ಬೆಂಗಳೂರು-ಒಡಿಶಾ ಮಾರ್ಗದ 2 ರೈಲು ರದ್ದು, 6 ರೈಲುಗಳ ಸಂಚಾರ ಆರಂಭ
ಬೆಂಗಳೂರು, ಜೂನ್ 05: ಶುಕ್ರವಾರ ಸಂಜೆ ಒಡಿಶಾ ರಾಜ್ಯದ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ನಡೆದ ಭೀಕರ ರೈಲ್ವೆ ಅಪಘಾತದ ಬಳಿಕ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿತ್ತು. ಈಗ ಹಳಿಗಳ ದುರಸ್ತಿ ಕಾರ್ಯ ಮುಗಿದಿದ್ದು, ಬೆಂಗಳೂರು-ಒಡಿಶಾ ಮಾರ್ಗದ 6 ರೈಲುಗಳು ಸಂಚಾರ ನಡೆಸುತ್ತಿವೆ.
ರೈಲು ಅಪಘಾತ ನಡೆದ ಸ್ಥಳದಲ್ಲಿ ಅವಶೇಷಗಳನ್ನು ತೆರವುಗೊಳಿಸಿ ಭಾನುವಾರ ರಾತ್ರಿಯಿಂದಲೇ ಪ್ರಯಾಣಿಕ, ಗೂಡ್ಸ್ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ ದೇಶದ ವಿವಿಧ ರೈಲು ನಿಲ್ದಾಣದಲ್ಲಿ ಸಿಲುಕಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಸರಕು ಸಾಗಣೆ ರೈಲಿಗೆ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿತ್ತು. ಪರಿಣಾಮ 20 ಬೋಗಿಗಳು ಹಳಿ ತಪ್ಪಿದ್ದವು. ಈ ಬೋಗಿ ಅಕ್ಕಪಕ್ಕದ ಹಳಿಗಳ ಮೇಲೆ ಉರುಳಿದವು. ಕೇವಲ 6 ನಿಮಿಷಗಳ ಅಂತರದಲ್ಲಿ ಇದೇ ಮಾರ್ಗದಲ್ಲಿ ಬಂದ ಹೌರಾ ಸೂಪರ್ ಫಾಸ್ಟ್ ರೈಲಿಗೆ ಬೋಗಿಗಳು ಡಿಕ್ಕಿಯಾಗಿ ಆ ರೈಲಿನ ಸುಮಾರು 3 ಬೋಗಿ ಹಳಿ ತಪ್ಪಿತ್ತು. ಈ ದುರಂತದಲ್ಲಿ 270ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಹಲವು ರೈಲುಗಳು ರದ್ದು; ಈ ಅಪಘಾತದ ಬಳಿಕ ಈ ಮಾರ್ಗದಲ್ಲಿ ಸಾಗಬೇಕಿದ್ದ ಸುಮಾರು 48 ರೈಲುಗಳು ಸಂಚಾರ ರದ್ದು ಮಾಡಲಾಗಿತ್ತು. ಇದರಲ್ಲಿ ಬೆಂಗಳೂರು-ಒಡಿಶಾ ಮಾರ್ಗದಲ್ಲಿ ಸಾಗುವ 8 ರೈಲುಗಳು ಸಹ ಸೇರಿತ್ತು. ಈಗ ರೈಲು ಸಂಚಾರ ಪುನಃ ಆರಂಭವಾಗಿದ್ದು, 6 ರೈಲುಗಳು ಸಂಚಾರ ಆರಂಭಿಸಿವೆ. ಆದರೆ 2 ರೈಲುಗಳ ಸಂಚಾರ ರದ್ದು ಮಾಡಲಾಗಿದೆ.

ರೈಲ್ವೆ ಇಲಾಖೆ ಅಧಿಕಾರಿಗಳ ಪ್ರಕಾರ ಬೆಂಗಳೂರಿನಿಂದ ಸಂಚಾರ ನಡೆಸಬೇಕಿದ್ದ ರೈಲು ಸಂಖ್ಯೆ 12246 ಹೌರಾ ತುರಂತೋ ಎಕ್ಸ್ಪ್ರೆಸ್ ಮತ್ತು ರೈಲು ಸಂಖ್ಯೆ 12864 ಹೌರಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳು ರದ್ದಾಗಿವೆ. ಈ ಎರಡೂ ರೈಲುಗಳು ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಹೊರಡಬೇಕಿತ್ತು.
ಬಿಬಿಎಂಪಿಯಿಂದ ಊಟದ ವ್ಯವಸ್ಥೆ; ಬೆಂಗಳೂರು-ಒಡಿಶಾ ಮಾರ್ಗದ ಅನೇಕ ರೈಲುಗಳ ಸಂಚಾರ ರದ್ದುಗೊಂಡ ಬಳಿಕ ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಯಶವಂತಪುರ ರೈಲು ನಿಲ್ದಾಣದಲ್ಲಿ ಹಲವು ಪ್ರಯಾಣಿಕರು ಸಿಲುಕಿದ್ದರು. ಬೇರೆ ಬೇರೆ ಪ್ರದೇಶಗಳಿಗೆ ಸಂಚಾರ ನಡೆಸಬೇಕಾದ ಜನರು ರೈಲು ಸೇವೆ ಯಾವಾಗ ಆರಂಭವಾಗಲಿದೆ? ಎಂದು ಕಾದು ಕುಳಿತಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಒಡಿಶಾದಲ್ಲಿ ರೈಲು ಅಪಘಾತ ಸಂಭವಿಸಿರುವ ಕಾರಣ ಆ ಮಾರ್ಗದಲ್ಲಿ ಸಂಚರಿಸುವ ಹತ್ತಾರು ರೈಲುಗಳ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳು, ಕೋಲ್ಕತ್ತಾ ಮುಂತಾದ ಕಡೆಗಳಿಗೆ ತೆರಳಬೇಕಿರುವ ಕಾರ್ಮಿಕರು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲೇ ದಿನ ಕಳೆಯುವಂತಾಗಿದೆ. ಹೀಗಾಗಿ ಅವರೆಲ್ಲರಿಗೂ ಊಟ, ತಿಂಡಿ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆಯಂತೆ ಶನಿವಾರ ರಾತ್ರಿ, ಭಾನುವಾರ ರೈಲು ನಿಲ್ದಾಣದಲ್ಲಿ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ನಿಲ್ದಾಣದಲ್ಲಿ ಸಿಲುಕಿದ್ದ ಮಕ್ಕಳಿಗಾಗಿ ಹಾಲು, ಬಿಸ್ಕೆಟ್ ವ್ಯವಸ್ಥೆ ಸಹ ಬಿಬಿಎಂಪಿಯಿಂದ ಮಾಡಲಾಗಿತ್ತು.
ಬಾಲಸೋರ್ ರೈಲು ದುರಂತಕ್ಕೆ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಯ ಬದಲಾವಣೆ ಕಾರಣ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರು ಈ ಅಪಘಾತದ ಬಗ್ಗೆ ತನಿಖೆ ತನಿಖೆ ಕೈಗೊಂಡಿದ್ದು, ವರದಿಯಲ್ಲಿ ಕಾರಣ ಯಾರು? ಎಂದು ಉಲ್ಲೇಖಿಸಲಿದ್ದಾರೆ. ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ, ಸಚಿವರು ಭರವಸೆ ನೀಡಿದ್ದಾರೆ.












Click it and Unblock the Notifications