ಹಜ್ ಯಾತ್ರಿಗಳಿಗೆ ಫ್ರೆಶ್ ಚಿಕನ್, ಮಟನ್ : ಬೇಗ್
ಬೆಂಗಳೂರು, ಜೂ.18: ರಾಜ್ಯದ ಹಜ್ ಯಾತ್ರಿಗಳಿಗೆ ಮದೀನಾದಲ್ಲಿ ಸೂಕ್ತ ವಸತಿ ವ್ಯವಸ್ಥೆ, ತಾಜಾ ಭಾರತೀಯ ಆಹಾರ ನೀಡಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಯಾತ್ರಾರ್ಥಿಗಳು ಅಡುಗೆ ಮಾಡಿಕೊಳ್ಳುವ ಕಷ್ಟ ಇನ್ಮುಂದೆ ಇರುವುದಿಲ್ಲ ಎಂದು ಕರ್ನಾಟಕದ ಮೂಲ ಸೌಲಭ್ಯ ಅಭಿವೃದ್ಧಿ, ಹಜ್ ಮತ್ತು ವಾರ್ತಾ ಸಚಿವ ಆರ್. ರೋಷನ್ ಬೇಗ್ ಅವರು ಹೇಳಿದ್ದಾರೆ.
ಸಾವಿರಾರು ಜನ ಮುಸ್ಲಿಂ ಮಹಿಳೆಯರು ಆಹಾರ ಸಾಮಾಗ್ರಿಗಳನ್ನು ಕೊಂಡೊಯ್ದು ಮದೀನಾದಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದರು. ಮೆಕ್ಕಾ, ಮದೀನಾ ಯಾತ್ರೆಗೆ ತೆರಳುವವರು ಕನಿಷ್ಠ 40 ರಿಂದ 45 ದಿನಗಳ ಕಾಲ ಮದೀನಾದಲ್ಲೇ ಉಳಿದುಕೊಳ್ಳಬೇಕಾಗುತ್ತದೆ. ಈಗ ಮನೆ ಅಡುಗೆ ಮಾದರಿಯ ಊಟೋಪಚಾರವನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.[ಹಜ್ ಯಾತ್ರಿಕರನ್ನು ವಂಚಿಸಿದರೆ, ಕೇಸ್]
ಅಡುಗೆ ಮಾಡುವುದು ನಿಷೇಧ : ಮದೀನಾದಲ್ಲಿ ಯಾತ್ರಿಗಳು ತಮ್ಮ ವಸತಿ ಗೃಹಗಳಲ್ಲಿ ಅಡುಗೆ ಮಾಡುವುದನ್ನು ಸೌದಿ ಅರೇಬಿಯಾದ ಸರ್ಕಾರ ನಿಷೇಧಿಸಿರುವ ಹಿನ್ನಲೆಯಲ್ಲಿ ಭಾರತೀಯ ಹಜ್ ಯಾತ್ರಿಗಳಿಗೆ ಭಾರತೀಯ ಆಹಾರವನ್ನೇ ಒದಗಿಸುವ ಬಗ್ಗೆ ವಸತಿ ಸೌಲಭ್ಯ ಒದಗಿಸುವ 6 ಸಂಸ್ಥೆಗಳೊಂದಿಗೆ ಭಾರತದ ಕೇಂದ್ರ ಹಜ್ ಸಮಿತಿಯ ನಿಯೋಗವು ಒಪ್ಪಂದ ಮಾಡಿಕೊಂಡಿದೆ ಎಂದು ಅವರು ತಿಳಿಸಿದರು.
ಮೊಹಮ್ಮದ್ ಮರ್ಗೂಬ್ ಅಹ್ಮದ್ ಭರವಸೆ
ಕೇಂದ್ರ ಹಜ್ ಸಮಿತಿಯ ಉಪಾಧ್ಯಕ್ಷರೂ ಆಗಿರುವ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಮರ್ಗೂಬ್ ಅಹ್ಮದ್ ಅವರು ಭಾರತದ ನಿಯೋಗವು ಈ ಸಂಸ್ಥೆಗಳೊಂದಿಗೆ ಚರ್ಚಿಸಿದ್ದು ತಾಜಾ ಭಾರತೀಯ ಆಹಾರವನ್ನು ಮಧ್ಯಾಹ್ನ ಹಾಗೂ ರಾತ್ರಿ ಒದಗಿಸಲು ಸಮ್ಮತಿಸಿವೆ.
ಊಟಕ್ಕೆ ಎರಡು ಚಪಾಟಿ, ಅನ್ನ, ಮೊಸರು, ಉಪ್ಪಿನಕಾಯಿ, ಚಿಕನ್, ಮಟನ್ ಅಥವಾ ಮೀನಿನ ಪದಾರ್ಥಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲಿವೆ. ಬೆಳಗಿನ ಉಪಹಾರವನ್ನು ಉಚಿತವಾಗಿ ಒದಗಿಸಲಿವೆ ಎಂದು ಅವರು ತಿಳಿಸಿದರು.ಮೊದಲ ಕಂತಿನ ಶುಲ್ಕ ಪಾವತಿಯಾಗಿದೆ.
