ಏಪ್ರಿಲ್ 22ರಂದು ಬೆಂಗಳೂರಿನಲ್ಲಿ "ನಮ್ಮ ಕಾಶ್ಮೀರ - ನಮ್ಮ ಹೊಣೆ" ರಾಷ್ಟ್ರೀಯ ಸಂವಾದ
ಬೆಂಗಳೂರು, ಏಪ್ರಿಲ್ 21: ಸಿಲಿಕಾನ್ ಸಿಟಿಯಲ್ಲಿ ಅನಂತ ಕುಮಾರ್ ಪ್ರತಿಷ್ಠಾನವು ಅದಮ್ಯ ಚೇತನದ ಸಹಕಾರದೊಂದಿಗೆ "ನಮ್ಮ ಕಾಶ್ಮೀರ - ನಮ್ಮ ಹೊಣೆ" ಎಂಬ ರಾಷ್ಟ್ರೀಯ ಸಂವಾದವನ್ನು ಆಯೋಜಿಸಿದೆ.
ಬೆಂಗಳೂರಿನಲ್ಲಿ ಏಪ್ರಿಲ್ 22ರಂದು ಸಾಯಂಕಾಲ 6 ಗಂಟೆಗೆ "ನಮ್ಮ ಕಾಶ್ಮೀರ - ನಮ್ಮ ಹೊಣೆ" ಎಂಬ ಸಂವಾದ ಕಾರ್ಯಕ್ರಮವನ್ನು ಜಯನಗರದ ಎನ್ ಎ ಎಲ್ ಕಾಲೋನಿಯ ಕಾಶ್ಮೀರ ಭವನದಲ್ಲಿ ಆಯೋಜನೆ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆರ್.ಕೆ.ಮಟ್ಟೂ , ಪ್ರಕಾಶ್ ಬೆಳವಾಡಿ ಮತ್ತು ಸಹನಾ ವಿಜಯಕುಮಾರ್ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಪ್ರೊ ಪಿ ವಿ ಕೃಷ್ಣಭಟ್, ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ ಕಾರ್ಯಕ್ರಮದಲ್ಲಿ ಉಪಸ್ಥಿತಿ ವಹಿಸಲಿದ್ದಾರೆ.

ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ:
ಭಾರತದ ಮುಕುಟಮಣಿ ಎಂದೇ ಖ್ಯಾತಿ ಹೊಂದಿರುವ ಕಾಶ್ಮೀರವು ಪ್ರತ್ಯಕ್ಷ ಶಾರದಾ ಮಾತೆಯ ಆವಾಸಸ್ಥಾನವಾಗಿದೆ. ಈ ಹಿನ್ನೆಲೆ "ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ" ಎಂದು ನಿತ್ಯವೂ ನಮಸ್ಕರಿಸುವ ಪದ್ಧತಿ ರೂಢಿಗೆ ಬಂದಿದೆ. ಇಲ್ಲಿನ ಸರ್ವಜ್ಞ ಪೀಠವು ಹಿಂದಿನಿಂದಲೂ ಮಹಾನ್ ವಿದ್ವಾಂಸರ ನೆಲೆಯಾಗಿತ್ತು. ಶ್ರೀ ಶಂಕರಾಚಾರ್ಯರು ಅಲ್ಲಿಗೆ ಹೋಗಿ ಆ ಮಹಾನ್ ವಿದ್ವಾಂಸರನ್ನು ವಾದದಲ್ಲಿ ಗೆದ್ದು ಸರ್ವಜ್ಞ ಪೀಠವನ್ನು ಏರಿದ ಐತಿಹ್ಯವಿದೆ.

ಇಂತಹ ಶ್ರೇಷ್ಠ ಸ್ಥಳವು ಸ್ವಾತಂತ್ರ್ಯಾನಂತರ ಆಡಳಿತಗಾರರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ವಿವಾದದ ಸ್ಥಳ ಎಂಬ ಹಣೆಪಟ್ಟಿ ಪಡೆಯುವಂತಾಗಿದೆ. ಇಡೀ ಕಾಶ್ಮೀರ ಒಂದೆರಡು ಕುಟುಂಬಗಳ ಆಸ್ತಿ ಎಂಬಂತೆ ಸ್ವೇಚ್ಛಾಚಾರ ತಾಂಡವವಾಡತೊಡಗಿತು. ಕೆಲವು ನಾಯಕರ ದೇಶದ್ರೋಹಿ ವರ್ತನೆಯಿಂದ ಪಾಕ್ ಪ್ರಚೋದಿತ ಭಯೋತ್ಪಾದಕರ ಹಾವಳಿ ತೀವ್ರವಾಯಿತು.

ಕಾಶ್ಮೀರ್ ಫೈಲ್ಸ್ ಮೂಲಕ ಜನಜಾಗೃತಿ:
1990ರಲ್ಲಿ ನಡೆದ ಘಟನೆಯಂತೂ ಇಡೀ ದೇಶವೇ ತಲೆ ತಗ್ಗಿಸುವಂತಿದೆ. ಅಲ್ಲಿನ ಮೂಲ ನಿವಾಸಿಗಳಾದ ಕಾಶ್ಮೀರಿ ಹಿಂದೂಗಳ ಮೇಲೆ ಅಮಾನುಷ ಅತ್ಯಾಚಾರ, ಅನಾಚಾರ ನಡೆದು ಅವರು ಎಲ್ಲವನ್ನೂ ಕಳೆದುಕೊಂಡು ಓಡಿ ಹೋಗುವಂತಾಯಿತು. ಇದೀಗ ಭಾರೀ ಸುದ್ದಿ ಮಾಡಿರುವ ಕಾಶ್ಮೀರ್ ಫೈಲ್ಸ್ ಚಲನಚಿತ್ರ ಇವೆಲ್ಲವನ್ನೂ ದೇಶದ ಜನರ ಮುಂದಿಟ್ಟಿದೆ. ಇದರಿಂದ ಜನ ಜಾಗೃತಿ ಕಂಡು ಬರುತ್ತಿದೆ. ಇದರ ಜೊತೆಗೆ ಕಾಶ್ಮೀರಕ್ಕಾಗಿ ಕಾಶ್ಮೀರಿ ಹಿಂದುಗಳಿಗಾಗಿ ನಾವು ಏನಾದರೂ ಮಾಡಬೇಕು ಎಂಬ ತುಡಿತವೂ ಕಂಡು ಬರುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications