Vande Bharat Train: ಬೆಂಗಳೂರಿಗೆ ಬರುವ ಈ ವಂದೇ ಭಾರತ್ ರೈಲು ಬಗ್ಗೆ ಬೇಡಿಕೆ ಏನು?
ಬೆಂಗಳೂರು, ಆಗಸ್ಟ್ 13: ಬೆಂಗಳೂರು ಮತ್ತು ಕೇರಳದ ಎರ್ನಾಕುಲಂ ನಡುವೆ ಭಾರತೀಯ ರೈಲ್ವೆ ವಿಶೇಷ ವಂದೇ ಭಾರತ್ ರೈಲುಗಳ ಸಂಚಾರವನ್ನು ಆರಂಭಿಸಿತ್ತು. ಈ ರೈಲು ಸಂಪೂರ್ಣ ಭರ್ತಿಯಾಗಿ ಓಡುತ್ತಿದೆ, ಈ ತಿಂಗಳ ಅಂತ್ಯಕ್ಕೆ ರೈಲು ಸೇವೆ ಅಂತ್ಯಗೊಳ್ಳಲಿದ್ದು, ಇದನ್ನು ಖಾಯಂ ರೈಲಾಗಿ ಪರಿವರ್ತನೆ ಮಾಡಬೇಕು ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದಾರೆ. ಆದರೆ ಇನ್ನೂ ಇಲಾಖೆ ಈ ಕುರಿತು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ.
ಜುಲೈ ಅಂತ್ಯದಿಂದ ಆಗಸ್ಟ್ ಅಂತ್ಯದ ತನಕ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ರೈಲ್ವೆ ಇಲಾಖೆ ಬೆಂಗಳೂರು-ಎರ್ನಾಕುಲಂ ನಡುವೆ ವಿಶೇಷ ವಂದೇ ಭಾರತ್ ರೈಲನ್ನು ವಾರದಲ್ಲಿ ಮೂರು ದಿನ ಓಡಿಸುತ್ತಿದೆ. ಈಗಾಗಲೇ ರೈಲುಗಳು ಸಂಚಾರವನ್ನು ನಡೆಸುತ್ತಿದ್ದು, ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಆದರೆ ವಿಶೇಷ ರೈಲು ಸೇವೆ ಇದಾದ ಕಾರಣ ಆಗಸ್ಟ್ ಅಂತ್ಯಕ್ಕೆ ಸೇವೆ ಅಂತ್ಯಗೊಳ್ಳಬೇಕಿದೆ. ಆದ್ದರಿಂದ ರೈಲ್ವೆ ಪ್ರಯಾಣಿಕರು ಈ ರೈಲನ್ನು ಖಾಯಂಗೊಳಿಸಿದರೆ ಬೆಂಗಳೂರು-ಕೇರಳ ನಡುವಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಸದ್ಯ ರೈಲು ತ್ರಿಶೂರ್, ಪಾಲಕ್ಕಾಡ್, ಪೊದನೂರ್, ತಿರುಪ್ಪೂರ್, ಈರೋಡ್, ಸೇಲಂ ಮತ್ತು ಬೆಂಗಳೂರು ಕಟೋನ್ಮೆಂಟ್ನಲ್ಲಿ ನಿಲುಗಡೆ ಹೊಂದಿದೆ.
ರೈಲು ವೇಳಾಪಟ್ಟಿ: ರೈಲು ನಂಬರ್ 06001 ಎರ್ನಾಕುಲಂ-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ ರೈಲು ಜುಲೈ 31ರಿಂದ ಸಂಚಾರ ಆರಂಭಿಸಿದೆ. ಆಗಸ್ಟ್ 14, 16, 18, 21, 23 ಮತ್ತು 25ರ ಸಂಚಾರ ಬಾಕಿ ಇದೆ. ಈ ರೈಲು ಬುಧವಾರ, ಶುಕ್ರವಾರ ಮತ್ತು ಭಾನುವಾರ ಸಂಚಾರ ಬಾಕಿ ಇದೆ.
