ಗುಡ್ ನ್ಯೂಸ್: ಟಿಕೆಟ್ ದರ ಏರಿಕೆ ಇಲ್ಲ, ವಜಾಗೊಂಡ ಸಾರಿಗೆ ನೌಕರರ ನೇಮಕ
ಬೆಂಗಳೂರು, ಫೆಬ್ರವರಿ 10: ಕೋವಿಡ್ ನಂತರ ಜನತೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಈ ಸಂದರ್ಭದಲ್ಲಿಯೇ ಕೆಎಸ್ಆರ್ಟಿಸಿ ಬಸ್ ದರ ಹೆಚ್ಚಳ ಮಾಡಲಾಗುತ್ತಿದೆ ಎಂಬ ಸುದ್ದಿ ಇತ್ತು. ಸದ್ಯಕ್ಕೆ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳವಿಲ್ಲ. ಮುಷ್ಕರದ ವೇಳೆ ವಜಾಗೊಂಡಿದ್ದ ನೌಕರರನ್ನು ಮರು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಹೇಳುವ ಮೂಲಕ, ಸಾರಿಗೆ ಸಚಿವರು ಪ್ರಯಾಣಿಕರು ಹಾಗೂ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಇನ್ನು ಮುಂದೆ ಬಿಎಂಟಿಸಿ ನಿರ್ವಾಹಕ ಮತ್ತು ಚಾಲಕರಿಗೆ ಪ್ರತಿ ತಿಂಗಳು ಕಾಲಕಾಲಕ್ಕೆ ಸಂಬಳ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವರು, ಸರ್ಕಾರದ ವಿರುದ್ಧ ಪ್ರತಿಭಟನೆ, ಮುಷ್ಕರ ಮಾಡಿದವರನ್ನು ರಕ್ಷಣೆ ಮಾಡುವುದು ಕಷ್ಟ. ಸರ್ಕಾರದ ಬಗ್ಗೆ ನಿಮಗೆ ಗೌರವ ಇರಬೇಕು ಎಂದು ತಿಳಿಸಿದರು.

ಸಾರಿಗೆ ನೌಕರರು ಮುಷ್ಕರ ನಡೆಸುವುದು ಬೇಡ ಎನ್ನುವುದಿಲ್ಲ. ಆದರೆ, ಮುಷ್ಕರ ನಡೆಸುವ ಮೊದಲು ಸಂಬಂಧಪಟ್ಟ ಸಚಿವರು, ಸಿಎಂ ಜೊತೆ ಚರ್ಚಿಸಬೇಕು. ನಂತರ ಪ್ರತಿಭಟೆಯ ಹಾದಿ ಹಿಡಿಯಬೇಕು. ಇವೆಲ್ಲ ಆಗದೆ ಏಕಾಏಕಿ ಮುಷ್ಕರ ನಡೆದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈಗಾಗಲೇ 1500 ಅಮಾನತುಗೊಂಡ ಸಿಬ್ಬಂದಿಯನ್ನು ವಾಪಸ್ ಕರೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಆದರೆ, ವಜಾಗೊಂಡವರನ್ನು ವಾಪಸ್ ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ, ಮಾನವೀಯತೆಯ ದೃಷ್ಟಿಯಿಂದ ಮರು ನೇಮಕ ಆದೇಶ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 100 ಜನರಿಗೆ ನೇಮಕ ಮಾಡಲಾಗುತ್ತಿದೆ. ಉಳಿದವರಿಗೆ ಹಂತ ಹಂತವಾಗಿ ಮರು ನೇಮಕ ಮಾಡಲಾಗುತ್ತಿದೆ. ಈ ತಿಂಗಳ ಒಳಗೆ 700 ಮಂದಿಗೆ ನೇಮಕಾತಿ ನೀಡಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
ಈಗ ನೇಮಕಗೊಂಡವರು ಇನ್ನು ಮುಂದೆ ಮುಷ್ಕರಕ್ಕೆ ಹೋಗಬಾರದು ಎಂದು ಷರತ್ತು ವಿಧಿಸಲಾಗಿದೆ. ನೌಕರರು ಮುಷ್ಕರಕ್ಕೆ ಹೋದರೆ ನೌಕರಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ ಸಚಿವರು, ಸದ್ಯಕ್ಕೆ ಕ್ರಿಮಿನಲ್ ಕೇಸ್ ಎದುರಿಸುತ್ತಿರುವರನ್ನು ನೇಮಕ ಮಾಡಿಕೊಳ್ಳಲಾಗುವುದಿಲ್ಲ ಎಂದು ತಿಳಿಸಿದರು.