ಈ ಬಾರಿ ರಾಜ್ಯಕ್ಕೆ 4977 ಯಾತ್ರಿಗಳಿಗೆ ಅವಕಾಶ ಒದಗಿಸಲಾಗಿದ್ದು 4692 ಯಾತ್ರಿಗಳು ಮೊದಲ ಕಂತಿನ ಶುಲ್ಕವನ್ನು ಈಗಾಗಲೇ ಪಾವತಿಸಲಾಗಿದೆ. ಜೂ. 23 ರಂದು ನವ ದೆಹಲಿಯಲ್ಲಿ ನಡೆಯಲಿರುವ ಹಜ್ ಸಮಿತಿಗಳ ಸಮ್ಮೇಳನದಲ್ಲಿ ಹಜ್ ಯಾತ್ರೆಯ ಸಿದ್ದತೆ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಯಲಿದೆ.
ಹಜ್ ಯಾತ್ರಿಗಳಿಗೆ ತರಬೇತಿ
ಜುಲೈ ತಿಂಗಳಿನಲ್ಲಿ ಹಜ್ ಯಾತ್ರಿಗಳಿಗೆ ತರಬೇತಿ ಏರ್ಪಡಿಸಲಾಗುವುದು. ಇದರಲ್ಲಿ ಯಾತ್ರೆಯ ಸಂದರ್ಭದಲ್ಲಿ ಅನುಸರಿಸಬೇಕಾದ ನೀತಿ ನಿಯಮಗಳ, ನಡವಳಿಕೆಗಳ ಕುರಿತು ಮಾರ್ಗದರ್ಶನ ನೀಡಲಾಗುವುದು. ಕರ್ನಾಟಕ ರಾಜ್ಯದಲ್ಲಿ ಮಾತ್ರ ಇಂಥ ವ್ಯವಸ್ಥೆ ಇದೆ. ಇದು ಸಚಿವ ರೋಷನ್ ಬೇಗ್ ಅವರ ಕಲ್ಪನೆಯ ಕೂಸು ಎಂದು ಮೊಹಮ್ಮದ್ ಮರ್ಗೂಬ್ ಅಹ್ಮದ್ ತಿಳಿಸಿದರು.
ಖಾಸಗಿಯವರಿಗೆ ಹೆಚ್ಚಿನ ಅವಕಾಶ ಸಚಿವರ ಆಕ್ಷೇಪ
ಹಜ್ ಸಮಿತಿಗಳು ಏರ್ಪಡಿಸುವ ಯಾತ್ರೆಯಲ್ಲಿ 2 ಲಕ್ಷದೊಳಗೆ ವೆಚ್ಚವಾದರೆ ಖಾಸಗಿ ಸಂಸ್ಥೆಗಳು 3 ರಿಂದ 7 ಲಕ್ಷ ರೂ. ಶುಲ್ಕ ವಿಧಿಸುತ್ತವೆ. ಇದರಿಂದ ಬಡಜನರ ಮೇಲೆ ಹೆಚ್ಚಿನ ಹೊರೆಯಾಗುತ್ತದೆ. ಆದ್ದರಿಂದ ಖಾಸಗಿ ಸಂಸ್ಥೆಗಳಿಗೆ ನಿಗದಿಪಡಿಸಿದ ಕೋಟಾವನ್ನು ಕಡಿಮೆ ಮಾಡಬೇಕೆಂದು ಸಚಿವರು ಅಭಿಪ್ರಾಯಪಟ್ಟರು. ನವದೆಹಲಿಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಈ ಬಗ್ಗೆ ವಿದೇಶಾಂಗ ಸಚಿವರ ಗಮನ ಸೆಳೆಯುವುದಾಗಿ ತಿಳಿಸಿದರು
ಹಜ್ ಯಾತ್ರೆಗೆ 17 ಸಾವಿರ ಅರ್ಜಿ
ಕರ್ನಾಟಕದಲ್ಲಿ ಈ ಬಾರಿ ಹಜ್ ಯಾತ್ರೆಗೆ ತೆರಳಲು 17,182 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 8,762 ಪುರುಷರು ಮತ್ತು 8,409 ಮಹಿಳೆಯರು ಹಾಗೂ 11 ಮಕ್ಕಳು ಸೇರಿದ್ದಾರೆ ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಎಂ.ಎಂ. ಅಹ್ಮದ್ ತಿಳಿಸಿದರು. ಅರ್ಜಿ ಸಲ್ಲಿಸಿದವರ ಪೈಕಿ ಆನ್ ಲೈನ್ ಲಾಟರಿ ಮೂಲಕ 3,628 ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದರು.