ಶನಿವಾರ ಬೆಂಗಳೂರಿಗೆ ಮೋದಿ ಭೇಟಿ; ವಾಹನ ಮಾರ್ಗ ಬದಲಾವಣೆ ಮಾಹಿತಿ
ಬೆಂಗಳೂರು, ಮಾರ್ಚ್ 24; ಭಾರತದ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25ರ ಶನಿವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲೆಗಳಲ್ಲಿ ಅವರು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ನಗರದಲ್ಲಿ ವೈಟ್ಫೀಲ್ಡ್-ಕೆಆರ್ ಪುರ ನಡುವಿನ ನಮ್ಮ ಮೆಟ್ರೋ ನೇರಳೆ ರೈಲು ಮಾರ್ಗವನ್ನು ಮೋದಿ ಉದ್ಘಾಟಿಸಲಿದ್ದಾರೆ. ಪ್ರಧಾನಿಗಳ ಭೇಟಿ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.
ನಮ್ಮ ಮೆಟ್ರೋ ರೈಲು ಮಾರ್ಗ ಉದ್ಘಾಟನೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ವೈಟ್ಫೀಲ್ಡ್ಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ವೈಟ್ಫೀಲ್ಡ್ ಸಂಚಾರಿ ಠಾಣೆ ಪೊಲೀಸರು ವಾಹನಗಳ ಸಂಚಾರದಲ್ಲಿ ಹಲವು ಬದಲಾವಣೆ ಮಾಡಿದ್ದಾರೆ. ಈ ಭಾಗದಲ್ಲಿ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿ ಎಂದು ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೈಟ್ಫೀಲ್ಡ್ ಸಂಚಾರಿ ಠಾಣೆ ಪೊಲೀಸರ ಪ್ರಕಟಣೆಯ ಅನ್ವಯ ಸಾರ್ವಜನಿಕ ವಾಹನಗಳ ನಿರ್ಬಂಧ (ಬೆಳಗ್ಗೆ 11 ರಿಂದ ಮಧ್ಯಾಹ್ನ 2.30ರ ತನಕ), ಭಾರೀ ಗಾತ್ರದ ವಾಹನಗಳ ಸಂಚಾರ ನಿರ್ಬಂಧ (ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ) ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ವೈಟ್ಫೀಲ್ಡ್ ಭಾಗದಲ್ಲಿ ಶನಿವಾರ ಸಂಚಾರ ನಡೆಸುವ ಜನರು ಮಾರ್ಗ ಬದಲಾವಣೆ ಬಗ್ಗೆ ಮಾಹಿತಿ ಪಡೆಯುವುದು ಉತ್ತಮ.
ಸಂಚಾರ ಮಾರ್ಗ ಬದಲಾವಣೆ; ಸಾರ್ವಜನಿಕ ವಾಹನಗಳ ಸಂಚಾರ ನಿರ್ಬಂಧಿಸಿರುವ ರಸ್ತೆಗಳು.
* ವರ್ತೂರುಕೋಡಿಯಿಂದ ಹೋಪ್ ಫಾರಂ ವೃತ್ತ-ಕಾಡುಗೋಡಿ -ಕನ್ನಮಂಗಲ ಗೇಟ್
* ಚನ್ನಸಂದ್ರದಿಂದ ಹೋಪ್ ಫಾರಂ ವೃತ್ತದ ಮೂಲಕ ಹೂಡಿ ಸರ್ಕಲ್
* ಕುಂದಲಹಳ್ಳಿ ರಸ್ತೆ-ಗ್ರಾಪೈಟ್ ಜಂಕ್ಷನ್-ವೈದೇಹಿ ಆಸ್ಪತ್ರೆ ವೃತ್ತ-ಬಿಗ್ ಬಜಾರ್ ಜಂಕ್ಷನ್ ಹೋಪ್ ಫಾರಂ ಸರ್ಕಲ್
ನಿರ್ಬಂಧಿಸಿದ ರಸ್ತೆಗಳಿಗೆ ಪರ್ಯಾಯ ಮಾರ್ಗಗಳು
* ವರ್ತೂರುಕೋಡಿ-ಕುಂದಲಹಳ್ಳಿ ಬ್ರಿಡ್ಜ್ - ಹಳೇ ಏರ್ಪೋರ್ಟ್ ರಸ್ತೆ ಮೂಲಕ ತಲುಪುವುದು.