ರೈಲು ನಂಬರ್ 06002 ಬೆಂಗಳೂರು ಕಂಟೋನ್ಮೆಂಟ್-ಎರ್ನಾಕುಲಂ ವಂದೇ ಭಾರತ್ ರೈಲು ಆಗಸ್ಟ್ 1ರಿಂದ ಸಂಚಾರ ಆರಂಭಿಸಿದೆ. ಆಗಸ್ಟ್ 15, 17, 19, 22, 24 ಮತ್ತು 26ರ ಸಂಚಾರ ಬಾಕಿ ಇದೆ. ಈ ರೈಲು ಗುರುವಾರ, ಶನಿವಾರ ಮತ್ತು ಸೋಮವಾರ ಸಂಚಾರ ನಡೆಸುತ್ತದೆ.
8 ಬೋಗಿಯ ಈ ರೈಲು ಸೇವೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಬೆಂಗಳೂರು ನಗರದಿಂದ ಓಣಂ ಸೇರಿದಂತೆ ವಿವಿಧ ಸಂದರ್ಭದಲ್ಲಿ ಕೇರಳಕ್ಕೆ ಪ್ರವಾಸ ಮಾಡುವ ಜನರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಈ ರೈಲನ್ನು ಖಾಯಂಗೊಳಿಸಬೇಕು ಎಂಬುದು ಬೇಡಿಕೆಯಾಗಿದೆ. ಅಲ್ಲದೇ ಈಗ ರೈಲು ಸಂಪೂರ್ಣ ಭರ್ತಿಯಾಗಿ ಸಂಚಾರ ನಡೆಸುತ್ತಿದೆ. ಖಾಯಂಗೊಳಿಸಿದರೆ ಇನ್ನಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ಬೇಡಿಕೆ ಇಡಲಾಗಿದೆ.
ಈ ವಿಶೇಷ ವಂದೇ ಭಾರತ್ ರೈಲನ್ನು ಘೋಷಣೆ ಮಾಡುವಾಗಲೇ ಇದನ್ನು ಖಾಯಂ ರೈಲಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಲಾಗಿತ್ತು. ಆದರೆ ರೈಲ್ವೆ ಇಲಾಖೆ ನಿಗದಿತ ವೇಳಾಪಟ್ಟಿಯಂತೆ ಆಗಸ್ಟ್ ಅಂತ್ಯದ ತನಕ ರೈಲು ಸಂಚಾರ ನಡೆಸಲಿದೆ ಎಂದು ಹೇಳಿತ್ತು.
ಬೆಂಗಳೂರು ಕಂಟೋನ್ಮೆಂಟ್-ಎರ್ನಾಕುಲಂ ವಿಶೇಷ ರೈಲು ಈರೋಡ್, ಸೇಲಂನಲ್ಲಿಯೂ ನಿಲುಗಡೆ ಹೊಂದಿದೆ. ಆದ್ದರಿಂದ ತಮಿಳುನಾಡು ರಾಜ್ಯದ ಪ್ರಯಾಣಿಕರಿಗೆ ಸಹ ಅನುಕೂಲವಾಗುತ್ತದೆ. ಎರ್ನಾಕುಲಂಗೆ ವಂದೇ ಭಾರತ್ ರೈಲು ಸೇವೆ ಬೇಕು ಎಂಬ ಬೇಡಿಕೆ ಸುಮಾರು ಒಂದು ವರ್ಷ ಹಳೆಯದ್ದು. ರೈಲು ಸೇವೆ ಆರಂಭದ ಘೋಷಣೆ ಮಾಡಿದ್ದರೂ ಅನಿವಾರ್ಯ ಕಾರಣದಿಂದ ರೈಲು ಸಂಚಾರ ಆರಂಭವಾಗಿರಲಿಲ್ಲ. ಈಗ ವಿಶೇಷ ರೈಲು ಸೇವೆ ಆರಂಭಿಸಲಾಗಿತ್ತು.












Click it and Unblock the Notifications