ನೋಬಾಲ್ಗೆ ರನ್ ಔಟ್ ಆಗಿದ್ದೇನೆ: ಬಿಜೆಪಿ ಶಾಸಕ ರಾಜುಗೌಡ
ಬೆಂಗಳೂರು, ಆಗಸ್ಟ್ 21: ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿದ್ದೆ. ನನಗೆ ಮಂತ್ರಿ ಸ್ಥಾನ ಕೊಡಿಸಲು ಯಡಿಯೂರಪ್ಪ ಪ್ರಯತ್ನಿಸಿದರು. ಆದರೆ ಸ್ವಪಕ್ಷದವರೇ ನನಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ ಎಂದು ಬಿಜೆಪಿ ಶಾಸಕ ರಾಜುಗೌಡ ಹೇಳಿದರು.
ಯಾದಗಿರಿ ಜಿಲ್ಲೆ ಶೊರಾಪುರ ಕ್ಷೇತ್ರದ ಶಾಸಕರಾಗಿರುವ ರಾಜುಗೌಡ ಅವರಿಗೆ ಹೈದರಾಬಾದ್ ಕರ್ನಾಟಕ ಮತ್ತು ದಲಿತ ಕೋಟಾದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು ಆದರೆ ಅವರಿಗೆ ಕೊನೆಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದೆ.
ನನಗೆ ಈ ಮುಂಚೆಯೇ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಈ ಬಾರಿಯೂ ಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಇತ್ತು, ಆದರೆ ನಮ್ಮ ಪಕ್ಷದವರೇ ನನಗೆ ಸಚಿವ ಸ್ಥಾನ ತಪ್ಪಿಸಲು ಗೇಮ್ ಆಡಿದರು. ಯಡಿಯೂರಪ್ಪ ಅವರು ನನಗೆ ಮಂತ್ರಿ ಸ್ಥಾನ ಕೊಡಿಸಲು ಯತ್ನ ಮಾಡಿದರು ಎಂದು ಸ್ವಪಕ್ಷದವರ ವಿರುದ್ಧವೇ ಅಸಮಾಧಾನ ಹೊರಹಾಕಿದರು.

ಹೈದರಾಬಾದ್ ಕರ್ನಾಟಕದಿಂದ 16 ಬಿಜೆಪಿ ಶಾಸಕರು ಆಯ್ಕೆ ಆಗಿದ್ದರು. ಕನಿಷ್ಟ ಮೂರು ಶಾಸಕರಿಗಾದರು ಸಚಿವ ಸ್ಥಾನ ಕೊಡಬೇಕಾಗಿತ್ತು, ಆದರೆ ಒಬ್ಬರಿಗೆ ಮಾತ್ರವೇ ನೀಡಲಾಗಿದೆ. ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಒಂದು ಸಚಿವ ಸ್ಥಾನವನ್ನೂ ಕೊಟ್ಟಿಲ್ಲ ಎಂದು ಅವರು ಹೇಳಿದರು.
ನನಗೆ ಸಚಿವ ಸ್ಥಾನ ಕೊಡಿಸಬೇಕು ಎಂಬ ಆಸೆ ಯಡಿಯೂರಪ್ಪ ಅವರಿಗೆ ಇತ್ತು ಆದರೆ ನಮ್ಮ ಪಕ್ಷದವರೇ ನನಗೆ ಸಚಿವ ಸ್ಥಾನ ಸಿಗದಂತೆ ಮಾಡಿದ್ದಾರೆ. ನಾನು ನೋಬಾಲ್ ಗೆ ರನ್ಔಟ್ ಆಗಿದ್ದೇನೆ. ನಾನೊಬ್ಬ ಕ್ರೀಡಾಪಟು, ಸೋಲು-ಗೆಲುವು ಹೊಸದಲ್ಲ ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ ಎಂದು ಅವರು ಹೇಳಿದರು.
ಏನೇ ಆಗಲಿ ಹೈದರಾಬಾದ್ ಕರ್ನಾಟಕಕ್ಕೆ ಕನಿಷ್ಟ 3-4 ಸಚಿವ ಸ್ಥಾನ ಕೊಡಲೇ ಬೇಕು. ಈ ಭಾಗದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು ಎಂದು ರಾಜುಗೌಡ ಒತ್ತಾಯಿಸಿದರು.












Click it and Unblock the Notifications