ಅಡುಗೆ ಅನಿಲ ವಿತರಣೆ: ಮಹತ್ವದ ಬದಲಾವಣೆಗೆ ಬಿರುಸಿನ ಸಿದ್ದತೆ
ಬೆಂಗಳೂರು ನಗರ ವ್ಯಾಪ್ತಿಗೆ ಅನ್ವಯವಾಗುವಂತೆ ಮುಂದಿನ ಮೂವತ್ತು ದಿನದೊಳಗೆ ಅಡುಗೆ ಅನಿಲ ವಿತರಣೆಯನ್ನು ನಗದುರಹಿತ ವ್ಯವಹಾರವನ್ನಾಗಿ ಮಾಡಲು ಪೆಟ್ರೋಲಿಯಂ ಸಚಿವಾಲಯ ಬಿರುಸಿನ ಸಿದ್ದತೆ ನಡೆಸುತ್ತಿದೆ.
ಬೆಂಗಳೂರು, ಡಿ 27: ಪ್ರಧಾನಮಂತ್ರಿಯವರ ನಗದುರಹಿತ ಆರ್ಥಿಕ ವ್ಯವಹಾರದ ಕನಸಿಗೆ ಸ್ಪಂಧಿಸಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಪ್ರಾಯೋಗಿಕವಾಗಿ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಅನ್ವಯವಾಗುವಂತೆ ಮಹತ್ವದ ಬದಲಾವಣೆ ತರಲು ಮುಂದಾಗಿದೆ.
ಅಡುಗೆ ಅನಿಲ ವಿತರಣೆಗೆ ಸಂಬಂಧಿಸಿದಂತೆ ಗರಿಷ್ಠ ಮುಂದಿನ ಮೂವತ್ತು ದಿನದೊಳಗೆ, ಭಾರತ್ ಪೆಟ್ರೋಲಿಯಂ, ಹಿಂದೂಸ್ಥಾನ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಗಳಿಗೆ 'ಪಿಓಎಸ್' (ಸ್ವೈಪಿಂಗ್ ಮೆಷಿನ್) ಖರೀದಿಸುವಂತೆ ಸಚಿವಾಲಯ ಸೂಚಿಸಿದೆ. (ಸಬ್ಸಿಡಿಯುಳ್ಳ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ)

ಆ ಮೂಲಕ ಸಂಪೂರ್ಣ ನಗದುರಹಿತ ವ್ಯವಹಾರವನ್ನು ಬೆಂಗಳೂರು ನಗರದಲ್ಲಿ ಆರಂಭಿಸಲು ಸಚಿವಾಲಯ ನಿರ್ಧರಿಸಿದ್ದು, ಎಲ್ಲಾ ಇಲಾಖೆಯ ಯೋಜನೆ ಪ್ರಕಾರ ನಡೆದರೆ ಮುಂದಿನ 20-30ದಿನದೊಳಗೆ ಗ್ರಾಹಕರು ಪಿಓಎಸ್ ಮೂಲಕ ಹಣ ಪಾವತಿಸಬಹುದಾಗಿದೆ.
ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸೂಚನೆಯ ಮೇರೆಗೆ ಮೂರು ಅನಿಲ ವಿತರಕ ಸಂಸ್ಥೆಯ ಅಧಿಕಾರಿಗಳು ಮತ್ತು ಏಜೆನ್ಸಿಗಳ ಮಾಲೀಕರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಸಚಿವಾಲಯದ ಉಪಕಾರ್ಯದರ್ಶಿಗಳು ತಿಳಿಸಿದ್ದಾರೆ,
ಕ್ಯಾಷ್ ಲೆಸ್ ವ್ಯವಹಾರ ನಡೆಸಿದರೆ ಗ್ರಾಹಕರಿಗೆ ಮತ್ತು ಏಜೆನ್ಸಿ ಇಬ್ಬರಿಗೂ ಅನುಕೂಲವಾಗಲಿದೆ. ಪ್ರಮುಖವಾಗಿ ಕಳ್ಳನೋಟು ಸಮಸ್ಯೆ ವಿತರಕರಿಗೆ ತಪ್ಪಲಿದೆ.
ಇನ್ನು ಗ್ರಾಹಕರಿಗೆ ಚಿಲ್ಲರೆ ಸಮಸ್ಯೆ ತಪ್ಪುವುದು ಒಂದೆಡೆಯಾದರೆ, ಸಿಲಿಂಡರಿನ ನಿಖರವಾದ ಮೊತ್ತವನ್ನು ಮಾತ್ರ ಪಾವತಿಸಲು ಸುಲಭವಾಗಲಿದೆ.












Click it and Unblock the Notifications