* ಚನ್ನಸಂದ್ರ ಸರ್ಕಲ್ನಿಂದ ನಾಗೊಂಡನಹಳ್ಳಿ-ಇಮ್ಮಡಿಹಳ್ಳಿ-ಹಗದೂರು ಮೂಲಕ
ವರ್ತೂರುಕೋಡಿ ತಲುಪುವುದು.
* ಕಾಟಂನಲ್ಲೂರು ಕ್ರಾಸ್ನಿಂದ ಕನ್ನಮಂಗಲ ಗೇಟ್-ಶಿಗೇಹಳ್ಳಿ ಗೇಟ್-ಹೆಚ್ಪಿ ಪೆಟ್ರೋಲ್ ಬಂಕ್ ಕಾಡುಗೋಡಿ ನಾಲಾ ರಸ್ತೆ ಮೂಲಕ ಚನ್ನಸಂದ್ರ ತಲುಪುವುದು
* ಹೂಡಿ ವೃತ್ತದಿಂದ ಗ್ರಾಫೈಟ್ ರಸ್ತೆ-ಕುಂದಲಹಳ್ಳಿ ರಸ್ತೆ ತಲುಪುವುದು.
* ಹೂಡಿ ವೃತ್ತದಿಂದ ಅಯ್ಯಪ್ಪ ನಗರ-ಬಟ್ಟರಹಳ್ಳಿ ಜಂಕ್ಷನ್-ಮೇಡಹಳ್ಳಿ ಬ್ರಿಡ್ಜ್ ಮೂಲಕ ಕಾಟಂ ನಲ್ಲೂರು ಕ್ರಾಸ್ ಮೂಲಕ ತಲುಪುವುದು.

ಭಾರೀಗಾತ್ರದ ವಾಹನಗಳ ಸಂಚಾರನಿರ್ಬಂಧ
* ಕಾಟಂನಲ್ಲೂರು ಕ್ರಾಸ್ನಿಂದ ಕಾಡುಗೋಡಿ-ಹೋಪ್ ಫಾರಂ ಸರ್ಕಲ್ - ವರ್ತೂರು ಕೋಡಿ ವರೆಗೆ.
* ಗುಂಜೂರು-ವರ್ತೂರು-ವೈಟ್ ಫೀಲ್ಡ್-ಹೋಫ್ ಫಾರಂ ವೃತ್ತ-ಕಾಡುಗೋಡಿ-ಕಾಟಂನಲ್ಲೂರು ಕ್ರಾಸ್ ಕಡೆಗೆ
* ತಿರುಮಲಶೆಟ್ಟಿಹಳ್ಳಿ ಕ್ರಾಸ್ನಿಂದ ಚನ್ನಸಂದ್ರ-ಹೋಫ್ ಫಾರಂ ವೃತ್ತದ ಕಡೆಗೆ.
* ಟಿನ್ ಪ್ಯಾಕ್ಟರಿಕಡೆಯಿಂದ ಹೂಡಿ-ಐ. ಟಿ. ಪಿ. ಎಲ್ ಮುಖ್ಯ ರಸ್ತೆ-ಹೋಫ್ ಫಾರಂ ವೃತ್ತ ಕಡೆಗೆ.
* ಮಾರತಹಳ್ಳಿ ಬ್ರಿಡ್ಜ್ ಕುಂದಲಹಳ್ಳಿ ವರ್ತೂರು ಕೋಡಿ- ವೈಟ್ಫೀಲ್ಡ್ ಕಡೆಗೆ.
ನಿರ್ಬಂಧಿಸಿದ ರಸ್ತೆಗಳಿಗೆ ಪರ್ಯಾಯ ಮಾರ್ಗಗಳು :
* ಹೊಸಕೋಟೆ-ದೊಡ್ಡಗಟ್ಟಿಗನಬ್ಬಿ-ತಿರುಮಲಶೆಟ್ಟಿ ಹಳ್ಳಿ-ಚಿಕ್ಕತಿರುಪತಿ ಮೂಲಕ ಸರ್ಜಾಪುರ ತಲುಪುವುದು.
