ಶುಕ್ರವಾರ ಬೆಂಗಳೂರಲ್ಲಿ ನರೇಂದ್ರ ಮೋದಿ ರೋಡ್ ಶೋ ರದ್ದು
ಬೆಂಗಳೂರು, ಜನವರಿ 18: ಭಾರತದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಬೆಂಗಳೂರು ನಗರದಲ್ಲಿ ಅವರು ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಗರದಲ್ಲಿ ಮೋದಿ ನಡೆಸಬೇಕಿದ್ದ ರೋಡ್ ಶೋ ರದ್ದುಗೊಳಿಸಲಾಗಿದೆ.
ನರೇಂದ್ರ ಮೋದಿ ಜನವರಿ 19ರ ಶುಕ್ರವಾರ ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಮಹಾರಾಷ್ಟ್ರ, ಮಧ್ಯಾಹ್ನ ಬೆಂಗಳೂರು ಮತ್ತು ಸಂಜೆ ತಮಿಳುನಾಡಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು ನಗರದಲ್ಲಿ ಮೋದಿ ಮಧ್ಯಾಹ್ನ 2 ಗಂಟೆಯಿಂದ 3.35ರ ತನಕ ಇರಲಿದ್ದಾರೆ. ನರೇಂದ್ರ ಮೋದಿ ಭೇಟಿ ವೇಳೆ ನಗರದಲ್ಲಿ ರೋಡ್ ಶೋ ಆಯೋಜನೆ ಮಾಡಲು ಕರ್ನಾಟಕ ಬಿಜೆಪಿ ಘಟಕ ತಯಾರಿ ನಡೆಸಿತ್ತು, ಈ ಕುರಿತು ಪ್ರಧಾನಿ ಕಛೇರಿಯ ಅನುಮತಿಯನ್ನೂ ಕೇಳಿತ್ತು.
ಆದರೆ ಬೇರೆ ಕಾರ್ಯಕ್ರಮಗಳಿಗೆ ತಡವಾಗುವ ಕಾರಣ ಪ್ರಧಾನಿ ಕಛೇರಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ನರೇಂದ್ರ ಮೋದಿ ರೋಡ್ ಶೋಗೆ ಒಪ್ಪಿಗೆ ನೀಡಿಲ್ಲ. ಆದ್ದರಿಂದ ನಿಗದಿತ ಕಾರ್ಯಕ್ರಮ ಮುಗಿಸಿ ಮೋದಿ ತಮಿಳುನಾಡಿಗೆ ತೆರಳಲಿದ್ದಾರೆ.
ಮೋದಿ ಕಾರ್ಯಕ್ರಮಗಳು; ಮಹಾರಾಷ್ಟ್ರದಿಂದ ನರೇಂದ್ರ ಮೋದಿ ಬೆಂಗಳೂರಿಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 2.45ಕ್ಕೆ ಬೆಂಗಳೂರಿನಲ್ಲಿ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಈ ಎರಡು ಕಾರ್ಯಕ್ರಮದ ಬಳಿಕ ನರೇಂದ್ರ ಮೋದಿ ಸಂಜೆ 6 ಗಂಟೆಗೆ ತಮಿಳುನಾಡಿನ ಚೆನ್ನೈನಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್ 2023ರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ. ಆದ್ದರಿಂದ ಬೆಂಗಳೂರಿನಲ್ಲಿ ನರೇಂದ್ರ ಮೋದಿ ರೋಡ್ ಶೋ ಇರುವುದಿಲ್ಲ.
ಬೆಂಗಳೂರಿನಲ್ಲಿ ಹೊಸ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ (ಬಿಐಇಟಿಸಿ) ಕ್ಯಾಂಪಸ್ ನಿರ್ಮಾಣ ಮಾಡಲಾಗಿದೆ. ಸುಮಾರು 1,600 ಕೋಟಿ ರೂ. ಬಂಡವಾಳದಲ್ಲಿ 43 ಎಕರೆ ಕ್ಯಾಂಪಸ್ನಲ್ಲಿ ಇದನ್ನು ನಿರ್ಮಿಸಲಾಗಿದೆ. ಅಮೆರಿಕ ಹೊರಗೆ ಬೋಯಿಂಗ್ ಸಂಸ್ಥೆ ಮಾಡಿರುವ ಅತಿದೊಡ್ಡ ಹೂಡಿಕೆ ಇದಾಗಿದೆ. ಈ ಕ್ಯಾಂಪಸ್ ಅನ್ನು ಮೋದಿ ಉದ್ಘಾಟಿಸಲಿದ್ದಾರೆ.
ಭಾರತದಲ್ಲಿನ ಬೋಯಿಂಗ್ನ ಹೊಸ ಕ್ಯಾಂಪಸ್ ದೇಶದಲ್ಲಿ ಸ್ಟಾರ್ಟಪ್, ಖಾಸಗಿ ಮತ್ತು ಸರ್ಕಾರಿ ಪರಿಸರ ವ್ಯವಸ್ಥೆಯೊಂದಿಗೆ ಪಾಲುದಾರಿಕೆಗೆ ಆಧಾರಸ್ತಂಭವಾಗಲಿದೆ. ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಕ್ಕಾಗಿ ಹೊಸ ಪೀಳಿಗೆಯ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಈ ಸಂಸ್ಥೆ ಸಹಾಯಕವಾಗಲಿದೆ.
ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಸಹ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದು ದೇಶದ ಬೆಳೆಯುತ್ತಿರುವ ವಾಯುಯಾನ ಕ್ಷೇತ್ರಕ್ಕೆ ಭಾರತದಾದ್ಯಂತ ಹೆಚ್ಚಿನ ಹೆಣ್ಣು ಮಕ್ಕಳ ಪ್ರವೇಶ ಬೆಂಬಲಿಸುವ, ಅವಕಾಶ ಕಲ್ಪಿಸುವ ಗುರಿ ಹೊಂದಿದೆ. ಈ ಕಾರ್ಯಕ್ರಮವು ಭಾರತದಾದ್ಯಂತದ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಕೌಶಲ್ಯಗಳನ್ನು ಕಲಿಯಲು ಮತ್ತು ವಾಯುಯಾನ ವಲಯದಲ್ಲಿ ಉದ್ಯೋಗಗಳಿಗೆ ತರಬೇತಿ ನೀಡಲು ಅವಕಾಶಗಳನ್ನು ಒದಗಿಸುತ್ತದೆ.
ಚಂದ್ರಯಾನ ಯೋಜನೆ ಯಶಸ್ಸಿನ ಹಿನ್ನಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ನರೇಂದ್ರ ಮೋದಿ 2023ರ ಆಗಸ್ಟ್ನಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಆಗಲೂ ರಾಜ್ಯ ಬಿಜೆಪಿ ಘಟಕರೋಡ್ ಶೋ ನಡೆಸಲು ತಯಾರಿ ನಡೆಸಿತ್ತು. ಆದರೆ ಆಗ ಸಹ ರೋಡ್ ಶೋ ರದ್ದುಗೊಂಡಿತ್ತು.
ನರೇಂದ್ರ ಮೋದಿ ಜನವರಿ 22ರಂದು ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಜನವರಿ 21ರಂದು ತೆರಳಲಿದ್ದಾರೆ. ಅದಕ್ಕೂ ಮೊದಲು ಅವರು ಮೂರು ರಾಜ್ಯಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.












Click it and Unblock the Notifications