18 ಕೋಟಿ ವಂಚನೆ, ಪೊಲೀಸ್ ನೇಮಕಾತಿ ಅಧೀಕ್ಷಕ ಸೇರಿ ಐವರು ಪೊಲೀಸರ ಬಂಧನ
ಬೆಂಗಳೂರು, ಜುಲೈ 12: ಸರ್ಕಾರಿ ಕೆಲಸ ಕೊಡಿಸುತ್ತೇನೆಂದು ಹೇಳಿ ಕೋಟ್ಯಂತರ ವಂಚಿಸಿದ್ದ ತಂಡವನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಪೊಲೀಸ್ ನೇಮಕಾತಿ ಅಧೀಕ್ಷಕರನ್ನೂ ವಶಕ್ಕೆ ಪಡೆದಿದ್ದಾರೆ.
ಸರ್ಕಾರಿ ಉದ್ಯೋಗ ಕೊಡಿಸುತ್ತೇವೆಂದು ಈಗಾಗಲೇ 18 ಕೋಟಿಗೂ ಹೆಚ್ಚು ವಂಚನೆ ಮಾಡಿರುವ ನಾಲ್ವರನ್ನು ಪೊಲೀಸರು ಬಂಧಿಸಿದ್ದು. ನೇಮಕಾತಿ ಅಧೀಕ್ಷಕ ಕೆ.ಪಿ.ರಾಜೇಶ್ ಅವರ ಬಂಧನದಿಂದ ಸಂಖ್ಯೆ ಐದಕ್ಕೇರಿದೆ. ಕೆಲವು ಐಪಿಎಸ್ ಅಧಿಕಾರಿಗಳೂ ಈ ಜಾಲದಲ್ಲಿ ಇರುವುದಾಗಿ ಹೇಳಲಾಗುತ್ತಿದೆ.
ಪ್ರಸ್ತುತ ಬಂಧಿತರಾಗಿರುವ ಕಾನ್ಸ್ಟೇಬಲ್ಗಳಾದ ಲಕ್ಷ್ಮಿಕಾಂತ, ಲೋಕೇಶ್ , ಶಬಾನಾ ಬೇಗಂ ಅವರುಗಳು ಉದ್ಯೋಗಾಕಾಂಕ್ಷಿಗಳಿಗೆ ಹಣ ನೀಡಿದರೆ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದರು. ಆ ನಂತರ ಅವರನ್ನು ಪೊಲೀಸ್ ನೇಮಕಾತಿ ಅಧೀಕ್ಷಕ ಕೆ.ಪಿ.ರಾಜೇಶ್ ಗೆ ಹಾಗೂ ಮೂವರು ಡಿಜಿಪಿಗಳಿಗೆ ಆಪ್ತ ಕಾರ್ಯದರ್ಶಿಯಾಗಿದ್ದ ಎಚ್.ನಾಗರಾಜುಗೆ ಪರಿಚಯ ಮಾಡಿಸುತ್ತಿದ್ದರು.

ಈ ಇಬ್ಬರೂ ತಮ್ಮ ಪರಿಚಯಗಳನ್ನು ಹೇಳಿ, ತಮ್ಮ ಪ್ರಭಾವದ ಬಗ್ಗೆ ಹೇಳಿ ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದುಕೊಳ್ಳುತ್ತಿದ್ದರು. ಮೂವರು ಡಿಜಿಪಿಗಳಿಗೆ ಆಪ್ತ ಕಾರ್ಯದರ್ಶಿಯಾಗಿದ್ದ ಎಚ್.ನಾಗರಾಜು ಅವರನ್ನೂ ಸಹ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿಎಸ್ಐ, ಎಸ್ಡಿಎ, ಎಫ್ಡಿಎ, ಡಿವೈಎಸ್ಪಿ ಸೇರಿದಂತೆ ಹಲವು ಸರ್ಕಾರಿ ಹುದ್ದೆಗಳನ್ನು ಕೊಡಿಸುವುದಾಗಿ ಹೇಳಿ 2013 ರಿಂದ 2017ರ ವರೆಗೆ ಕೋಟ್ಯಂತರ ಹಣವನ್ನು ಈ ತಂಡ ವಸೂಲಿ ಮಾಡಿದೆ ಎಂದು ಸಿಸಿಬಿ ಅಧಿಕಾರಿ ಹೇಳಿದ್ದಾರೆ.
ಇತ್ತೀಚೆಗೆ ಹಣ ಹಂಚಿಕೆ ವಿಷಯದಲ್ಲಿ ಕಾನ್ಸ್ಟೇಬಲ್ ಲಕ್ಷ್ಮಿಕಾಂತ್ ಹಾಗೂ ಲೊಕೇಶ್ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ ಲಕ್ಷ್ಮಿಕಾಂತ್ ಕಮಿಷನರ್ ಕಚೇರಿಗೆ 'ಲೋಕೇಶ್ ಮತ್ತು ತಂಡ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ್ದಾರೆ' ಎಂದು ದೂರು ನೀಡಿದ್ದ.












Click it and Unblock the Notifications