ಬೆಂಗಳೂರು: ಪಿಜಿ ಮಾಲೀಕನ ಹತ್ಯೆ, ಅಡುಗೆ ಭಟ್ಟನ ಮೇಲೆ ಶಂಕೆ
ಬೆಂಗಳೂರು, ಡಿಸೆಂಬರ್ 13: ಮೈಕೊ ಲೇಔಟ್ ನ ಬಾರ್ ರಸ್ತೆಯ ಪಿಜಿಯೊಂದರ ಅಡುಗೆ ಮನೆಯಲ್ಲಿ ಅದೇ ಪಿಜಿ ಮಾಲೀಕನ ಶವ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಮಾಜಿ ಜೆಡಿಎಸ್ ಕಾರ್ಪೋರೇಟರ್ ಬರ್ಬರ ಹತ್ಯೆ
ಪಿಜಿ ಮಾಲೀಕ ತಿರುಪಾಲ ರೆಡ್ಡಿ ಅವರನ್ನು ಯಾರೊ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ, ಪಿಜಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ವ್ಯಕ್ತಿಯೇ ಕೊಲೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇಂದು ಬೆಳಿಗ್ಗೆ ತಿಪಾಲ ರೆಡ್ಡಿಯ ಮಗ ಪಿಜಿಗೆ ಬಂದಾಗ ಅಡುಗೆ ಮನೆಯಲ್ಲಿ ಬಿದ್ದಿದ್ದ ತನ್ನ ತಂದೆಯ ಶವ ನೋಡಿ ಕಿರುಚಿದಾಗ ಕೊಲೆಯ ವಿಷಯ ತಿಳಿದುಬಂದಿದೆ.
ನಿನ್ನೆ ರಾತ್ರಿ (ಡಿಸೆಂಬರ್ 12) ಪಿಜಿ ಮಾಲೀಕ ತಿರುಪಾಲ ರೆಡ್ಡಿಗೂ ಅಡುಗೆ ಭಟ್ಟನಿಗೂ ಹಣಕಾಸಿನ ವಿಷಯಕ್ಕೆ ಜಗಳವಾಗಿತ್ತು, ಅದೇ ವೈಷಮ್ಯದಿಂದ ಅಡುಗೆ ಭಟ್ಟನೇ ತಿರುಪಾಲ ರೆಡ್ಡಿಯ ಕೊಲೆ ಮಾಡಿರಬಹುದು ಎನ್ನು ಶಂಕೆ ಬಲವಾಗಿದೆ.
ಬಿಹಾರ ಮೂಲದ ಅಡುಗೆ ಭಟ್ಟ ನಿನ್ನೆ ರಾತ್ರಿಯಿಂದಲೂ ಕಾಣುತ್ತಿಲ್ಲ, ಪಿಜಿಯಲ್ಲಿದ್ದ ಹಣವೂ ಕಾಣೆಯಾಗಿದೆ ಹಾಗಾಗಿ ಪೊಲೀಸರು ಅಡುಗೆ ಭಟ್ಟ ಕೊಲೆ ಮಾಡಿರುವ ಸಾಧ್ಯತೆ ಹೆಚ್ಚಾಗಿದೆ ಎಂದಿದ್ದಾರೆ. ಕೊಲೆ ಮಾಡುವ ಮುಂಚೆ ಸಿಸಿಟಿವಿ ಆಫ್ ಮಾಡಿ ಮಾಡಿದ್ದರಿಂದ ನಿಖರವಾಗಿ ಕೊಲೆ ಮಾಡಿದವರು ಯಾರೆಂದು ತಿಳಿದುಬಂದಿಲ್ಲ.
ಮೈಕೋ ಲೇಔಟ್ ಪೊಲೀಸರು ಅಡುಗೆ ಭಟ್ಟನ ಬಂಧನಕ್ಕೆ ಬಲೆ ಬೀಸಿದ್ದಾರೆ, ಪಿಜಿಯಲ್ಲಿ ಅಡುಗೆ ಭಟ್ಟನ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ಪೊಲೀಸರ ಕೆಲಸವನ್ನು ಹೆಚ್ಚಿಸಿದೆ.