ಸಿದ್ಧರಾಮಯ್ಯಗೆ ಸಂಕಷ್ಟ ಹೇಳಿಕೊಂಡ ಪೀಣ್ಯ ಕೈಗಾರಿಕೆಗಳ ಸಂಘ
ಬೆಂಗಳೂರು, ಮೇ 2: ಪೀಣ್ಯ ಕೈಗಾರಿಕೆಗಳ ಸಂಘದ ಮುಖಂಡರ ಜೊತೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಸಭೆ ನಡೆಸಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಸಲಾಗಿದೆ.
Recommended Video
ಸಭೆಯಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಾಜು, ಪೀಣ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶ್ರೀನಿವಾಸ್ ಹಾಗೂ ಕೈಗಾರಿಕೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಭಾಗಿಯಾಗಿದ್ದಾರೆ. ಇವರ ಜೊತೆಗೆ ಸಿದ್ಧರಾಮಯ್ಯ ಮಾತುಕತೆ ನಡೆಸಿದ್ದಾರೆ.
ಸಣ್ಣ ಕೈಗಾರಿಕೆಗಳ ಪ್ರಸ್ತುತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ತಮ್ಮ ಸಮಸ್ಯೆಗಳನ್ನು ಪ್ರತಿಪಕ್ಷ ನಾಯಕರ ಗಮನಕ್ಕೆ ಸಂಘದ ಮುಖಂಡರು ತಂದಿದ್ದಾರೆ. ಲಾಕ್ ಡೌನ್ ಆಗಿ 45 ದಿನಗಳು ಕಳೆದಿದ್ದು, ಇದರಿಂದ ಆದ ತೊಂದರೆಗಳನ್ನು ವಿವರಿಸಿದ್ದಾರೆ.

45 ದಿನಗಳಿಂದ ಸಣ್ಣ ಕೈಗಾರಿಕೆಗಳು ಶಟ್ ಡೌನ್ ಆಗಿವೆ. ಉತ್ಪಾದನೆಯೂ, ಮಾರಾಟವೂ ಇಲ್ಲದಂತೆ ಆಗಿದೆ. ಕಾರ್ಖಾನೆಗಳು 45 ದಿನಗಳಿಂದ ಲಾಭ ಕಂಡಿಲ್ಲ. ಇದರ ಜೊತೆಗೆ ಕಾರ್ಮಿಕರಿಗೆ ವೇತನವನ್ನೂ ನೀಡಬೇಕೆಂಬ ಆದೇಶವಿದೆ. ಲಾಕ್ಡೌನ್ ನಂತರ ಕಾರ್ಖಾನೆಗಳನ್ನ ನಡೆಸುವುದೇ ಕಷ್ಟವಾಗಿದೆ. ಹೀಗಾಗಿ, ನಾವು ಕಾರ್ಮಿಕರ ವೇತನ, ವಿಮೆ ಎಲ್ಲಿಂದ ಕಟ್ಟುವುದು. ನಾವು ಕಾರ್ಖಾನೆಗಳನ್ನ ಮುಚ್ಚುವ ಹಂತಕ್ಕೆ ಬಂದಿದ್ದೇವೆ ಎಂದಿದ್ದಾರೆ.
ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ವಿಶೇಷ ಯೋಜನೆ ರೂಪಿಸಬೇಕು. ಶೇಕಡ 4ರ ಬಡ್ಡಿ ದರದಲ್ಲಿ ಕೈಗಾರಿಕೆಗಳಿಗೆ ಸಾಲ ಸೌಲಭ್ಯ ಒದಗಿಸಬೇಕು. ಉತ್ಪನ್ನಗಳ ರಫ್ತಿಗೆ ಅವಕಾಶ ಮಾಡಿಕೊಡಬೇಕು. ಸಣ್ಣ ಕೈಗಾರಿಕೆಗಳ ಸಾಲ ಮನ್ನಾ ಮಾಡಬೇಕು. ವಿಮೆ ಸೌಲಭ್ಯವನ್ನ ಸರ್ಕಾರವೇ ತುಂಬಿಕೊಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನಕ್ಕೆ ನಮ್ಮ ಸಮಸ್ಯೆ ತನ್ನಿ ಎಂದು ಸಿದ್ಧರಾಮಯ್ಯ ಮುಂದೆ ಸಂಘದ ಮುಖಂಡರ ಬೇಡಿಕೆ ಇಟ್ಟಿದ್ದಾರೆ.











Click it and Unblock the Notifications