ತೆಲಂಗಾಣ ಪಾಲಾದ 'ಕೇಯ್ನ್ಸ್ ಟೆಕ್ನಾಲಜೀಸ್ ಕಂಪನಿ' ಬಗ್ಗೆ ಎಂಬಿ ಪಾಟೀಲ್ ಪ್ರತಿಕ್ರಿಯೆ
ಬೆಂಗಳೂರು, ಅಕ್ಟೋಬರ್ 27: ಸೆಮಿಕಂಡಕ್ಟರ್ ವಲಯದ 'ಕೇಯ್ನ್ಸ್ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್' (kaynes technology company) ರಾಜ್ಯದಲ್ಲಿ ತನ್ನ ಘಟಕ ಸ್ಥಾಪಿಸುವ ಸಂಬಂಧ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸ್ಪಂದಿಸುವುದರಲ್ಲಿ ಸರ್ಕಾರದ ಕಡೆಯಿಂದ ಒಂದು ಸಣ್ಣ ಲೋಪವೂ ಆಗಿಲ್ಲ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಶುಕ್ರವಾರ ಸಮರ್ಥಿಸಿಕೊಂಡರು.
ಉದ್ಯಮಿ ಮೋಹನ್ ದಾಸ್ ಪೈ ಅವರು ಕೇಯ್ನ್ಸ್ ಟೆಕ್ನಾಲಜೀಸ್ ಕಂಪನಿಯು ಮೈಸೂರಿಗೆ ಬದಲಾಗಿ ತೆಲಂಗಾಣದಲ್ಲಿ ತನ್ನ ಒ ಎಸ್ ಎ ಟಿ (ಔಟ್ ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಆಂಡ್ ಟೆಸ್ಟ್) ಘಟಕದ ನಿರ್ಮಾಣ ಕಾರ್ಯ ಆರಂಭಿಸಿದೆ. ಕರ್ನಾಟಕದ ವಿಳಂಬ ಧೋರಣೆ ಇದಕ್ಕೆ ಕಾರಣ ಎಂದು ಎಕ್ಸ್ ನಲ್ಲಿ ಹಾಕಿರುವ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು ಹೀಗೆ ಹೇಳಿದರು.

500 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಉದ್ದಿಮೆ ಸ್ಥಾಪನೆ ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯಲ್ಲಿ ಅನುಮೋದನೆ ಅಗತ್ಯವಾಗಿತ್ತು. ಹೀಗಿದ್ದರೂ, ನಾವು ಕೇಯ್ನ್ಸ್ ಕಂಪನಿಗೆ ಸಮಿತಿ ಸಭೆ ನಡೆಯುವುದಕ್ಕೆ ಮುಂಚಿತವಾಗಿಯೇ ಅನುಮೋದನೆ ಕೊಟ್ಟು ಸರ್ಕಾರಿ ಆದೇಶ (ಜಿಒ) ನೀಡಿದ್ದೆವು. ಇಷ್ಟೆಲ್ಲಾ ಮಾಡಿರುವಾಗ ಸರ್ಕಾರದಿಂದ ವಿಳಂಬ ಧೋರಣೆ ಎಂದು ದೂಷಿಸುವುದು ಸರಿಯಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು.
ನಿಯಮಗಳ ಪ್ರಕಾರ ವಿನಾಯಿತಿಗೆ ಸಿದ್ಧರಿದ್ದೇವು
ಕೇಯ್ನ್ಸ್ ಕಂಪನಿಯು ತೆಲಂಗಾಣಕ್ಕೆ ಹೋಗಿರುವುದಕ್ಕೆ ತನ್ನದೇ ಕಾರಣಗಳಿರಬಹುದು. ಅವರು ನಮ್ಮಿಂದ ಇನ್ನೂ ಹೆಚ್ಚಿನ ವಿನಾಯಿತಿಗಳನ್ನು ಬಯಸಿದ್ದರೋ ಏನೋ ಗೊತ್ತಿಲ್ಲ. ನಾವು ಸರ್ಕಾರದ ನಿಯಮಗಳ ಪ್ರಕಾರ ನಿಗದಿತ ವಿನಾಯಿತಿಗಳನ್ನು ಕೊಡಲು ಸಿದ್ಧರಿದ್ದೇವೆ. ಈ ಸಂಬಂಧ ಅವರು ಮುಖ್ಯಮಂತ್ರಿ ಜತೆಗೂ ಚರ್ಚಿಸಿದ್ದರು. ಆದರೆ ಕಂಪನಿಯ ನಿರೀಕ್ಷೆ ಅದಕ್ಕಿಂತ ಹೆಚ್ಚಿಗೆ ಇದ್ದಾಗ ನಾವು ನಿಯಮ ಮೀರಲು ಸಾಧ್ಯವಾಗುವುದಿಲ್ಲ ಎಂದು ಪಾಟೀಲ ಸ್ಪಷ್ಟಪಡಿಸಿದರು.
ನಾವು ಅಮೆರಿಕಕ್ಕೆ ತೆರಳಿದ್ದ ಸಂದರ್ಭದಲ್ಲಿಯೂ ಕೇಯ್ನ್ಸ್ ಕಂಪನಿಯ ಜೊತೆ ಸಂಪರ್ಕದಲ್ಲಿದ್ದು ಸ್ಪಂದಿಸಿದ್ದೆವು ಎಂದು ಅವರು ಹೇಳಿದರು.
ಮೋಹನ್ ದಾಸ್ ಪೈ ಅವರಿಗೆ ಬಹುಶಃ ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲದೇ ಇರಬಹುದು. ನಮ್ಮ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತರು ಅವರೊಂದಿಗೆ ಮಾತನಾಡಿ ವಿವರಿಸಲಿದ್ದಾರೆ ಎಂದು ಸಚಿವರು ಹೇಳಿದರು.
ರಾಜ್ಯವು ಹೂಡಿಕೆಯನ್ನು ಸೆಳೆಯುವುದರಲ್ಲಿ ಮುಂಚೂಣಿಯಲ್ಲೇ ಇದೆ. ಸದ್ಯದಲ್ಲೇ 25 ಸಾವಿರ ಕೋಟಿ ರೂಪಾಯಿಗಳಷ್ಟು ಹೂಡಿಕೆಗಳು ಇಲ್ಲಿ ಆಗಲಿವೆ ಎಂದರು.












Click it and Unblock the Notifications