ಪರಪ್ಪನ ಅಗ್ರಹಾರ ಜೈಲಲ್ಲ, ಬಾರ್: ಅಶೋಕ್
ಬೆಂಗಳೂರು, ಜುಲೈ 15: ಪರಪ್ಪನ ಅಗ್ರಹಾರವನ್ನು ಯಾರು ಜೈಲು ಅಂತಾರೆ? ಅದು ಬಾರ್ ಇದ್ದಂತೆ ಎಂದು ಮಾಜಿ ಉಪ ಮುಖ್ಯಮಂತ್ರಿ- ಬಿಜೆಪಿ ಶಾಸಕ ಆರ್. ಅಶೋಕ್ ಶನಿವಾರ ವ್ಯಂಗ್ಯವಾಡಿದ್ದಾರೆ.
ಪರಪ್ಪನ ಅಗ್ರಹಾರದ ಜೈಲು ಸದ್ಯಕ್ಕೆ ಜೈಲಾಗಿ ಉಳಿದಿಲ್ಲ. ಅಲ್ಲಿನ ಕೈದಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಭಾಗ್ಯಗಳನ್ನು ಕರುಣಿಸಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಇಲ್ಲಿ ಮಾತನಾಡಿದ ಅವರು, ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ಐಷಾರಾಮಿ ಸವಲತ್ತು ಒದಗಿಸಲು 2 ಕೋಟಿ ರೂಪಾಯಿ ಲಂಚ ಪಡೆದಿರುವ ಕುರಿತು ಡಿಐಜಿ ರೂಪಾ ಅವರು ವರದಿ ನೀಡಿದ್ದಾರೆ ಹೊರತು ಯಾವುದೇ ಆರೋಪ ಮಾಡಿಲ್ಲ ಎಂದು ಅಧಿಕಾರಿ ನಿಲವನ್ನು ಬೆಂಬಲಿಸಿದರು.
ರಾಜ್ಯದಲ್ಲಿ ಗೃಹ ಇಲಾಖೆಯೂ ಸಿದ್ದರಾಮಯ್ಯ ಅವರಂತೆ ನಿದ್ದೆ ಮಾಡುತ್ತಿದೆ. ಜೈಲಿನಲ್ಲಿ ಮದ್ಯಪಾನಕ್ಕೆ, ರೇವ್ ಪಾರ್ಟಿ ಮಾಡಲು ಅವಕಾಶ ಇದೆ. ಈ ಆರೋಪದ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಿ, ತಪ್ಪು ಮಾಡಿದವರನ್ನು ಶಿಕ್ಷಿಸಬೇಕು ಎಂದು ಅಶೋಕ್ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಅಧಿಕಾರಿ ರೂಪಾ ಅವರಿಗೆ ನೊಟೀಸ್ ನೀಡಿದ ಸರಕಾರದ ಕ್ರಮವನ್ನು ವಿರೋಧಿಸಿದ ಅವರು, ನೊಟೀಸ್ ಕೈ ಬಿಟ್ಟು ಆಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.












Click it and Unblock the Notifications