ಡಿಪೋ ಹತ್ತಿರವಿದ್ದರೂ ಬಿಎಂಟಿಸಿ ಬಸ್ ಇಲ್ಲ, ಜನರ ಆಕ್ರೋಶ
ಬೆಂಗಳೂರು, ಆಗಸ್ಟ್ 21 : ಬೆಂಗಳೂರಿನ ಸದರಮಂಗಳದ ಜನರು ಬಿಎಂಟಿಸಿ ಬಸ್ ಸೌಕರ್ಯವಿಲ್ಲದೆ ಪರದಾಡುತ್ತಿದ್ದಾರೆ. ಸಂಚಾರಕ್ಕಾಗಿ ಶಾಲಾ ಮಕ್ಕಳು, ಹಿರಿಯ ನಾಗರಿಕರು ಪ್ರತಿದಿನ ಖಾಸಗಿ ವಾಹನಗಳಿಗೆ ನೂರಾರು ರೂಪಾಯಿ ವ್ಯಯಿಸುತ್ತಿದ್ದಾರೆ.
ಬಿಎಂಟಿಸಿಯಲ್ಲಿ 6 ಸಾವಿರಕ್ಕೂ ಅಧಿಕ ಬಸ್ಗಳಿವೆ. ಹಲವು ಮಾರ್ಗಗಳಲ್ಲಿ ಬಸ್ ಖಾಲಿಯಾಗಿ ಸಂಚಾರ ನಡೆಸುತ್ತದೆ. ಆದರೆ, ಮಹದೇವಪುರ ವಿಧಾನಸಭಾ ವ್ಯಾಪ್ತಿಗೆ ಒಳಪಡುವ ಸದರಮಂಗಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಬಸ್ ಸೌಲಭ್ಯವಿಲ್ಲದಂತಾಗಿದೆ.
ಸದರಮಂಗಳ, ಕೊಡಿಗೆಹಳ್ಳಿ, ಅಯ್ಯಪ್ಪ ನಗರ, ದೇವಸಂದ್ರ ಮಾರ್ಗದಲ್ಲಿ ಬಸ್ ಓಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ. ಈ ಕುರಿತು ಬಿಎಂಟಿಸಿಗೆ ಹಲವು ಬಾರಿ ಮನವಿಯನ್ನು ಸಲ್ಲಿಸಲಾಗಿದೆ. ಆದರೆ, ಅವುಗಳು ಕಸದ ಡಬ್ಬಿ ಸೇರಿವೆ.

ವೈಟ್ ಫೀಲ್ಡ್ ರೈಲು ನಿಲ್ದಾಣದಿಂದ 3, ಐಟಿಪಿಎಲ್ನಿಂದ 9, ಕೆ. ಆರ್. ಪುರಂನಿಂದ 9, ಹೂಡಿಯಿಂದ 3 ಕಿ. ಮೀ. ದೂರದಲ್ಲಿ ಈ ಪ್ರದೇಶಗಳಿವೆ. ಆದರೆ, ಬಸ್ ಸೌಕರ್ಯವಿಲ್ಲದೆ ಜನರು ಪರದಾಡುತ್ತಿದ್ದಾರೆ. ಬೆಳಗ್ಗೆ 7.30ಕ್ಕೆ ಒಂದು ಬಸ್ ಹೊರತುಪಡಿಸಿದರೆ ಬೇರೆ ಯಾವ ಬಸ್ ಸಹ ಇಲ್ಲಿಗೆ ಆಗಮಿಸುವುದಿಲ್ಲ.
ಬಸ್ ಸೌಲಭ್ಯವಿಲ್ಲದ ಕಾರಣ ವಾಹನಗಳನ್ನು ಜನರು ಅವಲಂಬನೆ ಮಾಡಬೇಕಾದ ಪರಿಸ್ಥಿತಿ ಇದೆ. ಒಂದು ಕಡೆ ಸಂಚಾರ ನಡೆಸಲು ಆಟೋಗೆ 30 ರಿಂದ 60 ರೂ.ಗಳನ್ನು ಜನರು ಪಾವತಿಸಬೇಕಿದೆ. ಸದರಮಂಗಳದಲ್ಲಿ ಬಿಎಂಟಿಸಿ ಬಸ್ ಡಿಪೋ ಇದೆ. ಆದರೆ, ಅದು ಉಪಯೋಗಕ್ಕೆ ಬಾರದಂತೆ ಕಸ ತುಂಬಿಕೊಂಡಿದೆ.
ಹೂಡಿ ಮತ್ತು ವೈಟ್ ಫೀಲ್ಡ್ ನಡುವೆ ಹೊಸ ರಸ್ತೆ ಕಾಮಗಾರಿ ಆರಂಭವಾಗಿತ್ತು. ಆದರೆ, ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಾಗ ಕಾಮಗಾರಿ ಸ್ಥಗಿತವಾಯಿತು. ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಕಾಮಗಾರಿ ಆರಂಭವಾಗಿಲ್ಲ, ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ.
ಈ ರಸ್ತೆ ಕಾಮಗಾರಿ ಆರಂಭವಾದರೆ ಬಸ್ ಸೌಲಭ್ಯವೂ ಹೆಚ್ಚಾಗಲಿದೆ. ವೈಟ್ ಫೀಲ್ಡ್, ಸಾಯಿಬಾಬಾ ಆಶ್ರಮ ಮುಂತಾದ ಸ್ಥಳಗಳಿಗೆ ತೆರಳಲು ಹತ್ತಿರದ ದಾರಿ ಆಗಲಿದೆ. ಬಸ್ ಸೌಲಭ್ಯದ ಬಗ್ಗೆ ಬಿಎಂಟಿಸಿ, ರಸ್ತೆ ಕಾಮಗಾರಿ ಬಗ್ಗೆ ಬಿಬಿಎಂಪಿ ಗಮನಹರಿಸಲಿ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.












Click it and Unblock the Notifications