ವಿಧಾನ ಪರಿಷತ್ನಲ್ಲೂ ಆಡಿಯೋ ಪ್ರಕರಣದ್ದೇ ಸದ್ದು, ಕಲಾಪ ಬಲಿ
ಬೆಂಗಳೂರು, ಫೆಬ್ರವರಿ 11: ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಗೆ ಕಾರಣವಾದ ಆಪರೇಷನ್ ಕಮಲ ಆಡಿಯೋ ಕ್ಲಿಪ್, ವಿಧಾನಪರಿಷತ್ನಲ್ಲೂ ಭಾರಿ ಸದ್ದು ಮಾಡಿತು.
ಮೇಲ್ಮನೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಬಿಜೆಪಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿಯು ಶಾಸಕರ ಖರೀದಿಗೆ ಇಳಿದಿದೆ. ಆ ಮೂಲಕ ಸದನವನ್ನು ಹರಾಜಿಗಿಟ್ಟಂತಾಗಿದೆ. ಇದರ ವಿರುದ್ಧ ತನಿಖೆ ಆಗಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು ನೀವೇನು ಸಾಚಾಗಳಾ? ಸತ್ಯ ಹರಿಶ್ಚಂದ್ರರಾ ಎಂದು ವಾಗ್ದಾಳಿ ಆರಂಭಿಸಿದರು. ಈ ಸಮಯ ಪರಸ್ಪರ ಬಿರುಸಿನ ಮಾತಿನ ಚಕಮಕಿ ನಡೆಯಿತು.

ಪ್ರಶ್ನೋತ್ತರ ವೇಳೆ ಇದಾಗಿದ್ದು, ಆಡಿಯೋ ಕ್ಲಿಪ್ ಬಗ್ಗೆ ಚರ್ಚಿಸಲು ನೀವು ನೊಟೀಸ್ ನೀಡಿಲ್ಲ ಎಂದು ಸಭಾಪತಿಗಳು ಆಡಳಿತ ಪಕ್ಷದ ಸದಸ್ಯರ ಮೇಲೆ ಗರಂ ಆದರು. ಆದರೂ ಸಹ ಗದ್ದಲ ಕಡಿಮೆ ಆಗಲಿಲ್ಲ.
ಪರಿಷತ್ನಲ್ಲಿ ಗದ್ದಲದ ಕಾರಣದಿಂದ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಎರಡು ಬಾರಿ ಕಲಾಪವನ್ನು ಮುಂದೂಡಿದರು ಆದರೂ ಸಹ ಗದ್ದಲ ಕಡಿಮೆ ಆಗದೆ ಅಂತಿಮವಾಗಿ ಕಲಾಪವನ್ನು ನಾಳೆಗೆ (ಮಂಗಳವಾರಕ್ಕೆ) ಮುಂದೂಡಲಾಯಿತು.











Click it and Unblock the Notifications