ಪ್ರಧಾನಿ ಮೋದಿ ಕರ್ನಾಟಕ ಭೇಟಿ: ಉದ್ಘಾಟನೆಗೊಂಡ ಯೋಜನೆಗಳಿಂದ ಏನೇನು ಪ್ರಯೋಜನ? ತಿಳಿಯಿರಿ
ಸೋಮವಾರ ಕರ್ನಾಟಕ ಭೇಟಿ ನೀಡಿದ ಪ್ರಧಾನಮಂತ್ರಿಗಳಿಂದ ವಿವಿಧ ಯೋಜನೆಗಳಿಗೆ ಚಾಲನೆ.ಭಾರಿ ಮೊತ್ತ ಖರ್ಚು ಮಾಡಿದ ಈ ಯೋಜನೆಗಳಿಂದ ಲಾಭವೇನು, ಯಾರಿಗೆ ಇವುಗಳಿಂದ ಪ್ರಯೋಜನವಿದೆ?
ಬೆಂಗಳೂರು, ಫೆಬ್ರವರಿ 06: ಕರ್ನಾಟಕದ ಎರಡು ಜಿಲ್ಲೆಗಳಿಗೆ ಸೋಮವಾರ (ಜ. 6) ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಮುಖ ನಾಲ್ಕು ಯೋಜನೆಗಳಿಗೆ ಅವರು ಚಾಲನೆ ನೀಡಿದರು. ಒಟ್ಟು ಅಂದಾಜು 2,700 ಕೋಟಿಗೂ ಹೆಚ್ಚು ಮೊತ್ತದ ರಾಜ್ಯಕ್ಕೆ ಹೆಮ್ಮೆ ತರುವ ಯೋಜನೆಗಳು ಲೋಕಾರ್ಪಣೆಗೊಂಡವು.
ಭಾರಿ ಮೊತ್ತ ಖರ್ಚು ಮಾಡಿದ ಈ ಯೋಜನೆಗಳಿಂದ ಲಾಭವೇನು, ಯಾರಿಗೆ ಇವುಗಳಿಂದ ಪ್ರಯೋಜನವಿದೆ?. ಸಹಸ್ರ ಸಂಖ್ಯೆಯ ಮಧ್ಯೆ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿಗೆ ನೀಡಿದ ಉಡುಗೊರೆ, ಪ್ರಧಾನಿ ಭಾಷಣಷದ ಸಮಗ್ರ ಚಿತ್ರಣ ಇಲ್ಲಿದೆ.
ಮೊದಲು ಬೆಂಗಳೂರಿನ ಎಚ್ಎಎಲ್ಗೆ ಆಗಮಿಸಿ ಪ್ರಧಾನಮಂತ್ರಿ ಮೋದಿ ಬೆಳಗ್ಗೆ 11ಗಂಟೆಗೆ ಅಂತಾರಾಷ್ಟ್ರೀಯ ಇಂಧನ ಉದ್ಯಮ ಒಟ್ಟು ಗೂಡಿಸುವ ಮತ್ತು ಕೇಂದ್ರ ಸ್ಥಾನವನ್ನಾಗಿ ಭಾರತವನ್ನು ತೋರ್ಪಡಿಸುವ 'ಇಂಡಿಯಾ ಎನರ್ಜಿ ಸಪ್ತಾಹ' ಅನ್ನು ಉದ್ಘಾಟಿಸಿದರು. ಇದೊಂದು ವಿಶ್ವದ ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಇಂಧನ ಕೈಗಾರಿಕಾ ತಜ್ಞರಿಗೆ ಸರ್ವಶ್ರೇಷ್ಠ ವೇದಿಕೆ ಸಹ ಆಗಿದೆ.
