ಎಸ್ಬಿಎಂನಲ್ಲಿ ನೋಟುಗಳ ಬದಲಾವಣೆ, ಸಿಬಿಐನಿಂದ ಚಾರ್ಜ್ಶೀಟ್
ಬೆಂಗಳೂರು, ನವೆಂಬರ್ 8 : ನಿಷೇಧಿತ ನೋಟುಗಳನ್ನು ಹೊಸ ನೋಟಿನೊಂದಿಗೆ ಅಕ್ರಮವಾಗಿ ಪರಿವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮೊದಲ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಈ ಪ್ರಕರಣದ ಆರೋಪಿ ರವಿರಾಜ್ 2016ರ ಡಿಸೆಂಬರ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಬೆಂಗಳೂರಿನ ಅವೆನ್ಯೂ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ) ಶಾಖೆಯ ಮುಖ್ಯ ಕ್ಯಾಷಿಯರ್ ಜಿ.ರವಿರಾಜ್ ಹೆಸರನ್ನು ದೋಷರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಉಳಿದ ಆರೋಪಿಗಳ ವಿರುದ್ಧ ಇಲಾಖಾ ತನಿಖೆಗೆ ಶಿಫಾರಸು ಮಾಡಲಾಗಿದೆ.

ನೋಟುಗಳ ನಿಷೇಧದ ಬಳಿಕ ರದ್ದಾದ ನೋಟುಗಳನ್ನು ಪಡೆದು 20 ಲಕ್ಷ ಮೌಲ್ಯದ 2000 ರೂ. ಮುಖಬೆಲೆಯ ನೋಟುಗಳನ್ನು ನೀಡಲು ರವಿರಾಜ್ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು. ಸಿಬಿಐ ಪ್ರಾಥಮಿಕ ತನಿಖೆಯಲ್ಲಿ ಇದು ಬಹಿರಂಗವಾಗಿತ್ತು. ಕೊಳ್ಳೇಗಾಲ ಶಾಖೆಯಲ್ಲಿ ಅಕ್ರಮವಾಗಿ ಪರಿವರ್ತನೆ ಮಾಡಲಾಗಿತ್ತು.
ಜಿ.ರವಿರಾಜ್ ಅವರು 2016ರ ಡಿಸೆಂಬರ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೊಳ್ಳೇಗಾಲ ಶಾಖೆಯಲ್ಲಿ ನೋಟುಗಳ ಬದಲಾವಣೆಯಲ್ಲಿ ಬ್ಯಾಂಕಿನ ಕ್ಯಾಷಿಯರ್ ಪರಮಶಿವಮೂರ್ತಿ ಭಾಗಿಯಾಗಿದ್ದು, ಸಿಬಿಐ ಅವರನ್ನು ಬಂಧಿಸಿತ್ತು.
ನೋಟುಗಳ ಪರಿವರ್ತನೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ 5 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಮೊದಲ ಚಾರ್ಜ್ ಶೀಟ್ ಅನ್ನು ಸಿಬಿಐ ಸಲ್ಲಿಕೆ ಮಾಡಿದೆ. ಉಳಿದ ಪ್ರಕರಣಗಳು ತನಿಖಾ ಹಂತದಲ್ಲಿವೆ.












Click it and Unblock the Notifications