ಇದು ನನ್ನ ದೇಶವಲ್ಲ, ಗೌರಿ ಹತ್ಯೆಗೆ ರಹಮಾನ್ ಕಂಬನಿ
Recommended Video

ಬೆಂಗಳೂರು, ಸೆಪ್ಟೆಂಬರ್ 09 : "ಇಂಥ ಘಟನೆಗಳು ಈ ದೇಶದಲ್ಲಿ ಆಗುತ್ತಿದ್ದರೆ ಇದು ನನ್ನ ದೇಶವಾಗಲು ಸಾಧ್ಯವೇ ಇಲ್ಲ" ಎಂದು ಗೌರಿ ಲಂಕೇಶ್ ಹತ್ಯೆ ಕುರಿತಂತೆ ಖ್ಯಾತ ಸಂಗೀತ ನಿರ್ದೇಶಕ ಎಆರ್ ರಹಮಾನ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಘಟನೆಯಿಂದ ನನಗೆ ನಿಜವಾಗಿಯೂ ನೋವಾಗಿದೆ. ಈ ಹತ್ಯೆ ನನ್ನ ಮನಸ್ಸನ್ನು ತುಂಬಾ ಕಲಕಿದೆ. ಇನ್ನು ಮುಂದೆ ಇಂಥ ಘಟನೆಗಳು ಭಾರತದಲ್ಲಿ ಮರುಕಳಿಸುವುದಿಲ್ಲ ಎಂದು ನಂಬಿದ್ದೇನೆ ಎಂದು 'ಒನ್ ಹಾರ್ಟ್ : ಎಆರ್ ರಹಮಾನ್ ಕನ್ಸರ್ಟ್ ಫಿಲ್ಮ್' ಸಿನೆಮಾದ ಶೋದಂದು ಶುಕ್ರವಾರ ಹೇಳಿದರು.

ಗೌರಿ ಲಂಕೇಶ್ ಪತ್ರಿಕೆಯ ಸಂಪಾದಕಿಯಾಗಿದ್ದ ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5ರಂದು ಮಂಗಳವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆಯೆದಿರು ಆಗಂತುಕರು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಾಲ್ಕು ದಿನಗಳಾದರೂ ಪೊಲೀಸರಿಗೆ ಕೊಲೆಗಡುಕರ ಯಾವುದೇ ಸುಳಿವು ಸಿಕ್ಕಿಲ್ಲ.
ನನ್ನ ಭಾರತ ಅಭಿವೃದ್ಧಿಯೆಡೆಗೆ ಸಾಗುತ್ತಿರಬೇಕು, ಭಾರತದ ಹೃದಯದಲ್ಲಿ ಕಾರುಣ್ಯ ತುಂಬಿರಬೇಕು ಎಂದು ಆಶಿಸುತ್ತೇನೆ ಎಂದು ಅಭಿಮತ ವ್ಯಕ್ತಪಡಿಸಿದರು, ತಮ್ಮ ಆರಂಭಿಕ ಚಿತ್ರಜೀವನದಲ್ಲಿ ಹಂಸಲೇಖಾ ಅವರ ಕೀಬೋರ್ಡ್ ಕಲಾವಿದರಾಗಿದ್ದ ರಹಮಾನ್. ಅವರು ಕನ್ನಡದ ಗಾಡ್ ಫಾದರ್ ಮತ್ತು ಸಜನಿ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು.
ಅಮೆರಿಕದ 14ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಂಗೀತ ಕಚೇರಿ ನಡೆಸಿದ್ದನ್ನು ಆಧರಿಸಿ ತಯಾರಿಸಲಾಗಿರುವ 'ಒನ್ ಹಾರ್ಟ್ : ಎಆರ್ ರಹಮಾನ್ ಕನ್ಸರ್ಟ್ ಫಿಲ್ಮ್' ಬಿಡುಗಡೆ ದಿನ ಕನ್ನಡ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಮಮ್ಮಲ ಮರುಗಿದರು.
ಈ ಸಿನೆಮಾದಲ್ಲಿ ಅವರ ಮತ್ತು ಅವರ ಬ್ಯಾಂಡ್ ಸದಸ್ಯರ ಸಂದರ್ಶನ, ಅಭ್ಯಾಸ ಮಾಡುತ್ತಿದ್ದ ಸಂದರ್ಭ ಮತ್ತು ವೈಯಕ್ತಿಕವಾಗಿ ರಹಮಾನ್ ಅವರ ಬಗ್ಗೆ ಹೆಚ್ಚು ತಿಳಿಯದ ಸಂಗತಿಗಳನ್ನು ಈ ಚಿತ್ರದಲ್ಲಿ ಅಳವಡಿಸಲಾಗಿದೆ.












Click it and Unblock the Notifications