ಬೆಂಗಳೂರಿನಲ್ಲಿ ಗಗನಸಖಿಯ ಮೇಲುಡುಪು ಎಳೆದಿದ್ದ ಆರೋಪಿ ಬಂಧನ
ಬೆಂಗಳೂರು, ಫೆಬ್ರವರಿ. 24 : ಫೆಬ್ರವರಿ 12ರಂದು ಬೆಂಗಳೂರಿನ ಹೆಚ್ಬಿಆರ್ ಲೇಔಟ್ ಬಳಿ ಗಗನ ಸಖಿಯೊಬ್ಬರ ಎದೆ ಮೇಲಿನ ಬಟ್ಟೆ ಎಳೆದು ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
28 ವರ್ಷದ ಪ್ರೇಮ್ ಕುಮಾರ್ ಬಂಧಿತ ಆರೋಪಿ. ಬಾಣಸವಾಡಿಯ ಮಾರುತಿ ಸೇವಾನಗರದ ನಿವಾಸಿಯಾಗಿರುವ ಈತ ಪೇಂಟರ್ ಕೆಲಸ ಮಾಡುತ್ತಿದ್ದಾನೆ.[ಬೆಂಗಳೂರಿನಲ್ಲಿ ಗಗನಸಖಿ ಮೇಲುಡುಪು ಹರಿದು ದುರುಳ ಪರಾರಿ]
ಕಳೆದ ಫೆಬ್ರವರಿ 12ರಂದು ಗಗನ ಸಖಿ ಊಟ ಮುಗಿಸಿ ತನ್ನ ಗೆಳೆಯ ಜೊತೆ ರಾತ್ರಿ ಹೆಚ್ ಬಿಆರ್ ಲೇಔಟ್ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಎರಡು ಬೈಕಿನಲ್ಲಿ ಬಂದ ಹೆಲ್ಮೆಟ್ ಧಾರಿ ದುಷ್ಕರ್ಮಿಗಳು ಆಕೆಯ ಎದೆಯ ಮೇಲಿನ ಬಟ್ಟೆ ಎಳೆದು ಅಸಭ್ಯವಾಗಿ ವರ್ತನೆ ಮಾಡಿದ್ದರು.
ಕೂಡಲೇ ಯುವತಿ ಕಿರುಚಾಡಿದ್ದು, ಗೆಳೆಯನಿದ್ದ ಕಾರಣ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದರು. ಈ ಘಟನೆ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯ ಮೇಲೆ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.