ಬಿಎಂಟಿಸಿಯ ಏರ್ಪೋರ್ಟ್ ವಾಯುವಜ್ರ ಬಸ್ ಪ್ರಯಾಣಿಕರ ಸಂಖ್ಯೆ ಏರಿಕೆ!
ಬೆಂಗಳೂರು, ಅಕ್ಟೋಬರ್ 15; ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸಲು ಸಾಕಷ್ಟು ಕ್ಯಾಬ್ಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣಿಕರು ಕ್ಯಾಬ್ ಬದಲು ಬಿಎಂಟಿಸಿಯ ವಾಯು ವಜ್ರ ಎಸಿ ಬಸ್ ಬಳಕೆ ಹೆಚ್ಚಿಸಿದ್ದಾರೆ. ಇದರಿಂದ ಸಂಸ್ಥೆಗೆ ಆದಾಯವು ಹೆಚ್ಚುತ್ತಿದೆ.
ನಗರದಿಂದ ಸುಮಾರು 35 ಕಿ. ಮೀ. ದೂರದ ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ದೇಶದ ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿರುವ ವಿಮಾನ ನಿಲ್ದಾಣಗಳಲ್ಲಿ ಇದು ಸಹ ಒಂದು. ದಿನದ 24 ಗಂಟೆಯು ದೇಶ, ವಿದೇಶದ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ, ನಿರ್ಗಮಿಸುತ್ತಾರೆ.

ವಿಮಾನ ನಿಲ್ದಾಣಕ್ಕೆ ಖಾಸಗಿ ವಾಹನಗಳ ಮೂಲಕ ಸಾಗುವ ಪ್ರಯಾಣಿಕರು ಸಾಕಷ್ಟಿದ್ದಾರೆ. ಇದರ ಜೊತೆಗೆ ಕ್ಯಾಬ್, ಬಿಎಂಟಿಸಿ ಬಸ್, ರೈಲು ಸಹ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರು ಕ್ಯಾಬ್ ಬಿಟ್ಟು ಬಸ್ ಅವಲಂಬಿಸುತ್ತಿದ್ದಾರೆ.
ಕ್ಯಾಬ್ಗಳ ದರ ಹೆಚ್ಚಳ; ಬಿಎಂಟಿಸಿಯ ವಾಯುವಜ್ರ ಬಸ್ಗೆ ಹೋಲಿಕೆ ಮಾಡಿದರೆ ಏರ್ಪೋರ್ಟ್ ಕ್ಯಾಬ್ಗಳ ದರಗಳು ಹೆಚ್ಚು. ಆದ್ದರಿಂದ ಪ್ರಯಾಣಿಕರು ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗಲು ವಾಯುವಜ್ರ ಬಸ್ ಬಳಕೆ ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು 13 ಸಾವಿರ ಪ್ರಯಾಣಿಕರು ಬಸ್ ಬಳಕೆ ಮಾಡುತ್ತಿದ್ದು, ಅಧಿಕಾರಿಗಳ ಮಾಹಿತಿ ಪ್ರಕಾರ 32 ಲಕ್ಷ ರೂ. ಆದಾಯ ಬರುತ್ತಿದೆ.
ಸೆಪ್ಟೆಂಬರ್ 11ರಂದು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಖಾಸಗಿ ವಾಹನಗಳ ಬಂದ್ ನಡೆದಿತ್ತು. ಆಗ ವಿಮಾನ ನಿಲ್ದಾಣದ ಕ್ಯಾಬ್ ಸಹ ಸ್ಥಗಿತಗೊಂಡಿತ್ತು. ಅಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಹ ಬಿಎಂಟಿಸಿ ಬಸ್ ಹತ್ತಿದ್ದರು. ಅಂದು ಸುಮಾರು 60 ಲಕ್ಷ ರೂ. ಆದಾಯ ಬಂದಿತ್ತು.
"ಬಿಎಂಟಿಸಿಯ ಐಷಾರಾಮಿ ವೋಲ್ವೋ ಎಸಿ ವಾಯುವಜ್ರ ಬಸ್ಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ಆರಾಮದಾಯಕವಾಗಿ ಸಂಚಾರ ನಡೆಸುತ್ತಿದ್ದಾರೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಎರಡು ಹೊಸ್ ಮಾರ್ಗದಲ್ಲಿ ವಾಯುವಜ್ರ ಬಸ್ ಸೇವೆನ್ನು ನಾವು ಆರಂಭಿಸಿದ್ದೇವೆ" ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಎಂಟಿಸಿ ನಗರದ ಐಟಿ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ವಜ್ರ ಬಸ್ ಸೇವೆ ಆರಂಭಿಸಿತ್ತು. ಆದರೆ ಕೋವಿಡ್ ಸಮಯದಲ್ಲಿನ ಮನೆಯಿಂದಲೇ ಕೆಲಸದ ಆಯ್ಕೆಯಿಂದಾಗಿ ವಜ್ರ ಬಸ್ಗಳು ಇನ್ನೂ ಚೇತರಿಸಿಕೊಂಡಿಲ್ಲ. ಆದರೆ ವಾಯುವಜ್ರ ಬಸ್ಗಳಿಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಜನರ ಸಂಖ್ಯೆಯ ಏರಿಕೆ, ಕ್ಯಾಬ್ಗಳ ದರ ಹೆಚ್ಚಳದಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟನೆ ಬಳಿಕ ಬಿಎಂಟಿಸಿಯ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಓಲಾ, ಊಬರ್ಗಳ ಹೆಚ್ಚಿನ ದರ ಮತ್ತು ಶೇರಿಂಗ್ ಪ್ರಯಾಣ ರದ್ದುಗೊಳಿಸಿದ್ದು, ಬಿಬಿಎಂಟಿಸಿ ವಾಯವಜ್ರ ಬಸ್ಗಳಿಗೆ ವರದಾನವಾಗಿದೆ.
ಬಿಎಂಟಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಸ್ಗಳ ಚಾಲಕ, ನಿರ್ವಾಹಕರಿಗೆ ಪ್ರಯಾಣಿಕರ ಜೊತೆ ಸಂಯಮದಿಂದ ವರ್ತಿಸುವಂತೆ ತರಬೇತಿಯನ್ನು ನೀಡುತ್ತಿದೆ. ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ.
ವಿಮಾನ ನಿಲ್ದಾಣಕ್ಕೆ ರೈಲು ಸೌಲಭ್ಯ ಸಹ ಇದೆ. ಇದಕ್ಕಾಗಿಯೇ ದೇವನಹಳ್ಳಿಯಲ್ಲಿ ಹಾಲ್ಟ್ ಸ್ಟೇಷನ್ ನಿರ್ಮಾಣ ಮಾಡಲಾಗಿದೆ. ಆದರೆ ವಿಮಾನ ನಿಲ್ದಾಣದ ಪ್ರಯಾಣಿಕರು ರೈಲು ಬಳಕೆಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಈಗ ಬಿಎಂಟಿಸಿ ವಾಯು ವಜ್ರ ಬಸ್ಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ.












Click it and Unblock the Notifications