ಮಾದಕ ಕೇಸುಗಳಿಗೆ ಸೀಮಿತವಾಯಿತೇ ಬೆಂಗಳೂರು ಕಾನೂನು ಸುವ್ಯವಸ್ಥೆ
ಬೆಂಗಳೂರು, ಡಿ. 22: ಗಾಂಜಾ ಮಾರಾಟ ಮಾಡ್ತಿದ್ದ ಗ್ಯಾಂಗ್ ಸೆರೆ! ಡ್ರಗ್ ಪೆಡ್ಲರ್ಗಳ ಬಂಧನ ಲಕ್ಷಾಂತರ ಮೌಲ್ಯದ ಮಾದಕ ವಸ್ತು ವಶ, ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದವರು ಅಂದರ್!
ಬೆಂಗಳೂರು ಪೊಲೀಸರು ಕಳೆದ ಎರಡು ವರ್ಷಗಳಿಂದ ಪತ್ತೆ ಮಾಡುತ್ತಿರುವ ಪ್ರಕರಣಗಳನ್ನು ನೋಡಿದರೆ ಅಚ್ಚರಿ ಮೂಡುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು, ನೊಂದವರಿಗೆ ನ್ಯಾಯ ಕೊಡಿಸುವುದು ಎಂದರೆ ಕೇವಲ ಡ್ರಗ್ ಪ್ರಕರಣಗಳ ಪತ್ತೆ ಎಂದೇ ಭಾವಿಸಿದಂತಿದೆ. ಸಿಸಿಬಿ ಪೊಲೀಸರು ಸ್ಯಾಂಡಲ್ ವುಡ್ ಪ್ರಕರಣ ಪತ್ತೆ ಮಾಡಿದ್ದು ಮೊದಲುಗೊಂಡು ಈವರೆಗೂ ಬೆಂಗಳೂರು ಪೊಲೀಸರು ಪತ್ತೆ ಮಾಡಿದ ಪ್ರಕರಣ ನೋಡಿದರೆ ಕೇವಲ ಡ್ರಗ್ ಪ್ರಕರಣಗಳೇ ಜಾಸ್ತಿ.
ಕಾನೂನು ಸುವ್ಯವಸ್ಥೆ ಕಾಪಾಡುವುದು ಎಂದ್ರೆ ಕೇವಲ ಮಾದಕ ವಸ್ತು ಮಾರಾಟ ಮಾಡುವ ಪ್ರಕರಣ ಹಚ್ಚುವುದು. ಗಾಂಜಾ ಸೇವನೆ ಮಾಡುವರನ್ನು ಪತ್ತೆ ಮಾಡಿ ಜೈಲಿಗೆ ಕಳುಹಿಸುವುದು ಎಂದೇ ಭಾವಿಸಿದಂತಿದೆ. ಕಳೆದ ಎರಡು ವರ್ಷದಿಂದ ಬೆಂಗಳೂರು ಪೊಲೀಸರು ಡ್ರಗ್ ಕೇಸುಗಳಲ್ಲಿ ಮುಳುಗಿ ಹೋಗಿದ್ದಾರೆ.
ನೊಂದವರ ಮನೆ ಬಾಗಿಲಿಗೆ ನ್ಯಾಯ ದಾನ ಮಾಡುವುದನ್ನು ಮರೆತಂದಿದೆ. ಕೌಟುಂಬಿಕ ಕಲಹ ಸಂಬಂಧ ದೂರು ಕೊಟ್ಟರೂ ಎನ್ಸಿಆರ್ ಮಾಡಿಕೊಂಡು ಕೈತೊಳೆದುಕೊಳ್ಳುತ್ತಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ರೌಡಿಗಳ ಉಪಟಳ ತಾರಕಕ್ಕೇರಿದೆ. ಲ್ಯಾಂಡ್ ಡೀಲಿಂಗ್ ದಂಧೆಗಳಲ್ಲಿ ಮುಳುಗಿದ್ದಾರೆ. ಗಾಂಜಾ ಮತ್ತು ಡ್ರಗ್ ಪತ್ತೆ ಮಾಡಲು ಪೊಲೀಸರು ತೋರುತ್ತಿರುವ ಆಸಕ್ತಿಯನ್ನು ಬೆಂಗಳೂರು ಕಾನೂನು ಸುವ್ಯವಸ್ಥೆ ಅಪರಾಧ ಪ್ರಕರಣಗಳ ಪತ್ತೆಗೆ ತೋರಿದ್ದರೆ ಬೆಂಗಳೂರಿನಲ್ಲಿ ನಿಜವಾಗಿಯೂ ಶಾಂತಿ ಸುವ್ಯವಸ್ಥೆಗೆ ಬೆಂಗಳೂರು ಮಾದರಿ ನಗರವಾಗಿ ರೂಪಾಂತರಗೊಳ್ಳುತ್ತಿತ್ತು. ಆದರೆ ಡ್ರಗ್ ಪ್ರಕರಣಗಳ ಪತ್ತೆ ಕಾರ್ಯದಲ್ಲಿಯೇ ಪೊಲೀಸರು ಮುಳುಗಿ ಹೋಗಿದ್ದಾರೆ.
