ಬೆಂಗಳೂರಿನ ರೌಡಿ ಸಾಮ್ರಾಜ್ಯ ಛಿದ್ರ ಮಾಡಿದ ಪೊಲೀಸರು
ಬೆಂಗಳೂರು, ಜು. 10: ದಾದಾಗಿರಿ ಮಾಡಿಕೊಂಡು ಜನ ಸಾಮಾನ್ಯರ ನೆಮ್ಮದಿಗೆ ಭಂಗ ತರುತ್ತಿದ್ದ ರೌಡಿಗಳಿಗೆ ಬೆಂಗಳೂರು ಪೊಲೀಸರು ಶಾಕ್ ಕೊಟ್ಟಿದ್ದಾರೆ. ಬೆಂಗಳೂರಿನ ಎಲ್ಲಾ ವಿಭಾಗದ ರೌಡಿ ಶೀಟರ್ ಗಳ ಮನೆಗಳ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ರೌಡಿ ಚಟುವಟಿಕೆಯಲ್ಲಿ ಸಕ್ರಿಯವಾಗಿರುವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗಿದೆ. ಬೆಂಳೂರಿನಲ್ಲಿ ಬರೋಬ್ಬರಿ 2144 ರೌಡಿಗಳ ನಿವಾಸಗಳ ಮೇಲೆ ದಾಳಿ ನಡೆದಿದೆ. ಮಾತ್ರವಲ್ಲ ಈ ರೌಡಿ ಚಟುವಟಿಕೆಗೂ ಹಾಗೂ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೂ ಸಿಸಿಬಿ ಪೊಲೀಸರು ದಾಳಿ ನೆಡಸಿ ಪಾತಕ ಲೋಕದೊಂದಿಗೆ ಬಳೆದಿದ್ದ ಸಂಪರ್ಕ ಕಾಲವನ್ನು ಕಡಿತ ಮಾಡಿದ್ದಾರೆ. ಬಾಲ ಬಿಚ್ಚಿದರೆ ಪರಿಣಾಮ ನೆಟ್ಟಗಿರಲ್ಲ ಎಂಬ ಸಂದೇಶವನ್ನು ಬೆಂಗಳೂರು ಪೊಲೀಸರು ರವಾನಿಸಿದ್ದಾರೆ.
ರೌಡಿ ಸಾಮ್ರಾಜ್ಯಕ್ಕೆ ಎಚ್ಚರಿಕೆ : ನಗರದಲ್ಲಿ ಅಪರಾಧ ಚಟುವಟಿಕೆ ನಿಗ್ರಹ ಮಾಡುವ ನಿಟ್ಟಿನಲ್ಲಿ ಎಲ್ಲಾ ವಿಭಾಗದಲ್ಲೂ ರೌಡಿ ಹಾಗೂ ಕ್ರಿಮಿನಲ್ ಹಿನ್ನೆಲೆಯುಳ್ಳವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. 2144 ರೌಡಿ ಶೀಟರ್ ಗಳ ಮನೆ ಮೇಲೆ ದಾಳಿ ಮಾಡಿ ಕೆಲವರಿಂದ ಮಹತ್ವದ ದಾಖಲೆ, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವತ್ತೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೂ ದಾಳಿ ನಡೆದಿದೆ. ಜೈಲಿನಲ್ಲಿರುವ ಹಾಗೂ ಬೆಂಗಳೂರಿನಲ್ಲಿ ದಾಳಿಗೆ ಒಳಗಾದ ರೌಡಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ದಾಳಿಗೆ ಸಂಬಂಧಿಸಿದಂತೆ 31 ಮಂದಿಯ ಮೇಲೆ ಗೂಂಡಾ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ. ಮುಚ್ಚಳಿಕೆ ಉಲ್ಲಂಘನೆ ಮಾಡಿದ ರೌಡಿಗಳಿಂದ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಒಟ್ಟಾರೆ 490 ರೌಡಿ ಶೀಟರ್ ಗಳ ಮೇಲೆ ಕೇಸು ದಾಖಲಿಸಿದ್ದು, ಒಟ್ಟು 561 ಪ್ರಕರಣ ದಾಖಲಿಸಲಾಗಿದೆ. ಕೆಲವು ರೌಡಿ ಶೀಟರ್ ಗಳನ್ನು ಗಡಿಪಾರು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪಾಯಿಸನ್ ರಾಮನಿಗೂ ಛತ್ರಿ ಹೇಮಂತನ ಮನೆಗೂ ದಾಳಿ
ಹಿರಿಯ ಐಪಿಎಸ್ ಅಧಿಕಾರಿ ಸಂಜೀವ ಎಂ. ಪಾಟೀಲ್ ನೇತೃತ್ವದಲ್ಲಿ ಪಶ್ಚಿಮ ವಿಭಾಗದ 189 ರೌಡಿ ಮನೆಗಳ ಮೇಲೆ ದಾಳಿ ನಡೆದಿದೆ. 84 ರೌಡಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪ್ರಮುಖವಾಗಿ ಪಾಯಿಸನ್ ರಾಮಾ, ಛತ್ರಿ ಹೇಮಂತ, ಕೆಂಡ ವಿಶ್ವ ಸೇರಿದಂತೆ ಪ್ರಮುಖ ರೌಡಿಗಳು ದಾಳಿಗೆ ಒಳಗಾಗಿದ್ದಾರೆ. ದಾಳಿ ವೇಳೆ ಒಂದು ಕೆ.ಜಿ. ಗಾಂಜಾ ಸಿಕ್ಕಿದ್ದು 39 ಕ್ರಿಮಿನಲ್ ಗಳ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ತಿಳಿಸಿದ್ದಾರೆ.

