊಲೀಸರು ಅಶ್ವತ್ಥನಾರಾಯಣ್ ಅವರಿಗೆ ಮನವರಿಕೆ ಮಾಡಿಕೊಟ್ಟರು.

ತಮ್ಮನ್ನು ಒಳಗೆ ಬಿಡುವಂತೆ ಮುನಿರತ್ನ ಅವರೂ ಸಹ ಪೊಲೀಸರೊಂದಿಗೆ ಕೆಲ ಕಾಲ ಮನವಿ ಮಾಡಿದರು. ಆದರೆ ಪೊಲೀಸರು ಇದಕ್ಕೆ ಸುತಾರಾಂ ಒಪ್ಪಲಿಲ್ಲ.
ಕೆಲ ಕಾಲ ಬಿಬಿಎಂಪಿ ಕಚೇರಿ ಹೊರಗೆ ಬ್ಯಾರಿಕೆಟ್ ಬಳಿ ಪೆಚ್ಚು ಮೋರೆ ಹಾಕಿಕೊಂಡು ಕಾದ ಮುನಿರತ್ನ ನಂತರ ತಮ್ಮ ಕಾರು ತರೆಸಿಕೊಂಡು ಅಲ್ಲಿಂದ ಹೊರಟರು.
ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಬೆಂಗಳೂರಿನಲ್ಲಿ ವಾಸವಿರುವ ಜನಪ್ರತಿನಿಧಿಗಳು ಮಾತ್ರವೇ ಭಾಗವಹಿಸಬಹುದಾಗಿದೆ. ಮುನಿರತ್ನ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಶಾಸಕರಾಗಿದ್ದರು, ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿರುವ ಕಾರಣ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಅವರು ಭಾಗವಹಿಸದಾಗಿದ್ದಾರೆ.
ಬೆಂಗಳೂರಿನ ಎಲ್ಲ ಶಾಸಕರು, ಸಂಸದರು ಇಂದು ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ನೂತನ ಬಿಬಿಎಂಪಿ ಮೇಯರ್ ಆಗಿ ಬಿಜೆಪಿಯ ಗೌತಮ್ ಕುಮಾರ್ ಜೈನ್ ಆಯ್ಕೆ ಆಗಿದ್ದಾರೆ.












Click it and Unblock the Notifications