ಒಬ್ಬ ರೌಡಿ ಶೀಟರ್ನ್ನು ಹಾಡ ಹಗಲೇ ಬ್ಯಾಂಕ್ಗೆ ನುಗ್ಗಿ ಎದುರಾಳಿಗಳು ಹತ್ಯೆ ಮಾಡಿದರು. ಕಾರ್ಪೋರೇಟರ್ ರೇಖಾ ಕದಿರೇಶ್ ಅವರನ್ನು ಕಚೇರಿಯಲ್ಲಿ ಹಾಡ ಹಗಲೇ ಸಿಸಿಟಿವಿ ಕ್ಯಾಮರಾಗಳ ಸಮ್ಮುಖದಲ್ಲಿ ಹತ್ಯೆ ಮಾಡಿದರು. ಇತ್ತೀಚೆಗೆ ಎಲೆಕ್ಟ್ರಾನಿಕ್ ಸಿಟಿ ಸಮೀಪ ರೌಡಿ ಜೆಸಿಬಿ ನಾರಾಯಣನ ಹತ್ಯೆಗೆ ಯತ್ನಿಸಿದ ವಿಡಿಯೋ ವೈರಲ್ ಆಗಿತ್ತು. ಪುಡಿ ರೌಡಿಯೊಬ್ಬ ಹಾಡ ಹಗಲೇ ಅಂಗಡಿಗಳಿಗೆ ನುಗ್ಗಿ ಮಚ್ಚು ತೋರಿಸಿ ಸುಲಿಗೆ ಮಾಡಿದ್ದ ಪ್ರಕರಣ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಇದೇ ರೀತಿ ಅನೇಕ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾದರೂ ಅವು ಬೆಳಕಿಗೆ ಬರುತ್ತಿಲ್ಲ. ಪರಿಸ್ಥಿತಿ ಈ ರೀತಿ ನಿರ್ಮಾಣವಾಗಿದ್ದು, ಪೊಲೀಸ್ ಕಾನೂನು ಸುವ್ಯವಸ್ಥೆ ಬಗ್ಗೆ ಜನ ಸಾಮಾನ್ಯರೇ ಪ್ರಶ್ನೆ ಮಾಡುವ ಹಂತಕ್ಕೆ ಬಂದು ನಿಂತಿದೆ.
ಸಿಸಿಬಿ ಪೊಲೀಸ್ ಘಟಕವಂತೂ ಮಾದಕ ಪ್ರಕರಣ ಹೊರತು ಪಡಿಸಿ ಬೇರೆ ಯಾವ ಪ್ರಕರಣ ಮುಟ್ಟಿದಂತೆ ಕಾಣುತ್ತಿಲ್ಲ. ರೌಡಿ ನಿಗ್ರಹ ದಳವಿದ್ದರೂ ಅದಕ್ಕೆ ಸಂಬಂಧಪಟ್ಟ ಒಂದು ಘಟನೆ ಸಂಬಂಧ ಪ್ರಕಟಣೆ ನೀಡಿದ್ದು ಅಪರೂಪ. ಆರ್ಎಸ್ಎಸ್ ನಕಲಿ ಸ್ವಾಮಿ ಪ್ರಕರಣ ಬಿಟ್ಟರೆ ಬೇರೆ ಯಾವ ಪ್ರಕರಣವೂ ಸದ್ದು ಮಾಡಲಿಲ್ಲ. ರಾಜಧಾನಿಯಲ್ಲಿ ರೌಡಿಗಳ ಉಪಟಳ ಪರಾಕಾಷ್ಠೆ ತಲುಪಿದೆ. ಇಷ್ಟಾಗಿಯೂ ಸಿಸಿಬಿ ಪೊಲೀಸರು ಕೂಡ ಡ್ರಗ್ ಪ್ರಕರಣಗಳ ಹಿಂದೆ ಬಿದ್ದಿದ್ದಾರೆ.
ಇನ್ನು ಗೋವಿಂದಪುರ ಪೊಲೀಸ್ ಠಾಣೆಯಂತೂ ದಿನವೂ ಡ್ರಗ್ ಪ್ರಕರಣಗಳಿಗೆ ಸುದ್ದಿಯಾಗುತ್ತಿದ್ದಾರೆ. ಇನ್ನು ನಾನಾ ಠಾಣೆಗಳ ಪೊಲೀಸರದ್ದೂ ಇದೇ ಸ್ಥಿತಿ.
ಇವತ್ತೂ ಎರಡು ಪ್ರಕರಣ: ಹೊಸ ವರ್ಷಕ್ಕೆ ಡ್ರಗ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೆ.ಜಿ. ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಗೋಧಿ ಹಿಟ್ಟಿನಲ್ಲಿ ಡ್ರಗ್ ಇಟ್ಟು ಮಾರಟ ಮಾಡುತ್ತಿದ್ದ ಅರೋಪಿಯನ್ನು ಬಂಧಿಸಿದ್ದಾರೆ. ಒಂದು ಗ್ರಾಂ ಹೆರಾಯಿನ್ ಹನ್ನೆರಡು ಸಾವಿರದಂತೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಅದೇ ರೀತಿ ಮೈಕೋ ಲೇಔಟ್ ಪೊಲೀಸರು ಡ್ರಗ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಐದಾರು ಕೋಟಿ ಮೌಲ್ಯದ ಡ್ರಗ್ ವಶಪಡಿಸಿಕೊಂಡಿದ್ದಾರೆ. ಅಂತೂ ಡ್ರಗ್ ಪ್ರಕರಣಗಳಿಗೆ ಸೀಮಿತವಾಗಿದ್ದಾರೆ ಎಂಬುದಕ್ಕೆ ಈ ಪ್ರಕರಣಗಳು ಕೂಡ ಸೇರ್ಪಡೆಯಾಗಿದೆ.