ಬೆಂಗಳೂರು-ಮೈಸೂರು ರಸ್ತೆ ಸಮಸ್ಯೆ: ರಸ್ತೆ ಯೋಜನೆಗಳ ಕುರಿತು ನಿತಿನ್ ಗಡ್ಕರಿ ಪ್ರತಿಕ್ರಿಯೆ
ಬೆಂಗಳೂರು ಸೆಪ್ಟಂಬರ್ 09: ''ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭಾರಿ ಮಳೆಯಿಂದಾಗಿ ಒಳಚರಂಡಿಗೆ ನೀರು ಹೋಗದೇ ಸಮಸ್ಯೆ ಆಗಿದೆ. ಆದಷ್ಟು ಶೀಘ್ರವೇ ಸಮಸ್ಯೆ ಬಗೆಹರಿಸಲಿದ್ದೇವೆ. ಕಾಮಗಾರಿಯಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ'' ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರವಸೆ ತಿಳಿಸಿದರು.
ಬೆಂಗಳೂರಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಭೂ ಹೆದ್ದಾರಿ ಇಲಾಖೆ ಆಯೋಜಿಸಿರುವ 'ಮಂಥನ ರಾಷ್ಟ್ರೀಯ ವಿಚಾರ ಸಂಕಿರಣ'ದಲ್ಲಿ ಮಾತನಾಡಿದ ಅವರು, ಐದು ದಶಕದಲ್ಲೇ ಈ ವರ್ಷ ಅತ್ಯಧಿಕ ಮಳೆ ದಾಖಲಾಗಿದೆ. ಹೀಗಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಮಸ್ಯೆ ಉಂಟಾಗಿರುವುದು ನಿಜ. ಹೀಗಾಗಿಯೇ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಬಗ್ಗೆ ಅಧಿಕಾರಿಗಳ ಬಳಿ ವರದಿ ಕೇಳಿದ್ದೇನೆ. ಹೆದ್ದಾರಿಗಳಲ್ಲಿ ಮುಂದೆ ಇಂತಹ ಸಮಸ್ಯೆ ಉದ್ಭವಿಸದಂತೆ ಕ್ರಮ ಕೈಗೊಳ್ಳಲಾಗುವುದು. ಗುಣಮಟ್ಟದ ಕಾಮಗಾರಿ ವಿಚಾರದಲ್ಲಿ ರಾಜಿ ಇಲ್ಲ ಎಂದು ಭರವಸೆ ಅವರು ನೀಡಿದರು.
Breaking; ಬೆಂಗಳೂರು-ತುಮಕೂರು ಹೆದ್ದಾರಿ ಸರ್ವೀಸ್ ರಸ್ತೆ ಜಲಾವೃತ
ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಬಹುತೇಕ ಸಂಪೂರ್ಣವಾಗಿದೆ. ಬಾಕಿ ಸಣ್ಣಪುಟ್ಟ ಕೆಲಸಗಳು ಮುಗಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿ ಆದಷ್ಟು ಶೀಘ್ರವೇ ಸಂಚಾರ ಮುಕ್ತ ಮಾಡಲಾಗುವುದು ಎಂದರು.
ಸಕಲೇಶಪುರ-ಮಂಗಳೂರು ಮಧ್ಯದ ಶಿರಾಡಿ ಘಾಟ್ ಕಾಮಗಾರಿ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ನನ್ನೊಂದಿಗೆ ಚರ್ಚಿಸಿದ್ದಾರೆ. ಅಲ್ಲಿ 15,000ಕೋಟಿ ವೆಚ್ಚದಲ್ಲಿ ಟನಲ್ ಕಾಮಗಾರಿ ಆರಂಭಿಸುವ ಕುರಿತು ಮಾತುಕತೆ ಆಗಿದೆ ಎಂದು ತಿಳಿಸಿದರು.
ನೆರೆ ರಾಜ್ಯ ಸಂಪರ್ಕಕ್ಕೆ ಗ್ರೀನ್ ಫಿಲ್ಡ್ ಕಾರಿಡಾರ್
ಈ ಕಾರ್ಯಕ್ರಮದ ಭಾಗವಾಗಿ ಕರ್ನಾಟಕ ಕುರಿತಂತೆ ಹಲವು ವಿಚಾರಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ. ಕರ್ನಾಟಕ-ತಮಿಳುನಾಡು ಅಂತರ್ ರಾಜ್ಯ ಸಂಪರ್ಕಕ್ಕೆ 260 ಕಿ.ಮೀಟರ್ ಉದ್ದದ ಗ್ರೀನ್ ಫೀಲ್ಡ್ ಕಾರಿಡಾರ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇನ್ನೂ ಬೆಂಗಳೂರು- ಕಡಪ-ವಿಜಯವಾಡ ಹೆದ್ದಾರಿ ನಿರ್ಮಿಸುವ ಬಗ್ಗೆ ಚರ್ಚೆ ಆಗಿದೆ. ಈ ಕುರಿತು ಭೂಮಿ ಸ್ವಾಧೀನ ಕಾರ್ಯ ನಡೆಯುತ್ತಿದೆ ಎಂದು ಚರ್ಚೆಯ ಹಲವು ವಿಚಾರಗಳನ್ನು ಗಡ್ಕರಿ ಬಿಚ್ಚಿಟ್ಟರು.
ಬೆಂಗಳೂರು ಸ್ಯಾಟಲೈಟ್ ಕಾರಿಡಾರ್ಗೆ 16 ಸಾವಿರ ಕೋಟಿ ವಿನಿಯೋಗಿಸಲಾಗುತ್ತಿದೆ. ಮುಂಬೈ-ಬೆಂಗಳೂರು ಮಧ್ಯೆ ಎಕ್ಸ್ಪ್ರೆಸ್ ಹೈವೇ ಮಾಡುತ್ತಿದ್ದು, ಇದರಿಂದ ಮುಂಬೈನಿಂದ ಬೆಂಗಳೂರಿಗೆ ಕೇವಲ ಆರು ಗಂಟೆಯಲ್ಲಿ ಬರಬಹುದು. ಅದೇ ರೀತಿ ಬೃಹತ್ ನಗರಗಳಾದ ಚೆನೈ-ಬೆಂಗಳೂರು, ಮುಂಬೈ-ಪುಣೆ ಹೆದ್ದಾರಿಗಳು ತಲೆ ಎತ್ತಲಿವೆ. ಬೆಂಗಳೂರಿನ ಸಂಚಾರ ದಟ್ಟಣೆ ಕುರಿತು ಅಧ್ಯಯನ ನಡೆದಿದೆ ಎಂದರು.
ತುಮಕೂರು ರಸ್ತೆ ಫ್ಲೈಓವರ್ ಸಮಸ್ಯೆ ಪರಿಹಾರಕ್ಕೆ ಸೂಚನೆ
ರಾಜ್ಯ ರಾಜಧಾನಿಯಲ್ಲಿ ರಿಂಗ್ ರಸ್ತೆ ಮಾಡಲಿದ್ದೇವೆ. ವಿಶ್ವದ ತಜ್ಞರ ಜೊತೆ ಚರ್ಚೆ ಮಾಡಿದ್ದು, ಬೆಂಗಳೂರಿನಲ್ಲಿ ಪೈಲೆಟ್ ಪ್ರಾಜೆಕ್ಟ್ ಮಾಡಲು ಚಿಂತನೆ ನಡೆದಿದೆ. ಯಶಸ್ವಿಯಾಗುವ ನಿರೀಕ್ಷೆ ಇದೆ. ಬೆಂಗಳೂರು ವಿಕಾಸಕ್ಕೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದೇನೆ. ಎಲ್ಲರೂ ಸೇರಿ ಬೆಂಗಳೂರು ಬೆಳವಣಿಗೆ ಮಾಡಬೇಕಿದೆ. ಬೆಂಗಳೂರು ಬಹಳ ದೊಡ್ಡ ಆರ್ಥಿಕ ಕೇಂದ್ರವಾಗಿದೆ. ವಿಶ್ವದ ಬಹಳಷ್ಟು ಸಂಸ್ಥೆಗಳು ಇಲ್ಲಿ ನೆಲಯೂರಿವೆ. ತುಮಕೂರು ರಸ್ತೆ ಫ್ಲೈಓವರ್ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ವಿವರಿಸಿದರು.