ಬೆಂಗಳೂರಿನ ಡಾಕ್ಟರ್ ಕೊಲೆ ಪ್ರಕರಣ: ಗೆಳೆಯನ್ನನೇ ಕೊಂದಿದ್ದ ಆಂಧ್ರಪ್ರದೇಶದ ಮೂವರ ಬಂಧನ
ಹಳೆಯ ದ್ವೇಷ ಮತ್ತು ಹಣಕಾಸಿನ ವಿಚಾರದಲ್ಲಿ ಕೊಲೆ ನಡೆದಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಬೆಂಗಳೂರು, ಮಾರ್ಚ್ 07: ಕಳೆದ ತಿಂಗಳು 32 ವರ್ಷದ ಫಿಸಿಯೋಥೆರಪಿಸ್ಟ್ ಒಬ್ಬರನ್ನು ಕೊಂದು ದೇಹವನ್ನು ಸುಡಲು ಯತ್ನಿಸಿದ ಆರೋಪದ ಮೇಲೆ ಮೂವರನ್ನು ಬೆಂಗಳೂರು ನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಹಳೆಯ ದ್ವೇಷದ ಕಾರಣ ಗೆಳೆಯರೇ ಆತನನ್ನು ಕೊಲೆ ಮಾಡಿರುವುದು ಪತ್ತೆಯಾಗಿದೆ.
ಮೃತ ಫಿಸಿಯೋಥೆರಪಿಸ್ಟ್ ಕೆ ಶ್ರೀಧರ್ ಅವರ ಕಿರಿಯ ಸಹೋದರ ಫೆಬ್ರವರಿ 4 ರಂದು ನಗರ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಫೆಬ್ರವರಿ 7 ರಂದು ವಾಯುವ್ಯ ಬೆಂಗಳೂರಿನ ಸೋಲದೇವನಹಳ್ಳಿಯ ಗಾಣಿಗರಹಳ್ಳಿ ಬಳಿ ಡಾಕ್ಟರ್ ಕೆ ಶ್ರೀಧರ್ ಶವವಾಗಿ ಪತ್ತೆಯಾಗಿದ್ದರು. ಹಳೆಯ ದ್ವೇಷ ಮತ್ತು ಹಣಕಾಸಿನ ವಿಚಾರದಲ್ಲಿ ಕೊಲೆ ನಡೆದಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳನ್ನು ಬಿ ವೀರಾಂಜನೇಯುಲು, ಎಸ್ ಗೋವರ್ಧನ್ ಮತ್ತು ಎನ್ ಬುಡ್ಡಪ್ಪ ಎಂದು ಗುರುತಿಸಲಾಗಿದ್ದು, ಎಲ್ಲರೂ ಸ್ವಯಂ ಉದ್ಯೋಗಿಗಳಾಗಿದ್ದಾರೆ. ಯಲಹಂಕದಲ್ಲಿ ವಾಸವಾಗಿರುವ ಇವರು ಆಂಧ್ರಪ್ರದೇಶದ ನಿವಾಸಿಗಳು. ಪ್ರಾಥಮಿಕ ತನಿಖೆಯ ಪ್ರಕಾರ ವೀರಾಂಜನೇಯುಲು ಮತ್ತು ಶ್ರೀಧರ್ ಕಳೆದ ವರ್ಷ ಹಣಕಾಸಿನ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದರು. ಅಂದಿನಿಂದ ಅವರ ನಡುವೆ ವೈಮನಸ್ಸು ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 4 ರಂದು ಸಂಜೆ ಎನ್ ಬುಡ್ಡಪ್ಪ ಮತ್ತು ಗೋವರ್ಧನ್ ಅವರು ಡಾಕ್ಟರ್ ಶ್ರೀಧರ್ ಅವರನ್ನು ಗಾಣಿಗಾರನಹಳ್ಳಿಗೆ ಕರೆದೊಯ್ಯುವ ಮೊದಲು ಬಾರ್ಗೆ ಕರೆದುಕೊಂಡು ಹೋಗಿದ್ದಾರೆ. ಬಂಧಿತ ಆರೋಪಿ ವೀರಾಂಜನೇಯುಲು ಮನೆಯಲ್ಲಿ ಮತ್ತೆ ಪಾರ್ಟಿ ಮಾಡುವಾಗ ಈ ಹಿಂದೆ ಬಾರ್ನಲ್ಲಿ ನಡೆದಿದ್ದ ಜಗಳವ್ನು ನೆನಪಿಸಿ ಗಲಾಟೆ ಶುರು ಮಾಡಿದ್ದಾರೆ. ಬಳಿಕ ವೀರಾಂಜನೇಯುಲು, ಎನ್ ಬುಡ್ಡಪ್ಪ ಮತ್ತು ಗೋವರ್ಧನ್ ಸೇರಿಕೊಂಡು ಸ್ಥಳದಲ್ಲೇ ಶ್ರೀಧರ್ ಅವರ ಕತ್ತು ಸೀಳಿದ್ದಾರೆ. ನಂತರ ಅವರ ದೇಹವನ್ನು ಸುಡಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಜಗಳದ ವೇಳೆ ಶ್ರೀಧರ್ ಕೆಟ್ಟದಾಗಿ ನಿಂದಿಸಿ, ಹಲ್ಲೆ ಮಾಡಲು ಮುಮದಾಗಿದ್ದಾಗ ವೀರಾಂಜನೇಯುಲು ಶಾಂತವಾಗಿದ್ದರು. ಅಂದಿನಿಂದ ಸೇಡು ತೀರಿಸಿಕೊಳ್ಳಲು ಅವಕಾಶವನ್ನು ಹುಡುಕುತ್ತಿದ್ದರು ಎಂದು ತನಿಖಾಧಿಕಾರಿ ಹೇಳಿದ್ದಾರೆ. ಸಿಕ್ಕಿ ಬಿದ್ದ ಮೂವರ ಮೇಲೆ ಪೊಲೀಸರು ಕೊಲೆ ಮತ್ತು ಸಾಕ್ಷ್ಯ ನಾಶದ ಆರೋಪ ಹೊರಿಸಿದ್ದಾರೆ.
ಒಂದು ಮೂಲದ ಪ್ರಕಾರ, ಪೊಲೀಸರು ಅಪರಿಚಿತ ಮೃತದೇಹವನ್ನು ಪತ್ತೆ ಮಾಡಿದ್ದರು. ನಂತರ ಅದನ್ನು ಶ್ರೀಧರ್ ಅವರ ಸಹೋದರ ಪ್ರಸಾದ್ ಗುರುತಿಸಿದ್ದಾರೆ. ಬಳಿಕ ಪೊಲೀಸರು ಶ್ರೀಧರ್ ಅವರ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ, ಅವರನ್ನು ಕೊನೆಯದಾಗಿ ಸಂಪರ್ಕಿಸಿದ್ದ ವ್ಯಕ್ತಿ ವೀರಾಂಜನೇಯುಲು ಎಂದು ತಿಳಿದುಬಂದಿದೆ. ಇದರಿಂದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.












Click it and Unblock the Notifications