ಬೆಂಗಳೂರು ಮಂದಿಗೆ ಕುಡಿಯುವುದಕ್ಕೆ ಯಾವ ಕೆರೆಯ ನೀರು ಬೆಸ್ಟ್?
ಬೆಂಗಳೂರು, ಸೆಪ್ಟೆಂಬರ್ 2: ಬೆಂಗಳೂರಿನಲ್ಲಿ ಕೆರೆಗಳ ಸಂಖ್ಯೆಗೇನೂ ಕಡಿಮೆಯಿಲ್ಲ. ಆದರೆ ರಾಜ್ಯ ರಾಜಧಾನಿಯಲ್ಲಿ ಇರುವ ಅಷ್ಟೂ ಕೆರೆಗಳಲ್ಲಿ ಒಂದೇ ಒಂದು ಕೆರೆಯ ನೀರು ಕೂಡಾ ಕುಡಿಯುವುದಕ್ಕೆ ಯೋಗ್ಯವಾಗಿಲ್ಲ ಎಂಬ ವರದಿ ಹೊರ ಬಿದ್ದಿದೆ.
ಸಿಲಿಕಾನ್ ಸಿಟಿಯ ತ್ಯಾಜ್ಯವನ್ನೆಲ್ಲ ನಗರದಲ್ಲಿರುವ ಕೆರೆಗಳಿಗೆ ಬಿಡಲಾಗುತ್ತಿದೆ. ಇದರಿಂದಾಗಿ ಕೆರೆಗಳು ಮಾಲಿನ್ಯಗೊಂಡಿದ್ದು, ಕೆರೆಗಳ ನೀರು ಸಾರ್ವಜನಿಕರ ಆರೋಗ್ಯ ಸಮಸ್ಯೆಗೆ ಕಾರಣವಾಗಬಲ್ಲದು ಎಂದು ಗೊತ್ತಾಗಿದೆ.
ಬೆಂಗಳೂರು; ಕೆರೆ ಅಭಿವೃದ್ಧಿ ಯೋಜನೆಗೆ 6,316 ಮರಗಳಿಗೆ ಕೊಡಲಿ
ಬೆಂಗಳೂರಿನ ಕೆರೆಗಳ ಗುಣಮಟ್ಟ ಹೇಗಿದೆ?, ಕೆರೆಗಳು ಮಾಲಿನ್ಯಗೊಳ್ಳುವುದಕ್ಕೆ ಮುಖ್ಯ ಕಾರಣಗಳೇನು?, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಶ್ಲೇಷಣಾ ವರದಿಯಲ್ಲಿ ಏನಿದೆ?, ಕೆರೆಗಳ ನೀರು ಕುಡಿಯುವುದಕ್ಕೆ ಏಕೆ ಯೋಗ್ಯವಾಗಿಲ್ಲ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಸಿಲಿಕಾನ್ ಸಿಟಿ ಕೆರೆಗಳ ಕುರಿತು ಕೆಎಸ್ಪಿಸಿಬಿ ರಿಪೋರ್ಟ್
ರಾಜ್ಯ ರಾಜಧಾನಿಯಲ್ಲಿ ಇರುವ ಕೆರೆಗಳ ಸ್ವಚ್ಛತೆ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವರದಿಯೊಂದನ್ನು ಸಿದ್ಧಪಡಿಸಿದೆ. ಕೆಎಸ್ಪಿಸಿಬಿ ತಯಾರಿಸಿದ ವಿಶ್ಲೇಷಣಾ ವರದಿಯ ಪ್ರಕಾರ ಬೆಂಗಳೂರಿನ ಒಂದೇ ಒಂದು ಕೆರೆಯ ನೀರು ಕೂಡಾ ಕುಡಿಯುವುದಕ್ಕೆ ಯೋಗ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಈ ಜಲಮೂಲಗಳ ಮಾಲಿನ್ಯಕ್ಕೆ ಸಂಸ್ಕರಿಸದ ಒಳಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯವನ್ನು ಕೆರೆಗಳಿಗೆ ಬಿಡುತ್ತಿರುವುದೇ ಮುಖ್ಯ ಕಾರಣ ಎಂದು ಗೊತ್ತಾಗಿದೆ.
ಬೆಂಗಳೂರಿನ ಕೆರೆಗಳ ಕಥೆ ಹೇಗಿದೆ?