ಸಾರಿಗೆ ನಿಗಮ ಚಾಲಕರನ್ನು ಕೈಬಿಡಲ್ಲ
ಎಲೆಕ್ಟ್ರಿಕ್ ಬಸ್ ಬಂದರೂ ಸಾರಿಗೆ ನಿಗಮದ ಚಾಲಕರನ್ನು ಕೈ ಬಿಡುವುದಿಲ್ಲ. ಎಷ್ಟೇ ಎಲೆಕ್ಟ್ರಿಕ್ ಬಸ್ ಬಂದರೂ ಇರುವ ಚಾಲಕರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲೆಕ್ಟ್ರಿಕ್ ಬಸ್ಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಜನರು ಬಿಎಂಟಿಸಿಯಲ್ಲಿ ಸಂಚಾರ ಮಾಡುತ್ತಿಲ್ಲ, ಈಗ ಬಿಎಂಟಿಸಿ ದರ ಹೆಚ್ಚಳ ಮಾಡುವ ಪ್ರಸ್ತಾಪ ಇಲ್ಲ. ನಮ್ಮದು ಸೇವಾ ಮನೋಭಾವನೆ ಇರುವ ಇಲಾಖೆ. ಸದ್ಯಕ್ಕೆ ದರ ಹೆಚ್ಚಳ ಇಲ್ಲ ಎಂದು ತಿಳಿಸಿದ ಅವರು, ಶ್ರೀನಿವಾಸ ಮೂರ್ತಿ ಸಮಿತಿ ವರದಿ ಇನ್ನೂ ಸರ್ಕಾರದ ಕೈಗೆ ಬಂದಿಲ್ಲ. ನಂತರ ಮಾಹಿತಿ ಪಡೆದು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ವೋಲ್ವೊ ಬಸ್ಗಳನ್ನು ನಗರದಲ್ಲಿ ಸಂಚಾರಕ್ಕೆ ನೀಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ಬರುತ್ತಿದೆ. 800 ಬಸ್ಗಳನ್ನು ಸಂಚರಿಸಲು ನೀಡಲಾಗುವುದು ಎಂದು ಹೇಳಿದರು.
ನಾಳೆ 200 ನೌಕರರಿಗೆ ಮರುನೇಮಕಾತಿ
200 ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ನಾಳೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಬಿಎಂಟಿಸಿ ಎಂಡಿ ಅನ್ನುಕುಮಾರ್ ಹೇಳಿದ್ದಾರೆ. ಕೊರೊನಾದಲ್ಲಿ ಮೃತರಾದ ನೌಕರರ ಕುಟುಂಬಗಳಿಗೆ ಪರಿಹಾರ ಒದಗಿಸಲಾಗಿದೆ. ಅನುಚಿತವಾಗಿ ವರ್ತಿಸಿದ 74 ಜನರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ತಿಳಿಸಿದ ಅವರು, ಬಿಎಂಟಿಸಿ ಸಂಸ್ಥೆ ಪ್ರತಿ ದಿನ 2 ಕೋಟಿ ನಷ್ಟ ಅನುಭವಿಸುತ್ತಿದೆ. ನೌಕರರು ಸಂಸ್ಥೆಯ ನಿಯಮ ಪಾಲಿಸಬೇಕು. ಯಾವುದೇ ಸಂಘ ಸಂಸ್ಥೆಗಳ ಜೊತೆ ಹೋರಾಟ ನಡೆಸುವುದು ಸರಿಯಲ್ಲ ಎಂದು ವಿವರಿಸಿದರು.
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಗಾಗಿ ಹೆಚ್ಚಳ ಮಾಡುವಂತೆ ಹೋರಾಟ ಆರಂಭ ಮಾಡಿದ್ದು, ನಾನು ಈಗಾಗಲೇ ಸರ್ಕಾರ ಸುಭಾಷ್ ಅಡಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೇನೆ. ನಮ್ಮ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಲು ಬದ್ಧವಾಗಿದ್ದು, ಪ್ರತಿಭಟನೆ ವಾಪಸ್ ಪಡೆಯುವಂತೆ ಸ್ವಾಮೀಜಿ ಜೊತೆ ಮಾತನಾಡುತ್ತೇನೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.












Click it and Unblock the Notifications