ಮನೆಗೆ ವಾಪಸ್ ಕರ್ಕೊಂಡು ಹೋಗಿ: ಖಾಸಗಿ ಶಾಲೆಗಳಿಂದ ಸಂದೇಶ
ಬೆಂಗಳೂರು, ಸೆಪ್ಟೆಂಬರ್ 20: ಬೆಂಗಳೂರು ನಗರದ ಖಾಸಗಿ ಶಾಲೆಗಳಿಂದ ಪೋಷಕರಿಗೆ ಮೊಬೈಲ್ ಸಂದೇಶಗಳು ಬಂದಿದೆ. 11.30ಕ್ಕೆ ಬಂದು ಮಕ್ಕಳನ್ನು ಮನೆಗೆ ಕರೆದೊಯ್ಯಿರಿ ಎಂದು ಆಡಳಿತ ಮಂಡಳಿಯವರು ಮನವಿ ಮಾಡುತ್ತಿದ್ದಾರೆ. ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ವಿಚಾರಣೆ ಮಧ್ಯಾಹ್ನ ಎರಡಕ್ಕೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ತೀರ್ಮಾನಕ್ಕೆ ಬಂದಿದ್ದಾರೆ.
ಕೆಲ ಖಾಸಗಿ ಶಾಲೆಗಳು ಸೋಮವಾರವೇ ರಜೆ ಘೋಷಿಸಿರುವುದರಿಂದ ಮಕ್ಕಳು ಹೋಗಿಲ್ಲ. ಆದರೆ ಹಲವು ಶಾಲೆಗಳು ಮಂಗಳವಾರ ಬೆಳಗ್ಗೆ ಇಂಥ ನಿರ್ಧಾರಕ್ಕೆ ಬಂದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. "ನಾವಿಬ್ಬರೂ ಕೆಲಸಕ್ಕೆ ಹೋಗ್ತೀವಿ. ನನ್ನ ಮಗನ ಶಾಲೆ ಆಫೀಸಿನಿಂದ ಹದಿನೆಂಟು ಕಿಲೋಮೀಟರ್ ದೂರವಿದೆ. ನನಗೆ ಈಗ ಮೆಸೇಜ್ ಬಂದಿದೆ. ಏನು ಮಾಡಲಿ ಹೇಳಿ" ಎಂದು ಖಾಸಗಿ ಕಂಪೆನಿ ಉದ್ಯೋಗಿ ಕುಮಾರ್ ಒನ್ಇಂಡಿಯಾ ಬಳಿ ಬೇಸರ ವ್ಯಕ್ತಪಡಿಸಿದರು.[ಕಾವೇರಿ ಕುದಿ : ಬೆಂಗಳೂರಿನಾದ್ಯಂತ ಅಭೂತಪೂರ್ವ ಬಂದೋಬಸ್ತ್]

ಪೊಲೀಸ್ ಭದ್ರತೆ ಇದೆ, ನಿಷೇಧಾಜ್ಞೆ ಹೇರಲಾಗಿದೆ, ಯಾವುದೇ ತೊಂದರೆ ಇಲ್ಲ ಎಂದು ಎಷ್ಟೇ ಭರವಸೆ ನೀಡಿದರೂ ಶಾಲೆಗಳಿಂದ ವಾಪಸ್ ಕರೆದುಕೊಂಡು ಹೋಗಿ ಎಂದು ಸಂದೇಶ ಕಳಿಸುವುದು, ಹಿಂದಿನ ದಿನವೇ ರಜೆ ಘೋಷಿಸಿರುವುದು ನಡೆದಿದೆ. ಇದೆಂಥ ತೀರ್ಮಾನ ಎಂದು ಸರ್ಕಾರಿ ಶಾಲೆಯಲ್ಲಿ ಓದುವ ಮಗುವೊಂದರ ಪೋಷಕರಾದ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
ಸೆ.12ರಂದು ದಿಢೀರ್ ಗಲಭೆಗಳಾಗಿ ನಮ್ಮ ಮಗುವನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗುವುದರೊಳಗೆ ಎಂಥ ಆತಂಕ ಸೃಷ್ಟಿಯಾಗಿತ್ತು ಗೊತ್ತಾ? ನನ್ನ ಪತಿ ಖಾಸಗಿ ಕಂಪೆನಿಯೊಂದರ ಉದ್ಯೋಗಿ. ನಾವು ಕೆಂಗೇರಿ ಉಪನಗರದಲ್ಲಿ ಇರೋದು. ಮಗು ನಾಯಂಡಹಳ್ಳಿ ಬಳಿ ಶಾಲೆಯೊಂದರಲ್ಲಿ ಓದುತ್ತಿದೆ.[ವದಂತಿಗೆ ಕಿವಿಗೊಡಬೇಡಿ, ಸೆ.20ರಂದು ಬೆಂಗಳೂರು ಬಂದ್ ಇಲ್ಲ]
ಮಗುವನ್ನು ಕರೆದುಕೊಂಡು ಹೋಗಿ ಅಂತ ಶಾಲೆಯವರು ಮೆಸೇಜ್ ಕಳಿಸಿದರು. ಆ ನಂತರ ನಾನು ಪಟ್ಟ ಪಡಿಪಾಟಲು ಯಾರಿಗೂ ಬೇಡ ಎಂದು ನೋವಿನಿಂದ ಹೇಳಿಕೊಂಡರು ಸೀಮಾ.
ಒಟ್ಟಾರೆ ಒಂದೇ ನಗರದಲ್ಲಿ ಎರಡೆರಡು ರೀತಿಯ ಧೋರಣೆ ಅನುಸರಿಸುತ್ತಿರುವುದು, ಶಾಲೆಯ ಆಡಳಿತ ಮಂಡಳಿಯ ಧೋರಣೆ, ಈ ಬಗ್ಗೆ ಸರಕಾರದ ಜಾಣ ಮೌನದ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಲಾಟೆ ಆಗಲಿ ಎಂಬುದು ನಮ್ಮ ನಿರೀಕ್ಷೆಯಲ್ಲ. ಆದರೆ ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications