ಲಿಂಗಾಯತರ ವಿಚಾರದಲ್ಲಿ ಪೇಜಾವರ ಶ್ರೀ ಹಸ್ತಕ್ಷೇಪ ಬೇಡ: ಎಂ.ಬಿ.ಪಾಟೀಲ್
ಬೆಂಗಳೂರು, ಜುಲೈ 25: ಲಿಂಗಾಯತ ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಬೇಕು ಎಂಬ ನಮ್ಮ ಒತ್ತಾಯದ ವಿಚಾರದಲ್ಲಿ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥ ಸ್ವಾಮೀಜಿ ಹಸ್ತಕ್ಷೇಪ ಮಾಡುವುದು ಬೇಡ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈ ಹೋರಾಟದ ಬಗ್ಗೆ ಮಾರ್ಗದರ್ಶನ ನೀಡಲು ನಮ್ಮ ಸಮುದಾಯದ ಸ್ವಾಮೀಜಿ ಇದ್ದಾರೆ. ಪೇಜಾವರ ಶ್ರೀಗಳು ಆ ಕುರಿತು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇನ್ನು ಈ ವಿಚಾರವಾಗಿ ಆರೆಸ್ಸೆಸ್ ನ ಮಧ್ಯಪ್ರವೇಶ ಕೂಡ ಅಗತ್ಯವಿಲ್ಲ ಎಂದಿದ್ದಾರೆ.

ಪಂಚ ಪೀಠಗಳ ಮಠಾಧಿಪತಿಗಳು ಬೆಂಬಲಕ್ಕೆ ಬರದಿದ್ದರೂ ಲಿಂಗಾಯತ ಸ್ವತಂತ್ರ ಧರ್ಮವನ್ನಾಗಿಸಲು ಹೋರಾಟ ನಡೆಸುತ್ತೇವೆ. ಸಂಪುಟದಲ್ಲೂ ಒಪ್ಪಿಸುತ್ತೇವೆ. ಕೇಂದ್ರ ಸರಕಾರವು ನಮ್ಮ ಮನವಿ ಪುರಸ್ಕರಿಸದಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ನಮ್ಮ ಸಮಾಜದಲ್ಲಿ ಕೆಲವರು ಬಸವಣ್ಣನನ್ನು ನಂಬುವುದಿಲ್ಲ. ಅಂತಹವರು ಹಿಂದೂ ಧರ್ಮದಲ್ಲೇ ಮುಂದುವರಿಯಲಿ ಎಂದ ಅವರು, ಯಡಿಯೂರಪ್ಪ ಅವರು ಈ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳುವುದಿಲ್ಲ. ಅವರು ಆರೆಸ್ಸೆಸ್ ಹಿಡಿತದಲ್ಲಿದ್ದಾರೆ. ಚುನಾವಣೆಯಲ್ಲಿ ತೊಂದರೆಯಾದೀತು ಎಂಬ ಲೆಕ್ಕಾಚಾರದಲ್ಲಿ ತಪ್ಪು ಮಾಡುತ್ತಿದ್ದಾರೆ ಎಂದರು.
ಲಿಂಗಾಯತರು ತಾವು ಹಿಂದೂ ಧರ್ಮದ ಭಾಗವಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥರು ಹೇಳಿದ್ದರು.












Click it and Unblock the Notifications