ರಾಷ್ಟ್ರಭಕ್ತರ ಹೆಣಗಳ ಮೇಲೆ ಸಿಎಂ ರಾಜಕಾರಣ: ಬಿಜೆಪಿ ಆಕ್ರೋಶ
ಬೆಂಗಳೂರು, ಡಿಸೆಂಬರ್ 12: "ರಾಷ್ಟ್ರಭಕ್ತರ ಹೆಣಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದಾರೆ" ಎಂದು ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ಹೊನ್ನಾವರದ ಹಿಂದುಪರ ಕಾರ್ಯಕರ್ತ ಪರೇಶ್ ಮೆಸ್ತ ನಿಗೂಢ ಸಾವಿನ ಹಿಂದೆ ಮತೀಯ ಶಕ್ತಿಗಳ ಕೈವಾಡವಿದೆ ಎಂದು ದೂರಿರುವ ಬಿಜೆಪಿ ಮುಖಂಡರು, ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಸೌಧದಿಂದ ರಾಜಭವನ್ ವರೆಗೆ ಪಾದಯಾತ್ರೆಯಲ್ಲಿ ತೆರಳಿ 'ರಾಜ್ ಭವನ್ ಚಲೋ ಯಾತ್ರೆ' ನಡೆಸಿದರು. ಈ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಅವರು ಸರ್ಕಾರದ ವಿರುದ್ಧ ಹರಿಹಾಯ್ದರು.
"ಹೊನ್ನಾವರದಲ್ಲಿ ಪರೇಶ್ ಮೇಸ್ತಾ ಹತ್ಯೆ ಪ್ರಕರಣದಲ್ಲಿ ಪೊಲೀಸರಿಂದ ಸಂಪೂರ್ಣ ಮಾನವಹಕ್ಕು ಉಲ್ಲಂಘನೆಯಾಗಿದೆ" ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದರು.
"ಕರಾವಳಿ ಭಾಗದಲ್ಲಿ ಐಸಿಸ್ ಗೆ ನೇಮಕಾತಿ ನಡೆಯುತ್ತಿದೆ ಎನ್ನುವ ಮಾಹಿತಿಯೂ ಇದೆ. ಮೇಸ್ತಾ ಹತ್ಯೆಯನ್ನು ಆಕಸ್ಮಿಕ ಸಾವು ಎಂದು ಹೇಳಲಾಗುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನೂ ತಿರುಚುವ ಸಾಧ್ಯತೆಗಳಿವೆ..." ಎಂದು ಶೋಭಾ ಕರಂದ್ಲಾಜೆ ಆತಂಕ ವ್ಯಕ್ತಪಡಿಸಿದರು.

ರಾಜ್ಯಪಾಲರಿಗೆ ಮನವಿ
ಪರೇಶ್ ಹತ್ಯೆ ಖಂಡಿಸಿ ವಿಧಾನ ಸೌಧದಿಂದ ರಾಜಭವನ್ ವರೆಗೆ ಪಾದಯಾತ್ರೆಯಲ್ಲಿ ತೆರಳಿದ ಬಿಜೆಪಿ ಮುಖಂಡರಾದ ಈಶ್ವರಪ್ಪ, ಆರ್.ಅಶೋಕ್, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್ ಮುಂತಾದವರು ಪರೇಶ್ ಹತ್ಯೆ ಕುರಿತು ನ್ಯಾಯಯುತ ತನಿಖೆ ನಡೆಯಬೇಕೆಂದು ರಾಜ್ಯಪಾಲ ವಾಜುಭಾಯ್ ವಾಲಾ ಅವರಿಗೆ ಮನವಿ ಸಲ್ಲಿಸಿದರು.

ರಾಷ್ಟ್ರಭಕ್ತರ ಹೆಣದ ಮೇಲೆ ರಾಜಕೀಯ!
"ಈ ಪ್ರಕರಣವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಚ್ಚಿಹಾಕಲು ಹೊರಟಿದ್ದಾರೆ. ಮುಸಲ್ಮಾನ ಗೂಂಡಾಗಳಿಗೆ ಪೊಲೀಸರಿಂದಲೇ ಕುಮ್ಮಕ್ಕು ಸಿಗುತ್ತಿದೆ. ರಾಷ್ಟ್ರ ಭಕ್ತರ ಹೆಣಗಳ ಮೇಲೆ ಸಿಎಂ ರಾಜಕಾರಣ ಮಾಡ್ತಿದಾರೆ ಎಂದು ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಪರೇಶ್ ಮೆಸ್ತ ನಿಗೂಢ ಸಾವು
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಡಿ.6 ರಂದು ನಡೆದ ಮತೀಯ ಗಲಭೆಯ ನಂತರ ನಾಪತ್ತೆಯಾಗಿದ್ದ ಪರೇಶ್ ಮೆಸ್ತಾ ಡಿ.8 ರಂದು ಶವವಾಗಿ ಹೊನ್ನಾವರದ ಕೆರೆಯೊಂದರಲ್ಲಿಪತ್ತೆಯಾಗಿದ್ದರು. ಇದರ ಹಿಂದೆ ಮತಾಂಧ ಶಕ್ತಿಗಳ ಕೈವಾಡವಿದೆ ಎಂದು ದೂರಲಾಗಿತ್ತು.

ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ
ಪರೇಶ್ ಮೆಸ್ತ ಸಾವಿನ ನಂತರ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ನಿನ್ನೆ ಕುಮಟಾ, ಇಂದು ಶಿರಸಿ ತಾಲೂಕು ಬಂದ್ ಆಗಿವೆ. ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಒಟ್ಟಿನಲ್ಲಿ ಪರೇಶ್ ಮೆಸ್ತ ಸಾವು ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ರಾಜಕೀಯ ದಾಳವಾಗುವ ಸಾಧ್ಯತೆಯಂತೂ ನಿಚ್ಚಳವಾಗಿದೆ.












Click it and Unblock the Notifications