ಸಾಮ್ರಾಜ್ಯ ಕೈತಪ್ಪುವ ಭೀತಿ, ಅಶೋಕ್ ಸ್ಪರ್ಧಿಸೋಲ್ಲ?
ಬೆಂಗಳೂರು, ಫೆ.13: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರಕ್ಕಾಗಿ ಪಟ್ಟು ಹಿಡಿದಿದ್ದ ಬಿಜೆಪಿಯ ಮೂರ್ನಾಲ್ಕು ಧೀಮಂತ ನಾಯಕರು ಒಬ್ಬೊಬ್ಬರಾಗಿ ಈಗ ಕಣದಿಂದ ದೂರ ಸರಿಯುವ ಮಾತನ್ನಾಡುತ್ತಿದ್ದಾರೆ.
ಮತ್ತೊಂದು ನಾಟಕ: ಕ್ಷೇತ್ರವನ್ನು ಬಹುವಾಗಿ ನೆಚ್ಚಿಕೊಂಡಿದ್ದ ಮಾಜಿ ಗೃಹ ಸಚಿವ ಮತ್ತು ಸ್ಥಳೀಯ ಆರ್ ಅಶೋಕ್ ಅವರು ಕೇರಳದಲ್ಲಿ ದೇವಿಯ ಮುಂದೆ (ತಿರುವಣ್ಣಮಲೈ) ಶಕ್ತಿ ಪ್ರದರ್ಶನ ನಡೆಸಿದ ನಂತರ ಬದಲಾಗಿದ್ದಾರೆ. ನಗರಕ್ಕೆ ಹಿಂದಿರುಗಿದ ಬಳಿಕ ಕಣದಿಂದ ದೂರ ಸರಿಯುವುದಾಗಿ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ.

ಕೇರಳದಲ್ಲಿ ನಡೆದ ಮಾತುಕತೆ ವೇಳೆ, ಪರಿಸ್ಥಿತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದ ಅಶೋಕ್ ಕಟ್ಟಾಳುಗಳು ಕಣದಿಂದ ಹಿಂದೆ ಸರಿಯುವಂತೆ ಅಶೋಕ್ ಗೆ 'ಹಿತವಚನ' ನುಡಿದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಮತ್ತೊಬ್ಬ ಆಕಾಂಕ್ಷಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ನನಗೆ ಚುನಾವಣೆ ಸಹವಾಸವೇ ಬೇಡ ಎಂದಿದ್ದಾರೆ. ಗಮನಾರ್ಹವೆಂದರೆ ಸದಾನಂದ ಗೌಡರು ಇದೇ ಕ್ಷೇತ್ರದಲ್ಲಿ ಸ್ಪರ್ಧಿಸ ಬಯಸುವುದಾದರೇ ತಾನು ಹಿಂದಕ್ಕೆ ಸರಿಯುವುದಾಗಿ ಶೋಭಾ ಕರಂದ್ಲಾಜೆ ಸಹ ಹೇಳಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಹಾಲಿ ಸಂಸದ ಡಿಬಿ ಚಂದ್ರೇಗೌಡ ಹಾಗೂ ಅಶೋಕ್ ಅವರುಗಳು ಬಯಸಿದರೆ ನಾನು ಹಿಂದೆ ಸರಿಯಲು ಸಿದ್ಧ. ರಾಜ್ಯಾದ್ಯಂತ ಪ್ರಚಾರ ಸೀಮಿತವಾಗಿ ಎಂದು ಪಕ್ಷ ಬಯಸಿದರೆ ಅದಕ್ಕೂ ಸಿದ್ಧ ಎಂದು ಉಡುಪಿಯಲ್ಲಿ ಬುಧವಾರ ಮಾಜಿ ಸಿಎಂ ಡಿವಿ ಸದಾನಂದಗೌಡ ತಿಳಿಸಿದ್ದಾರೆ.
ಇವರ ಪೈಕಿ ಆರ್ ಅಶೋಕ್ ಕಣದಿಂದ ಹಿಂದೆಸರಿಯುವ ಮಾತನ್ನಾಡಿರುವುದು ಇಂಟರೆಸ್ಟಿಂಗ್ ಆಗಿದೆ. ಏಕೆಂದರೆ ಅಶೋಕ್, ಲೋಕಸಭೆಗೆ ನಿಂತು ಗೆದ್ದು ಬಂದರೆ ಈಗಿನ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರವನ್ನು ತಾನು ಸೂಚಿಸುವ ಅಭ್ಯರ್ಥಿಗೇ ಬಿಟ್ಟುಕೊಡಬೇಕು ಎಂದು ಪಕ್ಷದ ಮುಂದೆ ಅಶೋಕ್ ಕಂಡೀಶನ್ ಇಟ್ಟಿದ್ದರು ಎನ್ನಲಾಗಿದೆ. ಆದರೆ ಅದಕ್ಕೆ ಸೊಪ್ಪು ಹಾಕದ ಪಕ್ಷವು ಯಾವುದೇ ಕಾರಣಕ್ಕೂ ಆ ಷರತ್ತನ್ನು ಒಪ್ಪುವುದಿಲ್ಲ. ಪಕ್ಷ ಸೂಚಿಸುವ ಅಭ್ಯರ್ಥಿಯೇ ಕಣಕ್ಕಿಳಿಯುತ್ತಾರೆ ಎಂದು ನಾಯಕರು ಸ್ಪಷ್ಟಪಡಿಸಿದ್ದರು.
ಇದರ ಜತೆಗೆ ಅಶೋಕ್ ಗೆ ಮತ್ತೊಂದು ದಿಗಿಲು ಹುಟ್ಟಿಕೊಂಡಿದೆ. ತಾವೀಗ ಬೆಂಗಳೂರಿನಲ್ಲಿ ಪ್ರಭಾವಿ ನಾಯಕ. ಒಂದು ವೇಳೆ ದಿಲ್ಲಿಗೆ ಹೊರಟುಹೋದರೆ ಇಲ್ಲಿನ ಸಾಮ್ರಾಜ್ಯದ ಮೇಲೆ ತಮ್ಮ ಹಿಡಿತ ತಪ್ಪಬಹುದು ಎಂಬ ಭೀತಿ ಆವರಿಸಿದೆ. ಪ್ರಸ್ತುತ ಅಸೆಂಬ್ಲಿಯಲ್ಲಿ ಉಪನಾಯಕರಾಗಿರುವ ಅಶೋಕ್ ಹಿಡಿತ ಸಡಿಲಿಸಲು ಸಿದ್ಧವಿಲ್ಲ. ಜತೆಗೆ, ಇದುವರೆಗೆ ಪಕ್ಷದ ವತಿಯಿಂದ ಸಂಸತ್ತಿಗೆ ಪ್ರವೇಶಿಸಿದವರು ಯಾರೂ ರಾಜ್ಯ ರಾಜಕಾರಣದಲ್ಲಿ ಮಿಂಚಿಲ್ಲ ಎಂಬುದೂ ಗಮನಾರ್ಹ.
ಯಾವುದಕ್ಕೇ ಆಗಲಿ ಇನ್ನೂ ಒಂದು ಬಾರಿ ಹಿತೈಷಿಗಳ ಜತೆ ಮಾತುಕತೆ ನಡೆಸಿ, ಶೀಘ್ರವೇ ಪಕ್ಷದ ನಾಯಕರಿಗೆ ತಮ್ಮ ಅಂತಿಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.












Click it and Unblock the Notifications