ಶುಕ್ರವಾರ ಓಡಲಿದೆ ಸಂಪಿಗೆ ರಸ್ತೆ-ಪೀಣ್ಯ ಮೆಟ್ರೋ ರೈಲು
ಬೆಂಗಳೂರು, ಫೆ.28 : ಬೆಂಗಳೂರಿಗರ ಬಹುದಿನದ ಕನಸು ಶುಕ್ರವಾರ ನನಸಾಗಲಿದೆ. ಸಂಪಿಗೆ ರಸ್ತೆ-ಪೀಣ್ಯ ಮಾರ್ಗದಲ್ಲಿ ಚಲಿಸುವ 'ಹಸಿರು ಬಣ್ಣ'ದ ನಮ್ಮ ಮೆಟ್ರೋ ರೈಲಿಗೆ ಸಂಜೆ 6ಗಂಟೆಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗುತ್ತಿದ್ದು, ಮಾ.1ರ ಮುಂಜಾನೆ 6 ಗಂಟೆಯಿಂದ ಸಾರ್ವಜನಿಕರು ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ.
ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಸಂಪಿಗೆ ರಸ್ತೆ-ಪೀಣ್ಯ (ರೀಚ್ 3 ಮತ್ತು 3ಎ) ನಡುವಿನ 10.5 ಕಿ.ಮೀ ಉದ್ದದ ಮಾರ್ಗದಲ್ಲಿನ ರೈಲು ಸಂಚಾರವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಮೆಟ್ರೋ ರೈಲಿನಲ್ಲಿ ಸಂಪಿಗೆ ರಸ್ತೆಗೆ ಆಗಮಿಸಲಿದ್ದಾರೆ.
ಉದ್ಘಾಟನೆ ಬಳಿಕ ಸಂಜೆ 7 ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಭವ್ಯ ಸಮಾರಂಭ ನಡೆಯಲಿದ್ದು, ಸಾವಿರಾರು ಜನರು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಮಾರಂಭದಲ್ಲಿ 26,405 ಕೋಟಿ ರೂ. ವೆಚ್ಚದ ನಮ್ಮ ಮೆಟ್ರೋ 2ನೇ ಹಂತದ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗುತ್ತದೆ. [ನಮ್ಮ ಮೆಟ್ರೋದಲ್ಲಿ ಹಿಂದಿಯೇಕೆ?]
ಮಾರ್ಗದಲ್ಲಿ 10 ನಿಲ್ದಾಣಗಳು
10.5 ಕಿಮೀ ನಡುವಿನ ಸಂಪಿಗೆ ರಸ್ತೆ-ಪೀಣ್ಯ ನಡುವಿನ ಮಾರ್ಗದಲ್ಲಿ ಪೀಣ್ಯ ಇಂಡಸ್ಟ್ರಿ, ಪೀಣ್ಯ, ಯಶವಂತಪುರ ಇಂಡಸ್ಟ್ರಿ, ಯಶವಂತಪುರ, ಸ್ಯಾಂಡಲ್ ಸೋಪ್ ಕಾರ್ಖನೆ, ಮಹಾಲಕ್ಷ್ಮಿ, ರಾಜಾಜಿನಗರ, ಶ್ರೀರಾಂಪುರ, ಕುವೆಂಪು ರಸ್ತೆ ಮತ್ತು ಸಂಪಿಗೆ ರಸ್ತೆ ನಿಲ್ದಾಣಗಳಿವೆ.
6ರಿಂದ 10ರವರೆಗೆ ಪ್ರಯಾಣ
ಸದ್ಯ ಸಂಪಿಗೆ ರಸ್ತೆ-ಪೀಣ್ಯ ಮಾರ್ಗದಲ್ಲಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಮ್ಮ ಮೆಟ್ರೋ ರೈಲು ಸಂಚರಿಸಲಿದೆ. 975 ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯವುಳ್ಳ ಮೂರು ಕೋಚ್ಗಳ ರೈಲು ಮಾರ್ಗದಲ್ಲಿ ಸಂಚರಿಸಲಿದ್ದು, ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಒಟ್ಟು 12 ರೈಲುಗಳನ್ನು ಕಾರ್ಯಾಚರಣೆಗೆ ಸಿದ್ಧಗೊಳಿಸಲಾಗಿದ್ದು, ಆರಂಭದಲ್ಲಿ 6 ರೈಲುಗಳು ಓಡಾಟ ನಡೆಸಲಿದೆ. [18 ನಿಮಿಷದಲ್ಲಿ ಪೀಣ್ಯಕ್ಕೆ ಹೋಗಿ]
60-70 ಸಾವಿರ ಪ್ರಯಾಣಿಕರು
ಸಂಪಿಗೆ ರಸ್ತೆ-ಪೀಣ್ಯ ಮಾರ್ಗದಲ್ಲಿ ಪ್ರತಿದಿನ 60ರಿಂದ 70 ಸಾವಿರ ಪ್ರಯಾಣಿಕರು ಸಂಚರಿಸಬಹುದು ಎಂದು ನಿರೀಕ್ಷಿಸಲಾಗಿದೆ. ನಂತರದ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಒಂದು ಲಕ್ಷಕ್ಕೆ ಏರಿಕೆಯಾಗಬಹುದೆಂದು ಅಂದಾಜಿಸಲಾಗಿದೆ. ಪ್ರತಿ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಪ್ರಯಾಣ ದರ 23 ರೂ.
ಈ ಮಾರ್ಗದಲ್ಲಿ ಸಂಚರಿಸುವ ಮೆಟ್ರೊ ಪ್ರಯಾಣದರವನ್ನು 23 ರೂ ಎಂದು ನಿಗದಿಪಡಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಪಡೆಯುವವರಿಗೆ ಪ್ರಯಾಣ ದರದಲ್ಲಿ ಶೇ.15ರಷ್ಟು ರಿಯಾಯಿತಿ ದೊರೆಯಲಿದ್ದು, 19.50 ರೂ.ದರ ನಿಗದಿಗೊಳಿಸಲಾಗಿದೆ. ಟೋಕನ್ ಪಡೆದು ಪ್ರಯಾಣಿಸುವವರು, 23 ರೂ. ದರ ಪಾವತಿ ಮಾಡಬೇಕಾಗಿದೆ.
ಏಕೈಕ ಮಹಿಳಾ ಸಾರಥಿ
ಸಂಪಿಗೆ ರಸ್ತೆ-ಪೀಣ್ಯ ಮಾರ್ಗದಲ್ಲಿ ಮೆಟ್ರೊ ರೈಲು ಕಾರ್ಯಾಚರಣೆಗೆ 48 ಮಂದಿ ಆಪರೇಟರ್ಗಳನ್ನು ನಿಯೋಜಿಸಲಾಗಿದೆ. ಈ ಪೈಕಿ ಜೆ.ಪಿ.ಕಾವ್ಯಶ್ರೀ ಎಂಬುವರು ಮಹಿಳಾ ಸಾರಥಿಯಾಗಿದ್ದಾರೆ. 24 ವರ್ಷದ ಕಾವ್ಯಶ್ರೀ ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರೆ. ಅವರ ಪತಿ ಕೆ.ಮಂಜುನಾಥ್ ಕೂಡ ಟ್ರೈನ್ ಆಪರೇಟರ್. [ಬಿಎಂಆರ್ ಸಿಎಲ್ ವೆಬ್ ಸೈಟ್ ನೋಡಿ]