ನಿಪಾಹ್ ವೈರಸ್ ಭೀತಿಯಿಂದ ಹಂದಿಗಳ ಸೆರೆ: ಬಿಬಿಎಂಪಿಗೆ ಲಾಭ
ಬೆಂಗಳೂರು, ಜೂನ್ 16: ನಗರಾದ್ಯಂತ ಎಲ್ಲೆಂದರಲ್ಲಿ ಓಡಾಡುವ ಹಂದಿಗಳನ್ನು ಬಿಬಿಎಂಪಿ ಸೆರೆಹಿಡಿಯುತ್ತದೆ. ಹಂದಿಗಳಿಂದ ನಿಪಾಹ್ ವೈರಸ್ ಬರಬಹುದೆಂಬ ಆತಂಕವೂ ಅವುಗಳನ್ನು ಸೆರೆ ಹಿಡಿಯಲು ಕಾರಣವಾಗಿದೆ. ಆದರೆ ಇದರಿಂದ ಬಿಬಿಎಂಪಿ ನಿರೀಕ್ಷಿಸದ ಆದಾಯ ಬರುತ್ತಿದೆ ಎನ್ನುವುದು ಮಾತ್ರ ಸತ್ಯ.
ಸೆರೆ ಹಿಡಿಯುವ ಕಾರ್ಯಾಚರಣೆಗೆ ಬಿಬಿಎಂಪಿಯು ಖರ್ಚು ಮಾಡುತ್ತಿಲ್ಲ ಬದಲಾಗಿ ಹಂದಿಗಳನ್ನು ಹಿಡಿಯುವುದರಿಂದ ಆದಾಯ ಗಳಿಸುತ್ತಿದೆ. ಗುತ್ತಿಗೆದಾರರು ಪಾಲಿಕೆಗೆ ಕೆಜಿಗೆ 70 ರೂ.ನಂತೆ ಪಾವತಿಸುತ್ತಿದ್ದಾರೆ.
ನಿಪಾಹ್ ಭೀತಿ: ಹಂದಿಗಳ ಸೆರೆಗೆ ಮುಂದಾದ ಬಿಬಿಎಂಪಿ
ಗುತ್ತಿಗೆದಾರರು 10-15 ಮಂದಿಯ ತಂಡದೊಂದಿಗೆ ಬಿಡಾಡಿ ಹಂದಿಗಳಿರುವ ಸ್ಥಳಕ್ಕೆ ತೆರಳಿ ಸೆರೆ ಹಿಡಿಯುತ್ತಿದ್ದಾರೆ. ಈ ಮೊದಲು ಪಾಲಿಕೆಯೇ ಪ್ರತಿ ಹಂದಿಗಳನ್ನು ಹಿಡಿಯಲು 50 ರೂ. ಸಿಬ್ಬಂದಿಗಳಿಗೆ ನೀಡುತ್ತಿತ್ತು.
ಇದೀಗ ಹಂದಿಗಳನ್ನು ಹಿಡಿಯಲು ಯಾವುದೇ ರೀತಿಯ ಹಣ ವ್ಯಯಿಸುತ್ತಿಲ್ಲ. ಬೆಂಗಳೂರಿನಲ್ಲಿ 2012ರ ಗಣತಿ ಪ್ರಕಾರ 5,821 ಹಂದಿಗಳಿವೆ. ಕಳೆದ 6 ವರ್ಷಗಳಲ್ಲಿ ಅವುಗಳ ಸಂಖ್ಯೆ ನಾಲ್ಕೈದು ಪಟ್ಟು ಹೆಚ್ಚಾಗಿವೆ. ನಗರದ ಮೈಸೂರು ರಸ್ತೆ, ಎಚ್ಎಸ್ಆರ್ ಲೇಔಟ್, ಮಂಗಮ್ಮನಪಾಳ್ಯ, ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ಪ್ರದೇಶಗಳಲ್ಲಿ ಹಂದಿಗಳ ಹಾವಳಿ ಹೆಚ್ಚಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಹಂದಿ ಸಾಕಣೆ ಮಾಡುವ ಹಾಗಿಲ್ಲ, ಇದಕ್ಕೆ ಅನುಮತಿ ಇಲ್ಲ,ಮ ಆದರೆ ಪಾಲಿಕೆ ಗಡಿ ಭಾಗದಲ್ಲಿ ಅಕ್ರಮವಾಗಿ ಹಂದಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಮಾಲೀಕರು ಹಂದಿಗಳಿಗೆ ಗೂಡುಗಳನ್ನು ಕಟ್ಟಿಸಿ, ಮೇವು ಹಾಕುವ ಬದಲಾಗಿ ಬೀದಿಗೆ ಬಿಡುತ್ತಿದ್ದಾರೆ.
ಇದರಿಂದ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ನಗರ ಜಿಲ್ಲೆ ವ್ಯಾಪ್ತಿಯಲ್ಲಿ 540 ಹಂದಿ ಸಾಕಣೆ ಕೇಂದ್ರಗಳಿವೆ. ಜೂನ್ ತಿಂಗಳಲ್ಲಿ 56 ಹಂದಿಗಳನ್ನು ಸೆರೆಹಿಡಿಯಲಾಗಿದೆ.