ಜಪ್ತಿ ಮಾಡಿದ ಚಿನ್ನಾಭರಣವನ್ನು ಪೊಲೀಸರು ವರ್ಷಾನುಗಟ್ಟಲೆ ವಶದಲ್ಲಿಟ್ಟುಕೊಳ್ಳುವಂತಿಲ್ಲ: HC
ಬೆಂಗಳೂರು, ಸೆ.20: ಅಪರಾಧ ಪ್ರಕರಣದ ತನಿಖೆ ವೇಳೆ ಜಪ್ತಿ ಮಾಡಿದ ಚಿನ್ನದ ಆಭರಣಗಳನ್ನು ಪೊಲೀಸರು ಇನ್ನು ವರ್ಷಾನುಗಟ್ಟಲೆ ತಮ್ಮ ಬಳಿಯೇ ಇಟ್ಟುಕೊಳ್ಳುವಂತಿಲ್ಲ.
ನಿಯಮದ ಪ್ರಕಾರ ಪೊಲೀಸರು, 15 ದಿನದಿಂದ ಗರಿಷ್ಠ ಒಂದು ತಿಂಗಳವರಗೆ ಮಾತ್ರ ಪೊಲೀಸರ ವಶದಲ್ಲಿ ಇಟ್ಟುಕೊಳ್ಳಲು ಅವಕಾಶವಿದೆ. ಆನಂತರ ಸಂತ್ರಸ್ತ ಅಥವಾ ದೂರುದಾರರಿಗೆ ಮಧ್ಯಂತರ ಸುಪರ್ದಿಗೆ ನೀಡಲೇಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಬೆಂಗಳೂರಿನ ಚಿನ್ನಾಭರಣದ ಮಳಿಗೆಯೊಂದರ ಮಾಲೀಕ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶವನ್ನು ಹೊರಡಿಸಿದೆ.
ಜತೆಗೆ ಅರ್ಜಿದಾರರಿಂದ ವಶಪಡಿಸಿಕೊಂಡಿದ್ದ ಚಿನ್ನದ ಗಟ್ಟಿಯನ್ನು ಅವರ ಮಧ್ಯಂತರ ಸುಪರ್ದಿಗೆ ನೀಡಬೇಕು ಎಂದು ಮೈಸೂರಿನ ಲಷ್ಕರ್ ಠಾಣಾ ಪೊಲೀಸರಿಗೆ ತಾಕೀತು ಮಾಡಿದೆ.
ಷರತ್ತಿನ ವಿವೇಚನೆ: ಪ್ರಕರಣದಲ್ಲಿ ವಶಪಡಿಸಿಕೊಂಡ ವಸ್ತುಗಳು ದೂರುದಾರರು-ಸಂತ್ರಸ್ತರಿಗೆ ನೀಡುವ ಮುನ್ನ ಅವುಗಳ ಪೋಟೋ ತೆಗೆದುಕೊಂಡು ಸಮಗ್ರ ಪಂಚನಾಮೆ ಮಾಡಬೇಕು. ವಿಚಾರಣೆ ವೇಳೆ ಅವುಗಳನ್ನು ಹಾಜರುಪಡಿಸಬೇಕು ಎಂದು ವಸ್ತುಗಳನ್ನು ಸುಪರ್ದಿಗೆ ಪಡೆಯುವವರಿಂದ ಬಾಂಡ್ ಬರೆಸಿಕೊಳ್ಳಬೇಕು ಹಾಗೂ ಭದ್ರತಾ ಖಾತರಿ ಪಡೆದುಕೊಳ್ಳಬೇಕು. ಅದಕ್ಕೆ ಆರೋಪಿ, ದೂರುದಾರ ಮತ್ತು ವಸ್ತುವನ್ನು ಸುಪರ್ದಿಗೆ ತೆಗೆದುಕೊಳ್ಳುವ ಸಹಿ ಪಡೆಯಬೇಕು. ಇದಲ್ಲದೆ ಇತರೆ ಷರತ್ತು ವಿಧಿಸುವುದು ಮ್ಯಾಜಿಸ್ಟ್ರೇಟ್ ಕೊರ್ಟ್ಗೆ ಸೇರಿದ್ದು ಎಂದು ನ್ಯಾಯಪೀಠ ತಿಳಿಸಿದೆ.

