'ರಾಜ್ಯದಲ್ಲಿ ಪೊಲೀಸರಿಗೆ ರಕ್ಷಣೆ ಕೊಡದ ಇದೆಂಥ ಸರಕಾರ?'
ಬೆಂಗಳೂರು, ಅಕ್ಟೋಬರ್ 18: ರಾಜ್ಯದಲ್ಲಿ ಅಧಿಕಾರಿಗಳ ಮೇಲಿನ ಕಿರುಕುಳದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಪ್ರಾಮಾಣಿಕವಾಗಿ ಅಧಿಕಾರಿಗಳು ಕೆಲಸ ನಿರ್ಹಹಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಡಿ.ಕೆ ರವಿ, ಅನುಪಮಾ ಶೆಣೈ, ಗಣಪತಿ, ಕಲ್ಲಪ್ಪ ಹಂಡಿಬಾಗ್ ಪ್ರಕರಣಗಳು ಈ ಪರಿಸ್ಥಿತಿಗೆ ಕೈಗನ್ನಡಿ ಹಿಡಿದಂತಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.
ಮಾಲೂರಿನ ಸಿಪಿಐ ರಾಘವೇಂದ್ರ ಆತ್ಮಹತ್ಯೆ ಮಾಡಿಕೊಂಡಿರುವುದು ಇಂತಹುದೇ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ರಾತ್ರಿ 1 ಗಂಟೆಗೆ ಠಾಣೆಗೆ ಬಂದು ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಸಾಕಷ್ಟು ಅನುಮಾನ ಹುಟ್ಟುಹಾಕಿದ್ದು, ರಾಜ್ಯದ ಆಡಳಿತ ವ್ಯವಸ್ಥೆಯ ಸ್ಥಿತಿಯನ್ನು ಬಯಲಿಗೆಳೆದಿದೆ.[ಮಾಲೂರು ಸರ್ಕಲ್ ಇನ್ ಸ್ಪೆಕ್ಟರ್ ಠಾಣೆಯಲ್ಲೇ ಆತ್ಮಹತ್ಯೆ]

ಪೊಲೀಸ್ ಇಲಾಖೆಯ ಆಡಳಿತ ವೈಫಲ್ಯದಿಂದಾಗಿ ಅಧಿಕಾರಿಗಳು ಕೆಲಸ ನಿರ್ವಹಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಠಾಣೆಗಳು ಸಾರ್ವಜನಿಕ ಸ್ನೇಹಿಯಾಗಿ ಉಳಿದಿಲ್ಲ. ಪೊಲೀಸ್ ಪೇದೆಗಳು ಕೂಡ ಇಡೀ ಸರಕಾರದ ನಿಷ್ಕ್ರಿಯತೆಗೆ ತಿರುಗಿ ಬಿದ್ದು, ಪ್ರತಿಭಟನೆಗೆ ಇಳಿದಿದ್ದರು, ಇಷ್ಟೆಲ್ಲಾ ಘಟನಾವಳಿಗಳು ನಡೆದಿದ್ದರೂ ಸಿದ್ದರಾಮಯ್ಯನವರ ಸರಕಾರ ಈ ಕುರಿತು ಕಿಂಚಿತ್ತೂ ಗಮನ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ರಾಜ್ಯದಲ್ಲಿ ಮಾಫಿಯಾದ ಹಾವಳಿ ಹೆಚ್ಚಾಗುತ್ತಿದ್ದು, ಡಿ.ಕೆ.ರವಿ ಆತ್ಮಹತ್ಯೆಗೆ ಕಾರಣರಾದ ಒಬ್ಬರನ್ನೂ ಬಂಧಿಸದಿರುವುದು ರಾಜ್ಯದ ಕಾನೂನು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದಿರುವ ಎಎಪಿ, ಕರ್ತವ್ಯನಿರತ ಸರ್ಕಲ್ ಇನ್ ಸ್ಪೆಕ್ಟರ್ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಇಡೀ ಸಮಾಜಕ್ಕೆ ಆಘಾತಕಾರಿ ವಿಷಯ ಎನ್ನಲಾಗಿದೆ.[ಹಂದಿಗುಂದಿ ಗ್ರಾಮದ ಪ್ರಾಮಾಣಿಕ ಅಧಿಕಾರಿ ಕಲ್ಲಪ್ಪ]
2006ರ ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಪೊಲೀಸ್ ಕಂಪ್ಲೇಂಟ್ ಆಥಾರಿಟಿ (ಕೆ.ಪಿ.ಸಿ.ಎ) ಯನ್ನು 2009ರಲ್ಲಿ ರಚಿಸಲಾಗಿತ್ತು, ಆದರೆ 2009ರಿಂದ 2013ವರೆಗೆ ಕೇವಲ 13 ಪ್ರಕರಣಗಳು ದಾಖಲಾಗಿದ್ದವು, ಇದು ಕರ್ನಾಟಕ ಲೋಕಾಯುಕ್ತದಂತೆ ಬಲಿಷ್ಠವಾಗಿ ಕಾರ್ಯನಿರ್ವಹಿಸಬೇಕಿದ್ದ ಸಂಸ್ಥೆ ಎಂದು ತಿಳಿಸಿದ್ದಾರೆ.
ಸದ್ಯ ಕರ್ನಾಟಕ ಪೊಲೀಸ್ ಕಂಪ್ಲೇಂಟ್ ಆಥಾರಿಟಿ ವಿಕಾಸ ಸೌಧದ ಒಂದು ಕಚೇರಿಯಲ್ಲಿ ಕೇವಲ ಗಂಜಿ ಕೇಂದ್ರವಾಗಿ ಉಳಿದಿದೆ. ಅದನ್ನು ಸಂಪೂರ್ಣವಾಗಿ ನ್ಯಾಯಾಂಗದ ಭಾಗವಾಗಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಒತ್ತಾಯಿಸುವುದಾಗಿ ರಾಜ್ಯ ಸಹ-ಸಂಚಾಲಕ ಶಿವಕುಮಾರ್ ಚೆಂಗಲರಾಯ ತಿಳಿಸಿದ್ದಾರೆ.












Click it and Unblock the Notifications