ಸ್ವತಃ ಡಿಸಿಪಿಯೇ ಫೀಲ್ಡ್ ಗೆ ಇಳಿದು ವಾರ್ನಿಂಗ್
ಡಿಸಿಪಿ ಎಂ.ಎನ್. ಅನುಚೇತ್ ನೇತೃತ್ವದಲ್ಲಿ ಕೇಂದ್ರ ವಿಭಾಗದ ರೌಡಿ ಶೀಟರ್ ಗಳ ಮೇಲೂ ದಾಳಿ ನಡೆಸಲಾಗಿದೆ. ಒಟ್ಟು 107 ರೌಡಿ ಶೀಟರ್ ಗಳ ಮನೆಗಳ ಮೇಲೆ ದಾಳಿ ಮಾಡಿದ್ದು, 93 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ರೌಡಿ ಚಟುವಟಿಕೆಯಲ್ಲಿ ತೊಡಗಿರುವ ಪಾತಕಿಗಳಿಗೆ ಡಿಸಿಪಿ ಅನುಚೇತ್ ವಾರ್ನಿಂಗ್ ನೀಡಿದರು. ಕೆಲವು ರೌಡಿ ಶೀಟರ್ ಗಳ ಮನೆಗಳಲ್ಲಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಕೆಲ ರೌಡಿ ಶೀಟರ್ ಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ.

ಬಾಲ ಬಿಚ್ಚಿದರೆ ಪರ್ಮನೆಂಟ್ ಹಾಸಿಗೆ
ಇನ್ನು ವೈಟ್ ಫೀಲ್ಡ್ ವಿಭಾಗದ 116 ರೌಡಿಗಳ ನಿವಾಸದ ಮೇಲೆ ಏಕಾಏಕಿ ದಾಳಿ ಮಾಡಿದ್ದು, 82 ರೌಡಿಗಳನ್ನು ವಶಕ್ಕೆ ಪಡೆಯಲಾಗಿದೆ. ವರ್ತೂರು, ಬೆಳ್ಳಂದೂರು, ಮಾರತಹಳ್ಳಿ ವ್ಯಾಪ್ತಿಯಲ್ಲಿ 2.5 ಕೆ.ಜಿ. ಗಾಂಜಾ ಸಿಕ್ಕಿದ್ದು, ನಾಲ್ವರು ರೌಡಿ ಶೀಟರ್ ಗಳ ವಿರುದ್ಧ ಕೇಸು ದಾಖಲಿಸಿ ಬಂಧಿಸಲಾಗಿದೆ. ಕಾಡುಬಿಸನಹಳ್ಳಿ ಲೋಕಿ, ವರ್ತೂರು ವಿಶ್ವ, ಬೆಳ್ಳಂದೂರು ಕುಮಾರ್ ಬಂಧನಕ್ಕೆ ಒಳಗಾಗಿದ್ದಾರೆ. ಇಬ್ಬರು ರೌಡಿಗಳನ್ನು ಮಾರಕಾಸ್ತ್ರ ಹೊಂದಿದ ಆರೋಪದಡಿ ಬಂಧಿಸಲಾಗಿದೆ. ಉಳಿದ ರೌಡಿಗಳಿಗೆ ಸನ್ನಡೆಯಿಂದ ನಡೆದುಕೊಳ್ಳುವಂತೆ ಡಿಸಿಪಿ ಡಿ. ದೇವರಾಜ್ ಎಚ್ಚರಿಕೆ ನೀಡಿದ್ದಾರೆ.