ಇಂಧನ ಉದ್ಯಮದಲ್ಲಿನ ಭಾಗಿದಾರರ ನಡುವಿನ ಸಹಯೋಗ ವೇಗಗೊಳಿಸಲು ಹಾಗೂ ಹೊಸ ಬೆಳವಣಿಗೆಗೆ ಅವಕಾಶ ಗುರುತಿಸಲು ನೀರ್ಣಾಯಕವಾಗಿದೆ. ಇದರಿಂದ ಭಾರತಕ್ಕೆ ಮಹತ್ವದ ಪಾತ್ರ, ಜವಾಬ್ದಾರಿ ಸಿಗಲಿದೆ.

ಸಾವಿರಾರು ಉದ್ಯೋಗ ಸೃಷ್ಟಿ
ಇದೇ ವೇಳೆ ತುಮಕೂರಿನಲ್ಲಿ ಭಾರತದ ಅತೀ ದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಲಘು ಉಪಯೋಗಿ ಹೆಲಿಕಾಪ್ಟರ್ಗಳು ಹಾಗೂ ಇಂಡಿಯನ್ ಮಲ್ಟಿರೋಲ್ ಹೆಲಿಕಾಪ್ಟರ್ಗಳು ತಯಾರಿಕೆ ಸ್ಥಳ ಗ್ರೀನ್ ಫಿಲ್ಡ್ ಹೆಲಿಕಾಪ್ಟರ್ ಕೈಗಾರಿಕೆಯಾಗಿ ಇದು ಹೊರ ಹೊಮ್ಮಲಿದೆ. ಇದರಿಂದ ಈ ಭಾಗದಲ್ಲಿ ಶಾಲಾ, ಕಾಲೇಜುಗಳಲ್ಲಿ ವಸತಿ ಪ್ರದೇಶಗಳ ಮೂಲಸೌಕರ್ಯ ದೊರೆಯಲಿದೆ. ಮುಖ್ಯವಾಗಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ.

147 ಗ್ರಾಮೀಣ ಪ್ರದೇಶಕ್ಕೆ ಶುದ್ಧ ನೀರು
ತುಮಕೂರು ಕೈಗಾರಿಕಾ ಟೌನ್ ಶಿಪ್ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ ಕೈಗಾರಿಕೆ ಕೇಂದ್ರ ಉದ್ಘಾಟನೆಯಾಗಿದೆ. ಇದರಿಂದ 90 ಸಾವಿರ ಯುವಕರು/ ನಿರುದ್ಯೋಗಿ ಗಳಿಗೆ ಉದ್ಯೋಗ ದೊರೆಯಲಿದೆ. ಜೊತೆಗೆ ತುಮಕೂರಲ್ಲಿ 'ಜಲಜೀವನ್ ಮಿಷನ್ ಅಡಿ ಬಹುಗ್ರಾಮ ನೀರು ಸರಬರಾಜು ಯೋಜನೆ'ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಚಿಕ್ಕನಾಯಕನಹಳ್ಳಿಯ ಸುಮಾರು 147 ಗ್ರಾಮೀಣ ಪ್ರದೇಶದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಸಿಗುತ್ತದೆ. ನಿತ್ಯ ಸಂಸ್ಕರಿಸಿದ ಶುದ್ಧ ನೀರು ಜನರು ಸೇವಿಸುತ್ತಾರೆ. ಇಷ್ಟೆಲ್ಲ ಪ್ರಯೋಜನಗಳು ಇಂದಿನ ಪ್ರಧಾನಿ ಭೇಟಿ ನಂತರ ಧಕ್ಕಲಿವೆ.

