ಪಾದರಾಯನಪುರ: ಪುಂಡರ ವಿರುದ್ಧ NDMA ಕಾಯ್ದೆಯಂತೆ ಕ್ರಮ
ಬೆಂಗಳೂರು, ಏಪ್ರಿಲ್ 19: ಕೊರೊನಾವೈರಸ್ ಸೋಂಕಿತರಿಂದ ಇತರರಿಗೆ ಸೋಂಕು ಹರಡದಂತೆ ಸೀಲ್ ಡೌನ್ ಮಾಡಿದ್ದ ಪ್ರದೇಶವನ್ನು ಹಾಳುಗೆಡವಿದ ಘಟನೆ ನಡೆದಿದೆ. ಲಾಕ್ಡೌನ್ ನಿಯಮ ಉಲ್ಲಂಘಿಸಿ, ಸರ್ಕಾರಿ ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿಯಂತ್ರಣ ಕಾಯ್ದೆ(NDMC) ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗುವುದು ಎಂದು ಪಶ್ಚಿಮ ವಲಯ ಡಿಸಿಪಿ ರಮೇಶ್ ಹೇಳಿದ್ದಾರೆ.
ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿರುವ ಈ ಪ್ರದೇಶದಲ್ಲಿ 58 ಮಂದಿಗೆ ಕ್ವಾರಂಟೈನ್ ಮಾಡಲಾಗಿತ್ತು. ಎರಡನೇ ಸಂಪರ್ಕಿತ ಕೊರೊನಾ ಶಂಕಿತರನ್ನು ಕರೆದೊಯ್ಯಲು ಈ ಪ್ರದೇಶಕ್ಕೆ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಪೊಲೀಸರು ತೆರಳಿದ್ದಾರೆ. ಆದರೆ, ಇದಕ್ಕೆ ಸಮ್ಮತಿಸದ ಸ್ಥಳೀಯರು ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಸೀಲ್ ಡೌನ್ ಮಾಡಿ ನಿರ್ಮಿಸಿದ್ದ ತಾತ್ಕಾಲಿಕ ತಡೆಗೋಡೆಗಳನ್ನು ಮುರಿದಿದ್ದಾರೆ. ಪೋಲೀಸ್ ಬ್ಯಾರಿಗೇಡ್, ಟೆಂಟ್ ಕಿತ್ತುಹಾಕಿ, ಗೂಂಡಾಗಿರಿ ಮಾಡಿದ ದೃಶ್ಯಗಳು ಕಂಡು ಬಂದಿದೆ. ಪಾದರಾಯನಪುರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಮೊದಲ ಬ್ಯಾಚಿನಲ್ಲಿ 15 ಮಂದಿಯನ್ನು ಇಲ್ಲಿಂದ ಸಮೀಪದ ಹಜ್ ಭವನಕ್ಕೆ ಶಿಫ್ಟ್ ಮಾಡಲಾಯಿತು. ಉಳಿದ 33 ಮಂದಿಯನ್ನು ಕ್ವಾರಂಟೈನ್ ಗೆ ಕರೆದೊಯ್ಯಲು ಮುಂದಾದಾಗ ಪ್ರತಿರೋಧ ವ್ಯಕ್ತವಾಯಿತು. ಕಾರ್ಪೊರೇಟರ್ ಇಮ್ರಾನ್ ಪಾಷಾ ಬರಲಿ, ಶಾಸಕ ಜಮೀರ್ ಖಾನ್ ಬರಲಿ ಅವರು ಹೇಳಿದ ಮೇಲೆ ನಾವು ಇಲ್ಲಿಂದ ಕದಲುತ್ತೇವೆ ಎಂದು ಪಟ್ಟು ಹಿಡಿದರು. ಈ ಸಮಯದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಸ್ಥಳೀಯ ಯುವಕರ ಜೊತೆ ವಾಗ್ವಾದ ಶುರುವಾಗಿದೆ. ಸ್ವಲ್ಪದರಲ್ಲೇ 100 -150 ಮಂದಿ ಸ್ಥಳಕ್ಕೆ ಆಗಮಿಸಿ, ಈ ಪ್ರದೇಶದ ಪ್ರವೇಶ, ನಿರ್ಗಮನ ಬ್ಯಾರಿಕೇಡ್ ಮುರಿದು ಗಲಾಟೆ ಮಾಡಿದ್ದಾರೆ. ಸಿಸಿಟಿವಿ ಫುಟೇಜ್ ಪಡೆಯಲಾಗಿದ್ದು, ಪರಿಸ್ಥಿತಿ ಈಗ ಹತೋಟಿಯಲ್ಲಿದೆ. ಗಲಾಟೆಗೆ ಕಾರಣರಾದವರನ್ನು ಬಂಧಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಸು ಬಿ ರಮೇಶ್ ಹೇಳಿದರು.












Click it and Unblock the Notifications