ನ್ಯಾಯಪೀಠ "ತನಿಖೆ ಸಂದರ್ಭದಲ್ಲಿ ಜಪ್ತಿ ಮಾಡಿದ ಚಿನ್ನ, ಬೆಳ್ಳಿ ಮತ್ತು ಅಮೂಲ ರತ್ನಗಳನ್ನು ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ಪೊಲೀಸರ ವಶದಲ್ಲಿ ವರ್ಷಾನುಗಟ್ಟಲೆ ಇಟ್ಟುಕೊಳ್ಳುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸುಪ್ರೀಂಕೋರ್ಟ್ ತೀರ್ಪು ಪ್ರಕಾರ ವಶಪಡಿಸಿಕೊಂಡ ವಸ್ತುಗಳು ಪೊಲೀಸ್ ಠಾಣೆಯಲ್ಲಿ ಹೆಚ್ಚೆಂದರೆ 15 ದಿನಗಳಿಂದ ಒಂದು ತಿಂಗಳವರೆಗೆ ಮಾತ್ರ ಇರುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಲಯ ನೋಡಿಕೊಳ್ಳಬೇಕು. ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಸಂಬಂಧಪಟ್ಟ ದುರುದಾರರ ಹಾಗೂ ಸಂತ್ರಸ್ತರ ಮಧ್ಯಂತರ ಸುಪರ್ದಿಗೆ ನೀಡುವ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಕ್ತ ಆದೇಶ ಹೊರಡಿಸಬೇಕು'' ಎಂದು ಆದೇಶಿಸಿದೆ.

ಅರ್ಜಿದಾರರ ಪರ ವಕೀಲರು, ಪ್ರಕರಣಕ್ಕೂ ಅರ್ಜಿದಾರಿಗೆ ಯಾವುದೇ ಸಂಬಂಧವಿಲ್ಲ. ಪ್ರಕರಣದಲ್ಲಿ ಅರ್ಜಿದಾರ ಸಂತ್ರಸ್ತರಾಗಿದ್ದಾರೆ. ಇದರಿಂದ ಚಿನ್ನದ ಗಟ್ಟಿಯನ್ನು ಮಧ್ಯಂತರ ಸುಪರ್ದಿಗೆ ಪಡೆಯಲು ಅವರು ಅರ್ಹರಾಗಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು.
ಸರ್ಕಾರಿ ವಕೀಲರು, ಪ್ರಕರಣ ಕುರಿತು ವಿಚಾರಣಾ ನ್ಯಾಯಾಲಯದ ವಿಚಾರಣೆ ಪೂರ್ಣಗೊಳ್ಳುವರೆಗೆ ಜಪ್ತಿ ಮಾಡಿರುವ ಚಿನ್ನವನ್ನು ಅರ್ಜಿದಾರರ ಸುಪರ್ದಿಗೆ ನೀಡಲಾಗದು. ಹಾಗಾಗಿ, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.
ಪ್ರಕರಣದ ಹಿನ್ನಲೆ: ಮೈಸೂರಿನ ಬಿ.ಇಂದರ್ ಚಂದ್ ಎಂಬುವರು ಲಷ್ಕರ್ ಠಾಣಾ ಪೊಲೀಸರಿಗೆ, ಕಾಸರಗೋಡಿನ ಹಮೀದ್ ಅಲಿ ತನ್ನಿಂದ ಒಂದು ಕೆ.ಜಿ. ಚಿನ್ನದ ಗಟ್ಟಿ ಪಡೆದು ಹಣ ನೀಡದೆ ವಂಚನೆ ಮಾಡಿದ್ದಾನೆದು ಆರೋಪಿಸಿ ದೂರು ನೀಡಿದ್ದರು. ಹಮೀದ್ ಅವರು ಇಂದರ್ ಚಂದ್ಯಿಂದ ಪಡೆದ ಚಿನ್ನದ ಗಟ್ಟಿಯನ್ನು ಅರ್ಜಿದಾರರಿಗೆ ಮಾರಿದ್ದ ಎಂಬ ಆರೋಪವಿತ್ತು. ಇದರಿಂದ ತನಿಖೆ ಸಂದರ್ಭದಲ್ಲಿ ಪೊಲೀಸರು ಅರ್ಜಿದಾರನ ಚಿನ್ನದ ಮಳಿಗೆಯಿಂದ ಅರ್ಧ ಕೆ.ಜಿ. ಚಿನ್ನದ ಗಟ್ಟಿ ವಶಪಡಿಸಿಕೊಂಡು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ವರದಿ ಸಲ್ಲಿಸಿದ್ದರು.
ನಂತರ ತಮ್ಮ ಅಂಗಡಿಯಿಂದ ವಶಪಡಿಸಿಕೊಂಡಿದ್ದ ಚಿನ್ನದ ಗಟ್ಟಿಯನ್ನು ಹಿಂದಿರುಗಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಮೈಸೂರಿನ ಅರ್ಜಿದಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಜೆಎಂಎಫ್ಸಿ ಕೋರ್ಟ್ 2020ರ ನ.10ರಂದು ಹೊರಡಿಸಿದ್ದ ಆದೇಶವನ್ನು ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ 2022ರ ಜ.9ರಂದು ಆದೇಶಿಸಿತ್ತು. ಹಾಗಾಗಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications