Opposition Meeting In Bengaluru: ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಬ್ಯಾನರ್
ಬೆಂಗಳೂರು, ಜುಲೈ 18: ನಗರದಲ್ಲಿ ಎರಡು ವಿರೋಧ ಪಕ್ಷಗಳ ಸಭೆ ನಡೆಯುತ್ತಿದ್ದು 24 ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಎರಡನೇ ದಿನವಾದ ಇಂದು ಹಲವು ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಈ ಬೆನ್ನಲ್ಲೇ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್ ಹಾಕಲಾಗಿದೆ.
ಅಸ್ಥಿರ ಪ್ರಧಾನಿ ಸ್ಥಾನದ ಅಭ್ಯರ್ಥಿ ಎಂದು ಅರ್ಥ ಬರುವ ಬ್ಯಾನರ್ ಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ರಾತ್ರೋ ರಾತ್ರಿ ಹಾಕಲಾಗಿದೆ. ಈ ರೀತಿನ ಹಲವಾರು ಫ್ಲೆಕ್ಸ್ಗಳು ನಗರದಲ್ಲಿ ಕಂಡುಬಂದಿವೆ.

ವಿರೋಧ ಪಕ್ಷಗಳ ಸಭೆಯನ್ನು ಅಣಕಿಸುವ ರೀತಿಯಲ್ಲಿ, ಬಿಹಾರ ಸಿಎಂ ನಿತೀಶ್ ಕುಮಾರ್ ಭ್ರಷ್ಟ ಎನ್ನುವ ರೀತಿಯಲ್ಲಿ ಬ್ಯಾನರ್ ಗಳಲ್ಲಿ ಬಿಂಬಿಸಲಾಗಿದೆ. ಇದರ ಜೊತೆಯಲ್ಲಿ ಬಿಹಾರದಲ್ಲಿ ಕಳೆದ ಒಂದು ವರ್ಷದಲ್ಲಿ ಎರಡು ಬಾರಿ ಕುಸಿದ ಸುಲ್ತಾನ್ಗಂಜ್ ಸೇತುವೆ ಕುಸಿದ ಚಿತ್ರದ ಜೊತೆ ದಿನಾಂಕವನ್ನು ಹಾಕಲಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಬೆಂಗಳೂರು ರೆಡ್ ಕಾರ್ಪೆಟ್ ಹಾಸಲಾಗಿದೆ ಎಂದು ವ್ಯಂಗ್ಯ ಮಾಡಲಾಗಿದೆ.
ಇಂದು ಕೂಡ ವಿಪಕ್ಷಗಳ ಸಭೆ
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ವಿರೋಧ ಪಕ್ಷಗಳ ಸಭೆ ಇಂದು ಕೂಡ ನಡೆಯಲಿದೆ. 24 ಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸುತ್ತಿದ್ದು ಮುಂದಿನ ಲೋಕಸಭಾ ಚುನಾವಣೆಗೆ ರಣತಂತ್ರ ರೂಪಿಸಲಾಗುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಮಣಿಸಲು ವಿರೋಧ ಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ.
ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಮೈತ್ರಿಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸೀಟು ಹಂಚಿಕೆ ವಿಚಾರಗಳು, ಚುನಾವಣಾ ಪ್ರಚಾರಕ್ಕೆ ಸಂಬಂಧಪಟ್ಟಂತೆ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಲಾಗುತ್ತಿದೆ.
ಬಿಹಾರದ ರಾಜಧನಿ ಪಾಟ್ನಾದಲ್ಲಿ ಜೂನ್ ತಿಂಗಳ ಅಂತ್ಯದಲ್ಲಿ ಮೊದಲ ಸುತ್ತಿನ ವಿಪಕ್ಷಗಳ ಸಭೆ ನಡೆದಿತ್ತು. ಆಗ 16 ಪಕ್ಷಗಳು ಈ ಸಭೆಯಲ್ಲಿ ಭಾಗವಹಿಸದ್ದವು. ಈ ಬಾರಿ ಹೊಸದಾಗಿ 8 ಪಕ್ಷಗಳು ಬೆಂಬಲ ಸೂಚಿಸಿದ್ದು 24 ಪಕ್ಷಗಳು ಭಾಗವಹಿಸುತ್ತಿವೆ. ಈ ಬಾರಿ ಸಭೆಯ ಉಸ್ತುವಾರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ವಹಿಸಲಾಗಿದೆ. 7 ರಾಜ್ಯಗಳ ಮುಖ್ಯಮಂತ್ರಿಗಳು ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.
ವಿಪಕ್ಷಗಳ ಸಭೆಯ ಬೆನ್ನಲ್ಲೇ ಬಿಜೆಪಿ ಕೂಡ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದು, ಮಂಗಳವಾರ ನವದೆಹಲಿಯಲ್ಲಿ ಎನ್ಡಿಎ ಬೆಂಬಲಿಗ ಪಕ್ಷಗಳ ಸಭೆ ನಡೆಯಲಿದೆ. ತಮಗೆ 38 ಪಕ್ಷಗಳ ಬೆಂಬಲವಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ತಿಳಿಸಿದ್ದಾರೆ.












Click it and Unblock the Notifications