* ಸರ್ಜಾಪುರ-ಗುಂಜೂರು ಶ್ರೀ ರಾಮದೇವಸ್ಥಾನ-ನೆರಿಗೆ ರಸ್ತೆ-ತಿರುಮಲಶೆಟ್ಟಿ ಹಳ್ಳಿ- ದೊಡ್ಡಗಟ್ಟಿಗನಬ್ಬಿ ಮೂಲಕ ಹೊಸಕೋಟೆ ತಲುಪುವುದು.
* ಟಿನ್ ಪ್ಯಾಕ್ಟರಿ-ಕೆ. ಆರ್. ಪುರಂ-ಬಟ್ಟರಹಳ್ಳಿ ಮೂಲಕ-ಹೊಸಕೋಟೆ ತಲುಪುವುದು.
* ಮಾರತ್ ಹಳ್ಳಿ ದೊಡ್ಡನೆಕ್ಕುಂದಿ-ಮಹದೇವಪುರ-ಟಿನ್ ಫ್ಯಾಕ್ಟರಿ ಬಟ್ಟರಹಳ್ಳಿ ಕಡೆಗೆ ತಲುಪುವುದು.
13.2 ಕಿ. ಮೀ ಮೆಟ್ರೋ ಮಾರ್ಗ; ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ನಮ್ಮ ಮೆಟ್ರೋ ನೇರಳೆ ಮಾರ್ಗದ ಉದ್ದ 15.50 ಕಿ. ಮೀಗಳು. ಮಾರ್ಚ್ 25ರ ಶನಿವಾರ ಪ್ರಧಾನಿ ನರೇಂದ್ರ ಮೋದಿ 13.2 ಕಿ. ಮೀ. (ವೈಟ್ಫೀಲ್ಡ್-ಕೆಆರ್ ಪುರ) ಮಾರ್ಗವನ್ನು ಉದ್ಘಾಟನೆಗೊಳಿಸುತ್ತಿದ್ದಾರೆ. ಈ ಮಾರ್ಗವನ್ನು ಬಿಎಂಆರ್ಸಿಎಲ್ ಐಟಿ ಕಾರಿಡಾರ್ ಎಂದು ಹೆಸರಿಸಿದೆ. 2023ರಲ್ಲಿ ನಗರದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಮೊದಲ ಮೆಟ್ರೋ ಮಾರ್ಗ ಇದಾಗಿದೆ.
ವೈಟ್ಫೀಲ್ಡ್-ಕೆಆರ್ ಪುರ ಮಾರ್ಗದಲ್ಲಿ ಸಂಚಾರ ನಡೆಸಲು 24 ನಿಮಿಷ ಬೇಕಾಗುತ್ತದೆ. ಬಿಎಂಆರ್ಸಿಎಲ್ 10 ರಿಂದ 12 ನಿಮಿಷದ ಅವಧಿಯಲ್ಲಿ ಈ ಮಾರ್ಗದಲ್ಲಿ ರೈಲುಗಳನ್ನು ಓಡಿಸಲಿದೆ. ಇದೇ ಮಾರ್ಗದ ಕೆ. ಆರ್. ಪುರ-ಬೆನ್ನಿಗಾನಹಳ್ಳಿ ಮಾರ್ಗ ಈ ವರ್ಷದ ಜೂನ್ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.
ಈ ಮಾರ್ಗದಲ್ಲಿ ವೈಟ್ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯಸಾಯಿ ಆಸ್ಪತ್ರೆ, ನಲ್ಲೂರುಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗುಡುರಾಚಾರ್ಪಾಳ್ಯ, ಮಹದೇವಪುರ, ಕೆ. ಆರ್. ಪುರ ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣಗಳಿವೆ. ಸದ್ಯ ರೈಲು ವೈಟ್ಫೀಲ್ಡ್- ಕೆ. ಆರ್. ಪುರ ತನಕ ಸಂಚಾರ ನಡೆಸುತ್ತದೆ.












Click it and Unblock the Notifications