ನಮ್ಮ ತಂಟೆಗೆ ಬಂದರೆ ನಿಮ್ಮ ವಿಕೆಟ್ಗಳು ಬೀಳುತ್ತವೆ: ಬಿಜೆಪಿಗೆ ದಿನೇಶ್ ವಾರ್ನಿಂಗ್
ಬೆಂಗಳೂರು, ಸೆಪ್ಟೆಂಬರ್ 12: ಬಿಜೆಪಿ ಪಕ್ಷದ ಮುಖಂಡರು ನಮ್ಮ ಶಾಸಕರಿಗೆ ಆಮೀಷ ಒಡ್ಡುತ್ತಿದ್ದಾರೆ ಕೆಲವರಿಗೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿಗೆ ಎಚ್ಚರಿಕೆ ನೀಡಿದ ಅವರು, ಬಿಜೆಪಿ ಇದೇ ರೀತಿಯ ಕುತಂತ್ರ ಮುಂದುವರೆಸಿದರೆ ಬಿಜೆಪಿಯ ವಿಕೆಟ್ ಉರುಳಲು ಪ್ರಾರಂಭವಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್, ನಾಗೇಂದ್ರ ಇನ್ನು ಕೆಲವು ಶಾಸಕರನ್ನು ಪಕ್ಕದಲ್ಲಿರಿಸಿಕೊಂಡೇ ಸುದ್ದಿಗೋಷ್ಠಿ ನಡೆಸಿದ ದಿನೇಶ್ ಗುಂಡೂರಾವ್ ಅವರು, ನಮ್ಮ ಯಾವೊಬ್ಬ ಶಾಸಕರೂ ಕೂಡ ಪಕ್ಷ ಬಿಡುತ್ತಿಲ್ಲ, ಮಾಧ್ಯಮಗಳಲ್ಲಿ ಸಹ ಊಹೆ ಆದರಿಸಿ ಕೆಲವು ಸುದ್ದಿಗಳು ಪ್ರಸಾರವಾಗುತ್ತಿವೆ ಎಂದರು.

ಬಿಜೆಪಿಯ ಕೆಲವು ಶಾಸಕರು ಈಗಾಗಲೇ ನಮ್ಮನ್ನು ಸಂಪರ್ಕಿಸಿದ್ದಾರೆ. ಐದು ಲೋಕಸಭೆ ಸದಸ್ಯರು ಸಹ ಕಾಂಗ್ರೆಸ್ಗೆ ಬರಲು ಉತ್ಸುಕರಾಗಿದ್ದಾರೆ. ಆದರೆ ಬಿಜೆಪಿಯಂತೆ ಕುತಂತ್ರದ ರಾಜಕಾರಣ ನಮಗೆ ಅವಶ್ಯಕತೆ ಇಲ್ಲದ ಕಾರಣ ಕಾಂಗ್ರೆಸ್ ಈ ವಿಷಯದಲ್ಲಿ ಮುಂದುವರೆಯುತ್ತಿಲ್ಲ ಎಂದರು.
ಬಿಜೆಪಿಯು ನಮ್ಮ ಶಾಸಕರ ಮನೆಗಳಿಗೆ ಹೋಗಿ, ಹಣದ ಆಮೀಷ ಒಡ್ಡುವ ಜೊತೆಗೆ, ಕೆಲವರಿಗೆ ಬೆದರಿಕೆಗಳನ್ನೂ ಹಾಕಿದೆ. ಇದು ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದ್ದು, ಬಿಜೆಪಿಯು ತನ್ನ ಷಡ್ಯಂತ್ರವನ್ನು ಈ ಕೂಡಲೆ ನಿಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಕಾಂಗ್ರೆಸ್ನ ಎಲ್ಲ ಶಾಸಕರೂ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದು ಯಾವೊಬ್ಬ ಶಾಸಕರೂ ಸಹ ಪಕ್ಷ ಬಿಡುವ ಮಾತನ್ನು ಈವರೆಗೆ ಆಡಿಲ್ಲ. ಬೆಳಗಾವಿ ರಾಜಕೀಯ ಸಣ್ಣ ಗೊಂದಲದ ಹೊರತಾಗಿ ಇನ್ನೇನೂ ಅಲ್ಲ, ಅದು ಸಹ ಈಗ ಇತ್ಯರ್ಥವಾಗಿದ್ದು ಯಾವೊಬ್ಬ ಶಾಸಕರೂ ಸಹ ಪಕ್ಷ ಬಿಟ್ಟು ಹೋಗುತ್ತಿಲ್ಲ ಎಂದರು.
ಉತ್ತರ ಕರ್ನಾಟಕದ ಬಹುತೇಕ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸಹ ದಿನೇಶ್ ಗುಂಡೂರಾವ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.












Click it and Unblock the Notifications