ರೌಡಿ ಶೀಟರ್ ತನ್ವೀರ್ ಮನೆ ಮೇಲೂ ದಾಳಿ
ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಕೂಡ ಇವತ್ತು ಏಕ ಕಾಲಕ್ಕೆ ರೌಡಿ ಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕೆ.ಜಿ. ಹಳ್ಳಿ, ಶಿವಾಜಿನಗರ, ಫುಲಿಕೇಶಿನಗರ, ಭಾರತಿ ನಗರ ಮತ್ತಿತರ ಕಡೆ ದಾಳಿ ನಡೆದಿದೆ. ಡಿಸಿಪಿ ಎಸ್. ಡಿ. ಶರಣಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, 254 ರೌಡಿ ಶೀಟರ್ ಗಳ ಮನೆಗಳು ದಾಳಿಗೆ ಒಳಗಾಗಿವೆ. ಅದರಲ್ಲಿ 188 ರೌಡಿ ಹಿನ್ನೆಲೆಯುಳ್ಳವರನ್ನು ವಶಕ್ಕೆ ಪಡೆಯಲಾಗಿದೆ. ಶಿವಾಜಿನಗರ ಹಳೇ ರೌಡಿಶೀಟರ್ ತನ್ವೀರ್ ಸೇರಿದಂತೆ ಭೂಗತ ಲೋಕದ ಪಾತಕಿಗಳ ಮನೆಗಳನ್ನೂ ಬಿಟ್ಟಿಲ್ಲ. ರೌಡಿ ಚಟುಟಿಕೆ ಬಿಟ್ಟು ಸಮಾಜದಲ್ಲಿ ಶಾಂತಿಯುತ ಪ್ರಜೆಗಳಾಗಿ ಬದುಕಿ, ಅಪರಾಧ ಲೋಕಕ್ಕೆ ಎಂಟ್ರಿ ಕೊಟ್ಟರೆ ಪರಿಸ್ಥಿತಿ ಬೇರೆಯದ್ದೇ ಇರಲಿದೆ ಎಂದು ಡಿಸಿಪಿ ಶರಣಪ್ಪ ಎಚ್ಚರಿಕೆ ನೀಡಿದ್ದಾರೆ.

ರಾಜಧಾನಿಯ ಎಲ್ಲಾ ವಿಭಾಗದಲ್ಲೂ ರೌಡಿಗಳಿಗೆ ನಡುಕ
ಬೆಂಗಳೂರಿನ ಅತಿದೊಡ್ಡ ರೌಡಿ ಸಾಮ್ರಾಜ್ಯ ಹೊಂದಿರುವ ಉತ್ತರ ವಿಭಾಗದ 292 ರೌಡಿ ಶೀಟರ್ ಗಳ ಮನೆ ಮೇಲೆ ದಾಳಿ ಮಾಡಿ 230 ರೌಡಿ ಶೀಟರ್ ಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಲಾಗಿದೆ. ಅದರಲ್ಲೂ ಕ್ರಿಮಿನಲ್ ಹಿನ್ನೆಲೆಯುಳ್ಳವರ ವಿರುದ್ಧ ಕೇಸು ದಾಖಲಿಸಿ ಜೈಲಿಗೆ ರವಾನಿಸಲಾಗಿದೆ. ಅದೇ ರೀತಿ ದಕ್ಷಿಣ ವಿಭಾಗ ಸೇರಿದಂತೆ ಬೆಂಗಳೂರಿನ ಏಳು ಉಪ ವಿಭಾಗದಲ್ಲೂ ದಾಳಿ ನಡೆಸಲಾಗಿದೆ. ರೌಡಿ ಹಿನ್ನೆಲೆಯುಳ್ಳವರ ಅಪರಾಧ ಚಟುವಟಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ರೌಡಿಗಳ ಎಡೆ ಮುರಿಕಟ್ಟಲು ಸೂಚಿಸಿದ್ದರು.












Click it and Unblock the Notifications