ಶಶಿಯನ್ನು ಜೈಲಲ್ಲಿ ಭೇಟಿ ಮಾಡಿದ ತಂಬಿ, ದಿನಕರನ್
ಬೆಂಗಳೂರು, ಜೂನ್ 20 : ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರಿಗೆ ಬೆಂಬಲ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆಯ ಟಿಟಿವಿ ದಿನಕರನ್, ತಂಬಿದುರೈ ಮುಂತಾದವರು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ನಟರಾಜನ್ ಅವರನ್ನು ಮಂಗಳವಾರ ಸಂಧಿಸಿದ್ದಾರೆ.
ಶಶಿಕಲಾ ಅವರು ಜೈಲಿನಲ್ಲಿ ರಾಗಿ ಬೀಸುತ್ತಿದ್ದರೂ ಅಲ್ಲಿಯೇ ಕುಳಿತು ತಮಿಳುನಾಡಿನ ರಾಜಕಾರಣವನ್ನು ನಿಯಂತ್ರಿಸುತ್ತಿದ್ದಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಇದಕ್ಕಿಂತ ನಾಚಿಕೆಗೇಡಿನ ಸಂಗತಿಯೇನೆಂದರೆ, ನಾಯಕರೆನಿಸಿಕೊಂಡಿರುವ ಇವರು ಜೈಲಿನಲ್ಲಿರುವ ನಾಯಕಿಯ ಭೇಟಿಯಾಗಿ ಸಮ್ಮತಿ ಪಡೆದುಕೊಳ್ಳುವುದು.

ಇವರಲ್ಲಿ ತಂಬಿದುರೈ ಲೋಕಸಭೆಯ ಉಪಸಭಾಧ್ಯಕ್ಷರಾಗಿದ್ದರೆ, ಟಿಟಿವಿ ದಿನಕರನ್ ಅವರು ಶಶಿಕಲಾ ನಟರಾಜನ್ ಅವರ ಸಹೋದರ ಸಂಬಂಧಿ ಮತ್ತು ಎಐಎಡಿಎಂಕೆ ಪಕ್ಷದ ಡೆಪ್ಯುಟಿ ಪ್ರಧಾನ ಕಾರ್ಯದರ್ಶಿ. ಇವರ ವಿರುದ್ಧ ಜಾರಿ ನಿರ್ದೇಶನಾಲಯ ಮನಿ ಲಾಂಡ್ರಿಂಗ್ ಕೇಸನ್ನು ಜಡಿದಿದೆ.
ಶಶಿಕಲಾ ನಟರಾಜನ್ ಮತ್ತು ಕುಟುಂಬವನ್ನು ಪಕ್ಷದ ರಾಜಕೀಯದಿಂದ ದೂರವಿಡಬೇಕು ಎಂದು ಕೆಲ ಶಾಸಕರು ತಂಬಿದುರೈ ಅವರನ್ನು ಸಂಪರ್ಕಿಸಿದ್ದರು. ಆದರೆ, ದಿನಕರನ್ ಅವರಿಗೆ ಬಹು ಶಾಸಕರ ಬೆಂಬಲವಿರುವುದರಿಂದ ತಂಬಿದುರೈ ಶಶಿಕಲಾ ನಟರಾಜನ್ ಅವರನ್ನು ಜೈಲಿನಲ್ಲಿ ಭೇಟಿಯಾಗಬೇಕಾಯಿತು.
ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರಿಗೆ ಭೇಷರತ್ ಬೆಂಬಲ ನೀಡುವ ಬಗ್ಗೆ ಎಐಎಡಿಎಂಕೆಯ ಎರಡೂ ಬಣಗಳು ಸದ್ಯದಲ್ಲೇ ನಿರ್ಧರಿಸಲಿವೆ. ಆದರೆ, ಎಐಎಡಿಎಂಕೆ ಪಕ್ಷದ ಬೆಂಬಲ ಪಡೆಯುವುದು ಎನ್ಡಿಎಗೆ ಅನಿವಾರ್ಯವೂ ಆಗಿದೆ.












Click it and Unblock the Notifications