ಕೆಎಸ್ಪಿಸಿಬಿ ಅಧ್ಯಯನದ ಪ್ರಕಾರ ಬೆಂಗಳೂರಿನಲ್ಲಿರುವ 105 ಕೆರೆಗಳಲ್ಲಿ ಯಾವುದನ್ನೂ A, B ಅಥವಾ C ವರ್ಗ ಎಂದು ವರ್ಗೀಕರಿಸಲಾಗಿಲ್ಲ. ಏಕೆಂದರೆ ಸಿಲಿಕಾನ್ ಸಿಟಿಯ ಕೆರೆಗಳಲ್ಲಿ 65 D ವರ್ಗಕ್ಕೆ ಸೇರಿದರೆ 36 ಕೆರೆಗಳು E ವರ್ಗಕ್ಕೆ ಸೇರಿವೆ ಎಂದು ವರ್ಗೀಕರಿಸಲಾಗಿದೆ. ಉಳಿದ ನಾಲ್ಕು ಕೆರೆಗಳ ಜಲಮೂಲಗಳು ಬತ್ತಿ ಹೋಗಿದ್ದರಿಂದ ನೀರಿನ ಮಾದರಿ ತೆಗೆಯಲು ಸಾಧ್ಯವಾಗಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಯಾವ ರೀತಿ ಕೆರೆಯ ನೀರು ಕುಡಿಯಲು ಯೋಗ್ಯವಾಗಿರುವುದು?
ಕೆಎಸ್ಪಿಸಿಬಿ ಮೌಲ್ಯಮಾಪನದ ಪ್ರಕಾರ, A ವರ್ಗದ ನೀರು ಸಾಂಪ್ರದಾಯಿಕ ಸಂಸ್ಕರಣೆಯಿಲ್ಲದೆ ಕುಡಿಯಲು ಸೂಕ್ತವಾಗಿರುತ್ತದೆ. ಆದರೆ ವರ್ಗ B ನೀರು ಹೊರಾಂಗಣ ಸ್ನಾನಕ್ಕೆ ಸೂಕ್ತವಾಗಿರುತ್ತದೆ. ವರ್ಗ D ಎಂದು ವರ್ಗೀಕರಿಸಲಾದ ಸರೋವರದ ನೀರನ್ನು ಮೀನುಗಾರಿಕೆ ಮತ್ತು ಪ್ರಾಣಿಗಳಿಗೆ ಬಳಸಬಹುದು. ಅದೇ ರೀತಿ ವರ್ಗ E ನೀರು ನೀರಾವರಿಗೆ ಸೂಕ್ತವಾಗಿದೆ. ಬೆಂಗಳೂರಿನಲ್ಲಿ ಪ್ರತಿನಿತ್ಯ 1458.6 ಮಿಲಿ ಲೀಟರ್ ಕೊಳಚೆ ನೀರನ್ನು ಉತ್ಪಾದಿನೆ ಆಗುತ್ತದೆ ಎಂದು ಸರ್ಕಾರಿ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಶೇ.50ರಷ್ಟು ನೀರು ಸಂಸ್ಕರಣೆ
ಬೆಂಗಳೂರಿನಲ್ಲಿ ಪ್ರತಿದಿನ ಉತ್ಪಾದನೆಯಾಗುವ 1,456 ಮಿಲಿ ಲೀಟರ್ ಕೊಳಚೆ ನೀರಿನಲ್ಲಿ ಕೇವಲ ಶೇ.50ರಷ್ಟು ಕೊಳಚೆ ನೀರನ್ನು ಮಾತ್ರ ಸಂಸ್ಕರಣಾ ಘಟಕಗಳಲ್ಲಿ ಸಂಸ್ಕರಿಸಲಾಗುತ್ತಿದೆ. ಆದ್ದರಿಂದ, ತಜ್ಞರ ಪ್ರಕಾರ, ಶೇ.80 ಕೊಳಚೆನೀರು ಮತ್ತು ಶೇ.20 ಕೈಗಾರಿಕಾ ತ್ಯಾಜ್ಯಗಳು ಸರೋವರ ಮಾಲಿನ್ಯಕ್ಕೆ ಮುಖ್ಯ ಕಾರಣಗಳಾಗಿವೆ. ಆಗಸ್ಟ್ 31ರಂದು ಕರ್ನಾಟಕ ಸರ್ಕಾರದ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದ ಬೆಂಗಳೂರು ನಗರ ಜಿಲ್ಲಾ ಪರಿಸರ ಯೋಜನೆ ಪ್ರಕಾರ, ನಗರ ಸ್ಥಳೀಯ ಸಂಸ್ಥೆಗಳು ತ್ಯಾಜ್ಯನೀರು ಸಾಗಿಸುವ ಚರಂಡಿಗಳು ಜಲಮೂಲಗಳೊಂದಿಗೆ ವಿಲೀನಗೊಳ್ಳದಂತೆ ನೋಡಿಕೊಳ್ಳಬೇಕು. ಈ ಕ್ರಿಯೆಗಳನ್ನು ಮಾರ್ಚ್ 31, 2023 ರೊಳಗೆ ನಿರ್ವಹಿಸಬೇಕಾಗಿದೆ.