ನಮ್ಮ ಮೆಟ್ರೋಗೆ ಆರು ಕೋಚ್ ಸೇವೆಯ ಗರಿ!
ಬೆಂಗಳೂರು, ಜೂನ್ 22: ಆರು ಬೋಗಿಗಳ ನಮ್ಮ ಮೆಟ್ರೋ ಸಂಚಾರಕ್ಕೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರೊಡಗೂಡಿ ಹಸಿರು ನಿಶಾನೆ ತೋರಿದರು.
ವಿಧಾನಸೌಧದಿಂದ ಮೆಟ್ರೋದಲ್ಲಿಯೇ ಸಂಚರಿಸಿ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಬಂದ ಮುಖ್ಯಮಂತ್ರಿಗಳು ಅಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದು ವಿಶೇಷವಾಗಿತ್ತು. ನಂತರ ತಾವೇ ಟಿಕೆಟ್ ಖರೀದಿಸಿ ಜನಸಾಮಾನ್ಯರೊಂದಿಗೆ ಬೈಯಪ್ಪನಹಳ್ಳಿಯಿಂದ ಮೆಜೆಸ್ಟಿಕ್ ವರೆಗೆ ಪ್ರಯಾಣ ಬೆಳೆಸಿದರು.
ಬೆಂಗಳೂರಿನ ಅಷ್ಟದಿಕ್ಕುಗಳಿಗೂ 4 ಹಂತದಲ್ಲಿ ನಮ್ಮ ಮೆಟ್ರೋ: ಎಚ್ಡಿಕೆ
ಮೆಜಿಸ್ಟಿಕ್ ನಿಂದ ಅದೇ ರೈಲು ನಾಯಂಡಹಳ್ಳಿಗೆ ಪ್ರಯಾಣಿಕರನ್ನು ಹೊತ್ತೊಯ್ಯಲಿದೆ. ಮೊದಲ ಬೋಗಿ ಮಹಿಳೆಯರಿಗೇ ಮೀಸಲಾಗಿರಲಿದೆ. ಸದ್ಯ ಮೆಟ್ರೊ ಬಳಿಯಿರುವ 50 ರೈಲುಗಳ ಪೈಕಿ ಒಂದು ರೈಲಿಗೆ ಬೆಮೆಲ್ ಸಂಸ್ಥೆ ನೀಡಿದ 3 ಬೋಗಿಗಳನ್ನು ಸೇರಿಸಿ 6 ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ.
ಪ್ರತಿದಿನ ಪೀಕ್ ಅವರ್ ನಲ್ಲಿ 12 ಟ್ರಿಪ್ ಗಳಲ್ಲಿ ಈ 6 ಬೋಗಿಗಳ ರೈಲನ್ನು ಬಳಸಿಕೊಳ್ಳಲು ಮೆಟ್ರೊ ನಿಗಮ ನಿರ್ಧರಿಸಿದೆ. ರೈಲ್ವೇ ಸುರಕ್ಷತಾ ಆಯುಕ್ತರು 6 ಬೋಗಿಗಳ ರೈಲು ಗರಿಷ್ಠ 80 ಕಿಲೋ ಮೀಟರ್ ಸ್ಪೀಡ್ ನಲ್ಲಿ ಸಂಚರಿಸಲು ಅನುಮತಿ ನೀಡಿದ್ದಾರೆ.
ಬೈಯ್ಯಪ್ಪನಹಳ್ಳಿ - ನಾಯಂಡಹಳ್ಳಿ ಮಧ್ಯೆ ಸದ್ಯ 24 ರೈಲುಗಳು ಸಂಚರಿಸುತ್ತಿದ್ದು, 50 ರಿಂದ 60 ಲಕ್ಷ ಆದಾಯ ಬರ್ತಿದೆ. 6 ಬೋಗಿಗಳ ರೈಲನ್ನು ಹೆಚ್ಚಿನ ರಷ್ ಇದ್ದಾಗ ಬಳಸಿಕೊಳ್ಳಲು ನಿಗಮ ಪ್ಲಾನ್ ಮಾಡಿದೆ. ಜೂನ್ 17ಕ್ಕೆ ಮೆಟ್ರೊ ಮೊದಲ ಹಂತ ಲೋಕಾರ್ಪಣೆಯಾಗಿ ಒಂದು ವರ್ಷವಾಗಿತ್ತು. 12 ಕೋಟಿ ಗೂ ಹೆಚ್ಚು ಮಂದಿ ಈ ಅವಧಿಯಲ್ಲಿ ಮೆಟ್ರೊ ರೈಲಿನಲ್ಲಿ ಸಂಚರಿಸಿದ್ದರು.
2019ರ ಜೂನ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಮೆಟ್ರೊ ರೈಲುಗಳೆಲ್ಲಾ 6 ಬೋಗಿಗಳಾದರೆ ಪ್ರಯಾಣಿಕರ ಹೊತ್ತೊಯ್ಯುವ ಸಾಮರ್ಥ್ಯ ಹೆಚ್ಚಾಗಲಿದೆ. ಆಗಸ್ಟ್ ನಲ್ಲಿ ಮತ್ತೊಂದು ಸೆಟ್ ಕೋಚ್ ಬೆಮೆಲ್ ನಿಂದ ಮೆಟ್ರೊ ನಿಗಮಕ್ಕೆ ಹಸ್ತಾಂತರವಾಗಲಿದೆ. ಸದ್ಯ 3 ಬೋಗಿಗಳ ರೈಲಲ್ಲಿ 900 ಜನ ಸಂಚರಿಸುತ್ತಿದ್ದು, 6 ಬೋಗಿಗಳ ರೈಲಿನಲ್ಲಿ 1800 ಮಂದಿ ಸಂಚರಿಸಬಹುದು.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಸಚಿವರಾದ ಕೆ ಜೆ ಜಾರ್ಜ್, ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಹಾಗೂ ಮೆಟ್ರೋ ಅಧಿಕಾರಿಗಳು ಇದ್ದರು.