HAL ಹೆಸರು ಬಗ್ಗೆ ಆರೋಪ, ಸತ್ಯ ಹೊರಬರಲಿದೆ: ಪ್ರಧಾನಿ ಮೋದಿ
ಯೋಜನೆಗಳಿಗೆ ಚಾಲನೆ ನೀಡಿದ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕಕ್ಕೆ ಉದ್ಯೋಗ ನೀಡುವ, ಮಹಿಳೆಯರ ಸಬಲೀಕರಣ ಮಾಡಬಲ್ಲ ಯೋಜನೆಗಳು ಲೋಕಾರ್ಪಣೆ ಆಗಿವೆ. ದೇಶದ ಅತೀ ದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ ತುಮಕೂರಿಗೆ ಸಿಕ್ಕಿದೆ. ಕರ್ನಾಟಕ ಹೆಚ್ಚು ಯುವ ಪ್ರತಿಭೆಯನ್ನು ಹೊಂದಿದೆ. ಡ್ರೋನ್, ತೇಜಸ್ ಇನ್ನಿತರ ಉತ್ಪಾದನೆಗಳಿಗಾಗಿ ವಿಶ್ವ ಭಾರತದತ್ತ ನೋಡುತ್ತಿದೆ. ಏರೋಸೆಕ್ಟರ್ನಲ್ಲಿ ಅತೀ ಹೆಚ್ಚು ಹೂಡಿಕೆ ಆಗಿದೆ. ಯೋಜನೆಗಳಿಂದ 4 ಲಕ್ಷ ಕೋಟಿ ವ್ಯವಹಾರ ಆಗಲಿದೆ ಎಂದು ಪ್ರಧಾನಿ ಮೋದಿಯವರು ಭಾರತ ಹಾಗೂ ಡಬಲ್ ಎಂಜಿನ್ ಸರ್ಕಾರದ ಸಾಧನೆ ಬಗ್ಗೆ ತಿಳಿಸಿದರು.
ಕೆಲವು ವರ್ಷಗಳ ಹಿಂದೆ ಎಚ್ಎಲ್ ಹೆಸರು ಕುರಿತು ಕೇಂದ್ರ ಸರ್ಕಾರದ ಮೇಲೆ ಆರೋಪಿಸಲಾಗಿತ್ತು. ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸಲಾಗಿತ್ತು. ಆದರೆ ಸತ್ಯ ಹೊರ ಬರಲಿದೆ. ಹೆಲಿಕಾಪ್ಟರ್ ಉತ್ಪಾದನಾ ಘಟಕವು ಟೀಕಿಸಿದವರಿಗೆ ಉತ್ತರ ನೀಡಲಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿಗೆ ಅಡಿಕೆ ಪೇಟಾ, ಹಾಫ್ಕೋಟ್ ಗಿಫ್ಟ್
ಗುಬ್ಬಿ ಕಾರ್ಯಕ್ರಮದಲ್ಲಿ ಅಡಿಕೆಯಿಂದ ಮಾಡಿದ ಪೇಟಾ, ಅಡಿಕೆ ಹಾರ ಪ್ರಧಾನಿ ಮೋದಿಗೆ ತೊಡಿಸಲಾಯಿತು. ಅಲ್ಲದೇ ಇಂಡಿಯನ್ ಆಯಿಲ್ನ ಅಧ್ಯಕ್ಷರು ಪ್ರಧಾನಿಗೆ ತ್ಯಾಜ್ಯ ಪೆಟ್ ಬಾಟಲಿಗಳಿಂದ ತಯಾರಿಸಿದ ಪೇಟ ಮತ್ತು ಹಾಫ್ ಕೋಟ್ ಅನ್ನು ಉಡುಗೊರೆಯಾಗಿ ನೀಡಿದರು. ಸದ್ಯ ಇಂಡಿಯಾನ್ ಆಯಿಲ್ ಕಂಪನಿ ತ್ಯಾಜ್ಯ ಪೆಟ್ ಬಾಟಲಿಗಳಿಂದ ಸಶಸ್ತ್ರಪಡೆಗಳಿಗೆ ಸಮವಸ್ತ್ರ ರೂಪಿಸುವ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತಂದಿದೆ.
ಪ್ರಧಾನಿಯವರು ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲೂ ಸಹ ಹಲವು ದೇಶಗಳ ಇಂಧನ ಸಚಿವರು, ರಾಜ್ಯದ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು. ಆಗಮಿಸಿದ್ದ ಜನರಿಗೆ, ಕಾರ್ಯಕರ್ತರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.












Click it and Unblock the Notifications