ಸಬ್ ಅರ್ಬನ್ ರೈಲಿನ ಬಗ್ಗೆ ನಿರ್ಮಲಾ ಸೀತಾರಾಮನ್ ಏನಂದ್ರು?
ಬೆಂಗಳೂರು, ಫೆಬ್ರವರಿ 17: ಸೋಮವಾರ ಜನಪರ ಮುಂಗಡಪತ್ರ ಕುರಿತಂತೆ ಉದ್ಯಮಿಗಳು ಹಾಗೂ ಆಯ್ದ ಗಣ್ಯರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲಿ ಸಂವಾದ ನಡೆಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಬೆಂಗಳೂರು ಸಬ್ ಅರ್ಬನ್ ರೈಲ್ವೆಗೆ ಕೇಂದ್ರ ಸರ್ಕಾರ ಶೇಕಡಾ 20 ಹಾಗೂ ರಾಜ್ಯ ಸರ್ಕಾರ ಶೇಕಡಾ 20 ವೆಚ್ಚವಭರಿಸುತ್ತವೆ. ಉಳಿದ ಶೇಕಡಾ 60ರಷ್ಟನ್ನು ಹೊರ ಸಾಲದ ಮೂಲಕ ಹೊಂದಾಣಿಕೆ ಮಾಡಲಾಗುತ್ತದೆ ಅದಕ್ಕೂ ಕೂಡ ಕೇಂದ್ರ ಸರ್ಕಾರ ಗ್ಯಾರಂಟಿ ಕೊಡಲು ಸಿದ್ದವಿದೆ' ಎಂದು ಹೇಳಿದರು.
ಮುಂಗಡಪತ್ರ ಕುರಿತಂತೆ ಉದ್ಯಮಿಗಳು ಹಾಗೂ ಆಯ್ದ ಗಣ್ಯರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ನಡೆಸಿದ ಸಂವಾದ ಸಭೆಯಲ್ಲಿ ಬೆಂಗಳೂರಿನ ಅನೇಕ ಉದ್ಯಮಿಗಳು ಪಾಲ್ಗೊಂಡು ಸಲಹೆ ನೀಡಿದರು

ಕೆಲಸ ಮಾಡಬೇಕಾಗಿರುವುದು ನನ್ನ ಜವಾಬ್ದಾರಿ
"ಮಾರ್ಚ್ 31ರಂದು ಲೋಕಸಭೆಯಲ್ಲಿ ಅನುಮೋದನೆಗೊಂಡ ಬಳಿಕ ಕೇಂದ್ರ ಹಣಕಾಸು ಸಚಿವಾಲಯ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತದೆ. ಹಿಂದಿನ ಬಜೆಟ್ ಗಳಲ್ಲಿ ಇದರ ಬಗ್ಗೆ ಯಾವ ಭರವಸೆ ನೀಡಲಾಗಿತ್ತೋ ನನಗೆ ಗೊತ್ತಿಲ್ಲ. ಆದರೆ ನನ್ನ ಬಜೆಟ್ ನಲ್ಲಿ ಘೋಷಿತವಾಗಿರುವ ಯೋಜನೆ ಜಾರಿಯಾಗುವಂತೆ ಮಾಡಬೇಕಾಗಿರುವುದು ನನ್ನ ಜವಾಬ್ದಾರಿ' ಎಂದರು.

ಲಕ್ಷ ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ
"ಜಿಎಸ್ ಟಿ ಸೇರಿದಂತೆ ರಾಜ್ಯಗಳ ತೆರಿಗೆ ಪಾಲು ಬಾಕಿಯನ್ನು ಎರಡು ಕಂತುಗಳಲ್ಲಿ ವಿತರಿಸಲಾಗುತ್ತದೆ. 15 ನೇ ಹಣಕಾಸು ಆಯೋಗದಲ್ಲೂ ಕರ್ನಾಟಕಕ್ಕೆ ನೀಡಿರುವ ಅನುದಾನದ ಪ್ರಮಾಣ ನಿಶ್ಚಿತವಾಗಿ ಹೆಚ್ಚಳವಾಗಿದೆ. ನರೇಗಾ ಯೋಜನೆಯಡಿ ಯಾವುದೇ ಹಣ ಬಾಕಿ ಉಳಿಸಿಕೊಂಡಿಲ್ಲ. ಕರ್ನಾಟಕಕ್ಕೆ 2 ಲಕ್ಷ ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ' ಎಂದರು.

ಬ್ಯಾಂಕಿಂಗ್ ರೆಗ್ಯೂಲೇಷನ್ ಆಕ್ಟ್
"ಬ್ಯಾಂಕಿಂಗ್ ರೆಗ್ಯೂಲೇಷನ್ ಆಕ್ಟ್ ತಿದ್ದುಪಡಿಯಲ್ಲಿ ಸಹಕಾರ ಬ್ಯಾಂಕ್ ಗಳನ್ನೂ ತರಲಾಗುತ್ತಿದೆ. ಬ್ಯಾಂಕ್ ಎಂದು ಹೆಸರಿಟ್ಟುಕೊಂಡಿರುವ ಎಲ್ಲ ಹಣಕಾಸು ಸಂಸ್ಥೆಗಳೂ ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಇದರಿಂದಾಗಿ ಆ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು ಆತಂಕ ಪಡಬೇಕಾಗಿಲ್ಲ. ಅವರ ಠೇವಣಿ ಹಣದ ಜವಾಬ್ದಾರಿ ಆರ್ ಬಿಐ ನಿರ್ವಹಿಸುತ್ತದೆ. ಬಿಎಸ್ ಎನ್ ಎಲ್ ಖಾಸಗೀಕರಣದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ' ಎಂದರು.

ಬೆಲೆ ಏರಿಕೆ ನಿಯಂತ್ರಣದಲ್ಲಿದೆ
"ದೇಶಾದ್ಯಂತ ಬಜೆಟ್ ಬಗ್ಗೆ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಪ್ರಮುಖವಾಗಿ ಬಜೆಟ್ ನ ಧ್ಯೇಯೋದ್ದೇಶಗಳನ್ನು ಉದ್ಯಮಿಗಳು ಹಾಗೂ ಪ್ರಮುಖರಿಗೆ ತಲುಪಿಸುವುದು ಆಗಿದೆ. ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶೀಘ್ರ ಹಾಳಾಗುವ ಕೆಲವು ಕೃಷಿ ಉತ್ಪನ್ನಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಉತ್ಪನ್ನಗಳ ಬೆಲೆ ಏರಿಕೆ ನಿಯಂತ್ರಣದಲ್ಲಿದೆ' ಎಂದು ಹೇಳಿದರು.












Click it and Unblock the Notifications