ಆರಂಭವಾದ ಆರೇ ದಿನದಲ್ಲಿ ಭಕ್ತರಿಗೆ ನಿರ್ಬಂಧ ಹೇರಿದ ದೇವಾಲಯ
ಬೆಂಗಳೂರು, ಜುಲೈ 10: ಕಳೆದ ಸೋಮವಾರ (ಜುಲೈ 5) ಲಾಕ್ ಡೌನ್ ಬಹುತೇಕ ಸಡಿಲಗೊಳಿಸಿದ ನಂತರ, ಮನೆಯಲ್ಲಿ ಬಂಧಿತರಂತಾಗಿದ್ದ ಜನರು, ದೇವಾಲಯ, ಪ್ರವಾಸಿ ತಾಣಗಳಿಗೆ ದಾಂಗುಡಿ ಇಡುತ್ತಿದ್ದಾರೆ.
ಜನರು ಸಾಮಾಜಿಕ ಅಂತರ, ಕೋವಿಡ್ ನಿಯಮಗಳನ್ನು ಪಾಲಿಸದೇ ಇರುವುದು ಸರಕಾರಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ. ಜನರು ಸಹಕರಿಸದಿದ್ದಲ್ಲಿ ಮತ್ತೆ ಲಾಕ್ ಡೌನ್ ಹೇರಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಎಚ್ಚರಿಕೆಯನ್ನು ನೀಡಿದ್ದಾಗಿದೆ.
ಜುಲೈ ಐದರಿಂದ ದೇವಾಲಯ ತೆರೆಯಲು ಸರಕಾರ ಅವಕಾಶ ನೀಡಿದೆ. ನಾಡಿನ ಪ್ರಮುಖ ದೇವಾಲಯಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ. ಅದೇ ರೀತಿ, ನಗರದ ಕನಕಪುರ ರಸ್ತೆಯಲ್ಲಿರುವ, ಐತಿಹಾಸಿಕ ಬನಶಂಕರಿ ದೇವಾಲಯ.

ಆಷಾಢ ಮಾಸದ ಮೊದಲ ಶುಕ್ರವಾರದ (ಮಣ್ಣೆತ್ತಿನ ಅಮಾವಾಸ್ಯೆ) ದಿನ ಬನಶಂಕರಿ ದೇವಾಲಯಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಹಾಗಾಗಿ, ದೇವಾಲಯದ ಆಡಳಿತ ಮಂಡಳಿಗೂ ಕೋವಿಡ್ ನಿಯಮಗಳನ್ನು ಪಾಲಿಸಲು ಸಾಧ್ಯವಾಗಲಿಲ್ಲ. ದೇವಾಲಯದ ಒಳಗೆ ಮತ್ತು ಹೊರಗೆ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಇದರಿಂದ ಎಚ್ಚೆತ್ತುಕೊಂಡ ಬೆಂಗಳೂರು ಜಿಲ್ಲಾಡಳಿತ ಮತ್ತೆ ಭಕ್ತರ ಪ್ರವೇಶಕ್ಕೆ ವಾರದಲ್ಲಿ ಮೂರು ದಿನ ನಿರ್ಬಂಧ ಹೇರಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿಗಳು ಭಕ್ತರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಆಷಾಢ ಮಾಸದ ಪ್ರತೀ ಭಾನುವಾರ, ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ಭಕ್ತರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಉಳಿದ ದಿನಗಳಲ್ಲಿ ಬೆಳಗ್ಗೆ ಏಳರಿಂದ ಮಧ್ಯಾಹ್ನ ಹನ್ನೆರಡರವರೆಗೆ ಮತ್ತು ಸಂಜೆ ನಾಲ್ಕರಿಂದ ರಾತ್ರಿ 7.30ರ ವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.












Click it and Unblock the Notifications