ಮಹಿಳೆಯರ ಶೌಚಾಲಯಕ್ಕೆ ನುಗ್ಗಿದವನಿಗೆ ಧರ್ಮದೇಟು
ಬೆಂಗಳೂರು, ಆ, 18 :ಮಹಿಳೆಯರ ಶೌಚಾಲಯಕ್ಕೆ ನುಗ್ಗಿದ ಯುವಕನಿಗೆ ಸಾರ್ವಜನಿಕರೇ ಗೂಸಾ ನೀಡಿದ್ದಾರೆ. ಮಡಿವಾಳದ ಸಿದ್ಧಾರ್ಥ ನಗರದ ಮಹಿಳೆಯರ ಶೌಚಾಲಯಕ್ಕೆ ನುಗ್ಗಿದ ಪುಂಡ ರಮೇಶ್(18) ಸಾರ್ವಜನಿರಿಂದ ಧರ್ಮದೇಟು ತಿಂದು ಲಾಕಪ್ ಸೇರಿದ್ದಾನೆ.
ಸಿದ್ಧಾರ್ಥ ನಗರದ ಕೊಳೆಗೇರಿ ನಿವಾಸಿ ರಮೇಶ್ ಮತ್ತು ಆತನ ಇಬ್ಬರು ಸ್ನೇಹಿತರು ಭಾನುವಾರ ಬೆಳಗ್ಗೆ ಮಹಿಳೆಯರ ಶೌಚಾಲಯಕ್ಕೆ ನುಗ್ಗಿದ್ದರು. ಪುಂಡರನ್ನು ಕಂಡು ಮಹಿಳೆಯರು ಕಿರುಚಿಕೊಂಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಯುವಕರನ್ನು ಹಿಡಿಯಲೆತ್ನಿಸಿದ್ದಾರೆ. ಆದರೆ ರಮೇಶ್ ಮಾತ್ರ ಜನರ ಕೈಗೆ ಸಿಕ್ಕಿಬಿದ್ದಿದ್ದು ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಕೈಗೆ ಸಿಕ್ಕ ರಮೇಶ್ ನ್ನು ಸಾರ್ವಜನಿಕರು ಟಾಯ್ಲೆಟ್ ಎದುರಿನ ಕಂಬಕ್ಕೆ ಕಟ್ಟಿ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಧರ್ಮದೇಟು ತಿಂದ ರಮೇಶ್ನನ್ನು ನಂತರ ಪೊಲೀಸರ ವಶಕ್ಕೆ ನೀಡಲಾಗಿದೆ.

ಪ್ರತಿದಿನ ಮಹಿಳೆಯರನ್ನು ಚುಡಾಯಿಸುತ್ತಿದ್ದ: ರಮೇಶ್ ಮತ್ತು ಆತನ ಪುಂಡ ಸ್ನೇಹಿತರ ಗುಂಪು ಪ್ರತಿದಿನ ಬೆಳಗ್ಗೆ ಮದ್ಯ ಸೇವಿಸಿ ಮಹಿಳೆಯರ ಶೌಚಾಲಯದ ಎದುರು ಹಾಜರಿರುತ್ತಿತ್ತು. ಟಾಯ್ಲೆಟ್ಗೆ ಹೋಗಿ ಬರುವ ಮಹಿಳೆಯರನ್ನು ಕಿಚಾಯಿಸುತ್ತಾ, ಅಶ್ಲೀಲ ಮಾತುಗಳಿಂದ ನಿಂದಿದುತ್ತಾ ವಿಕೃತ ಆನಂದ ತೆಗೆದುಕೊಳ್ಳುತ್ತಿತ್ತು. ಈ ಬಗ್ಗೆ ಸಾರ್ವಜನಿರಿಗೆ ಮೊದಲಿನಿಂದಲೂ ಅನುಮಾನವಿದ್ದರೂ ಭಾನುವಾರ ರೆಡ್ ಹ್ಯಾಂಡ್ಆಗಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.
ಗಾಂಜಾ ಮತ್ತಿನಲ್ಲಿ ಕೃತ್ಯ: ಮದ್ಯ ಮತ್ತು ಗಾಂಜಾ ದಾಸರಾಗಿದ್ದ ಆರೋಪಿಗಳು ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಿರ್ಜನ ಪ್ರದೇಶದಲ್ಲಿ ರಾತ್ರಿ ಓಡಾಡುವವರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಸುಲಿಗೆ ಮಾಡುತ್ತಿದ್ದರು. ಅದೇ ರೀತಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದು ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮಹಿಳೆರ ಶೌಚಾಲಯಕ್ಕೆ ನುಗ್ಗಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications